'ತಾಲಿಬಾನ್‌ ಜೊತೆ ಹಿಂದುತ್ವದ ಹೋಲಿಕೆ ಹಿಂದೂ ಸಂಸ್ಕೃತಿಗೆ ತೋರಿದ ಅಗೌರವ': ಶಿವಸೇನೆ


ಮುಂಬೈ, ಸೆಪ್ಟೆಂಬರ್‌ 06: ಸಾಹಿತಿ ಜಾವೇದ್‌ ಅಖ್ತರ್‌ ತಾಲಿಬಾನ್‌ ಹಾಗೂ ಆರ್‌ಎಸ್‌ಎಸ್‌ ಗೂ ಹೋಲಿಕೆ ಮಾಡುವ ಮೂಲಕ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರ ಪಕ್ಷವಾಗಿರುವ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿರುವ ತಾಲಿಬಾನ್‌ ಬಗ್ಗೆ ಮಾತನಾಡಿದ್ದ ಉರ್ದು ಕವಿ ಜಾವೇದ್‌ ಅಖ್ತರ್‌, "ತಾಲಿಬಾನಿಗಳು ಅನಾಗರಿಕರು, ತಾಲಿಬಾನಿಗರ ಕಾರ್ಯ ಖಂಡನೀಯ, ಆದರೆ ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಎಲ್ಲವೂ ಒಂದೇ," ಎಂದಿದ್ದರು.

ಈ ವಿಚಾರದಲ್ಲಿ ತನ್ನ ಮುಖವಾಣಿ ಸಾಮ್ನಾದಲ್ಲಿ ಕವಿ ಜಾವೇದ್‌ ಅಖ್ತರ್‌ ವಿರುದ್ದ ವಾಗ್ದಾಳಿ ನಡೆಸಿರುವ ಶಿವಸೇನೆ, ಜಾವೇದ್‌ ಅಖ್ತರ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಹಾಗೂ ವಿಶ್ವ ಹಿಂದೂ ಪರಿಷತ್‌ ಅನ್ನು ತಾಲಿಬಾನ್‌ ಜೊತೆ ಹೋಲಿಕೆ ಮಾಡಿರುವುದನ್ನು ತೀವ್ರವಾಗಿ ಖಂಡನೆ ಮಾಡಿದೆ. "ತಾಲಿಬಾನ್‌ ಜೊತೆ ಹಿಂದುತ್ವವನ್ನು ಹೋಲಿಕೆ ಮಾಡಿದ್ದು ಹಿಂದೂ ಸಂಸ್ಕೃತಿಗೆ ತೋರಿದ ಅಗೌರವವಾಗಿದೆ," ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಮೂಲಕ ಹೇಳಿದೆ.

'ಪಾಂಚಜನ್ಯ ಆರ್‌ಎಸ್‌ಎಸ್‌ ಮುಖವಾಣಿಯಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲ' ಎಂದ ಸಂಘ

"ಇತ್ತೀಚೆಗೆ ಯಾರನ್ನೂ ಆದರೂ ಕೂಡಾ ತಾಲಿಬಾನ್ ಉಗ್ರ ಸಂಘಟನೆಯೊಂದಿಗೆ ಹೋಲಿಕೆ ಮಾಡುವುದು ನಮ್ಮ ಸಮಾಜಕ್ಕೆ ಹಾಗೂ ಮಾನವ ಕುಲಕ್ಕೆ ಒಡ್ಡುವ ದೊಡ್ಡ ಬೆದರಿಕೆಯಾಗಿದೆ. ಚೀನಾ ಹಾಗೂ ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳಿಗೆ ಯಾವುದೇ ಬೆಲೆಯಿಲ್ಲ. ಆದ್ದರಿಂದ ಈ ದೇಶಗಳು ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್‌ ಉಗ್ರರಿಗೆ ಸಹಾಯ ಮಾಡುತ್ತಿದೆ. ಈ ದೇಶಗಳಲ್ಲಿ ಯಾವುದೇ ಪ್ರಜಾಪ್ರಭುತ್ವವಿಲ್ಲ," ಎಂದು ಶಿವಸೇನೆ ಹೇಳಿದೆ. "ಭಾರತ ದೇಶವು ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶವಾಗಿದೆ, ಈ ದೇಶದಲ್ಲಿ ಎಲ್ಲಾ ನಾಗರಿಕರ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ಯ್ರಕ್ಕೆ ಮಾನ್ಯತೆ ನೀಡಲಾಗುತ್ತದೆ. ಹಾಗಿರುವಾಗ ಆರ್‌ಎಸ್‌ಎಸ್‌ ಅನ್ನು ತಾಲಿಬಾನ್‌ ಜೊತೆ ಹೋಲಿಕೆ ಮಾಡಿರುವುದು ತಪ್ಪು. ಭಾರತವು ಎಲ್ಲಾ ರೀತಿಯಲ್ಲೂ ಅಧಿಕ ಸಹಿಷ್ಣುತೆಯನ್ನು ಹೊಂದಿರುವ ದೇಶವಾಗಿದೆ," ಎಂದು ಶಿವಸೇನೆ ಅಭಿಪ್ರಾಯಿಸಿದೆ.

ಆರ್‌ಎಸ್‌ಎಸ್‌, ವಿಎಚ್‌ಪಿಗೆ ಹಿಂದುತ್ವ ಸಂಸ್ಕೃತಿ ಎಂದ ಶಿವಸೇನೆ

ಆರ್‌ಎಸ್‌ಎಸ್‌ ಹಾಗೂ ವಿಎಚ್‌ಪಿಗೆ ಹಿಂದುತ್ವ ಎಂಬುವುದು ಒಂದು ಸಂಸ್ಕೃತಿಯಾಗಿದೆ. ಹಿಂದೂಗಳ ಹಕ್ಕುಗಳು ಏನಿದೆ ಅದಕ್ಕೆ ಯಾವುದೇ ಹಾನಿ ಉಂಟಾಗಬಾರದು ಎಂಬುವುದನ್ನು ಆರ್‌ಎಸ್‌ಎಸ್‌ ಬಯಸುತ್ತದೆ. ಇನ್ನು ಹೆಚ್ಚಿಗೆ ಹೇಳಬೇಕಾದರೆ ಆರ್‌ಎಸ್‌ಎಸ್‌ ಮಹಿಳೆಯರ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಆದರೆ ಅಫ್ಘಾನಿಸ್ತಾನದಲ್ಲಿರುವ ಸ್ಥಿತಿ ಹೃದಯ ವಿದ್ರಾವಕವಾಗಿದೆ. ಹಲವಾರು ಮಂದಿ ತಾವು ಹುಟ್ಟಿ ಬೆಳೆದ ರಾಷ್ಟ್ರವಾದರೂ ಅಫ್ಘಾನಿಸ್ತಾನದಿಂದ ಬೇರೆ ದೇಶಕ್ಕೆ ಹೋಗಿದ್ದಾರೆ. ಹಾಗೆಯೇ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಮಹಿಳೆಯರ ಎಲ್ಲಾ ಹಕ್ಕುಗಳನ್ನು ನಾಶ ಮಾಡಲಾಗಿದೆ, ಅಲ್ಲಿ ಮಹಿಳೆಯರಿಗೆ ಯಾವುದೇ ಹಕ್ಕುಗಳು ಇಲ್ಲ," ಎಂದು ಶಿವಸೇನೆ ಹೇಳಿದೆ.

ನಾವು ತಾಲಿಬಾನ್‌ ಸಿದ್ಧಾಂತವನ್ನು ಒಪ್ಪಲ್ಲ: ಶಿವಸೇನೆ

"ಭಾರತದ ಹಲವಾರು ಜನರು ಜಾತ್ಯಾತೀತರಾಗಿದ್ದಾರೆ. ಪರಸ್ಪರ ಬೇರೆ ಧರ್ಮವನ್ನು ಗೌರವಿಸುತ್ತಾರೆ. ನಾವು ತಾಲಿಬಾನ್‌ ಸಿದ್ದಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಹಲವಾರು ಮಂದಿ ಹಿಂದೂಗಳು ಇದ್ದಾರೆ. ಭಾರತದಲ್ಲಿ ಬಹುಸಂಖ್ಯಾತರು ಹಿಂದೂಗಳು ಆಗಿದ್ದಾರೆ. ನಾವು ಜಾತ್ಯಾತೀತ ರಾಷ್ಟ್ರಕ್ಕೆ ಸೇರಿದವರು ಎಂದು ಹೇಳಲು ನಮಗೆ ಹೆಮ್ಮೆಯಿದೆ," ಎಂದು ಶಿವಸೇನೆ ಹೇಳಿದೆ. "ಹಿಂದುತ್ವದ ಹೆಸರಲ್ಲಿ ಹುಚ್ಚುತನವನ್ನು ನಾವು ಸಹಿಸಲಾರೆವು. ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಹೊಂದಿರುವವರನ್ನು ನೀವು ಹೇಗೆ ತಾಲಿಬಾನ್‌ ಚಿಂತನೆ ಹೊಂದಿರುವವರು ಎಂದು ಹೇಳಬಹುದು?," ಎಂದು ಪ್ರಶ್ನಿಸಿರುವ ಶಿವಸೇನೆ, "ನಾವು ಇದನ್ನು ಒಪ್ಪಲಾರೆವು," ಎಂದಿದೆ.

Advertisement
Advertisement

ಅಫ್ಘಾನಿಸ್ತಾನ: ಕುಟುಂಬದ ಎದುರೇ ಗರ್ಭಿಣಿ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ

Advertisement
ತಾಲಿಬಾನ್‌- ಆರ್‌ಎಸ್‌ಎಸ್‌: ಜಾವೇದ್‌ ಅಖ್ತರ್‌ ಹೇಳಿದ್ದೇನು?

"ತಾಲಿಬಾನ್‌ ಹಾಗೂ ಹಿಂದೂ ರಾಷ್ಟ್ರವನ್ನು ಬಯಸುವವರ ನಡುವೆ ನಾವು ಊಹಿಸಲಾಗದ ಹೋಲಿಕೆ ಇದೆ. ತಾಲಿಬಾನ್‌ಗೆ ಹೇಗೆ ಇಸ್ಲಾಮಿಕ್‌ ದೇಶ ಬೇಕೋ ಹಾಗೆಯೇ ಇಲ್ಲಿಯೂ ಕೆಲವರು ಹಿಂದೂ ರಾಷ್ಟ್ರವನ್ನು ಬಯಸಿದ್ದಾರೆ. ಈ ಜನರು ತಾಲಿಬಾನ್‌ನ ಅದೇ ಚಿಂತನೆಯನ್ನು ಹೊಂದಿದ್ದಾರೆ. ಅದು ಮುಸ್ಲಿಮರಾಗಲಿ, ಕ್ರೈಸ್ತರಾಗಲಿ, ಹಿಂದೂಗಳಾಗಲಿ," ಎಂದು ಜಾವೇದ್‌ ಅಖ್ತರ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಭಾರತ ಜಾತ್ಯಾತೀತವಾದ ದೇಶ. ಇಲ್ಲಿನ ಜನರು ಕೂಡಾ ಜಾತ್ಯಾತೀತರು ಆಗಿದ್ದಾರೆ. ಆದರೆ ಆರ್‌ಎಸ್‌ಎಸ್‌ ಹಾಗೂ ವಿಶ್ವ ಪರಿಷತ್‌ ಮೊದಲಾದವುಗಳನ್ನು ಬೆಂಬಲಿಸುವವರು 1930 ರ ಸಮಯದ ನಾಜಿಗಳ ಐಡಿಯಾಗಳನ್ನು ಹೊಂದಿದ್ದಾರೆ," ಎಂದು ಕೂಡಾ ಇದೇ ಸಂದರ್ಭದಲ್ಲಿ ಜಾವೇದ್‌ ಅಖ್ತರ್‌ ಹೇಳಿದ್ದಾರೆ.

ಹೊಸ ಸರ್ಕಾರದಲ್ಲಿ ಪ್ರಾತಿನಿಧ್ಯಕ್ಕೆ ಅಫ್ಘಾನ್ ಮಹಿಳೆಯರ ಹೋರಾಟ

ಬಿಜೆಪಿಯಿಂದ ಜಾವೇದ್‌ ಮನೆ ಮುಂದೆ ಪ್ರತಿಭಟನೆ

ಸಂದರ್ಶನದ ಸಂದರ್ಭದಲ್ಲಿ ತಾಲಿಬಾನ್‌ ಹಾಗೂ ಆರ್‌ಎಸ್‌ಎಸ್‌ ನಡುವೆ ಹೋಲಿಕೆ ಮಾಡಿದ್ದ ಜಾವೇದ್‌ ಅಖ್ತರ್‌ ವಿರುದ್ದ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿರುವ ಬಿಜೆಪಿಯು ಜಾವೇದ್‌ ಅಖ್ತರ್‌ನ ಮುಂಬೈನ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಬಿಜೆಪಿ ನಾಯಕರು ಸ್ಥಳೀಯ ಮಟ್ಟದಲ್ಲೂ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಹಾಗೆಯೇ ಜಾವೇದ್‌ ಈ ಹೇಳಿಕೆಯನ್ನು ಹಿಂದಕ್ಕೆ ಪಡೆದು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹ ಮಾಡಿದ್ದಾರೆ. ಇನ್ನು ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಜಾವೇದ್‌ ಅಖ್ತರ್‌ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲ ನೆಟ್ಟಿಗರು ಈ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಹಿಳೆಯರ ಸ್ವಾತಂತ್ಯ್ರಕ್ಕೆ ಧಕ್ಕೆ ತರುವ ಮನುವಾದವನ್ನು ಉಲ್ಲೇಖ ಮಾಡಿದರೆ, ಇನ್ನೂ ಕೆಲವರು ಅಖ್ತರ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

Read more about: ಶಿವಸೇನೆ

English Summary

Shiv Sena slamas lyricist Javed Akhtar's for comparing Taliban and RSS, said It is disrespectful to Hindu culture.
Read more...