ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ; ಕುರಿ ಸಾಕಣೆಗೆ ಸಬ್ಸಿಡಿ, ವಿವರ
ಬೆಂಗಳೂರು, ಫೆಬ್ರವರಿ 13: ಕರ್ನಾಟಕ ಸರ್ಕಾರ ಕುರಿ ಮತ್ತು ಮೇಕೆ ಸಾಕಣೆಯನ್ನು ಪ್ರೋತ್ಸಾಹಿಸಲು ಮತ್ತು ಕುರಿಗಾಹಿಗಳಿಗೆ ಆರ್ಥಿಕ ನೆರವು ನೀಡಲು 'ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ' ರೂಪಿಸಿದೆ. ಈ ಯೋಜನೆಯಡಿ ಕುರಿ ಸಾಕಣೆ ಮಾಡಲು ಸಬ್ಸಿಡಿಯನ್ನು ನೀಡಲಾಗುತ್ತದೆ.
ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಮಾಂಸದ ಬೇಡಿಕೆ ಮತ್ತು ಪೂರೈಕೆ ನಡುವಿನ ಕೊರತೆ ಸರಿದೂಗಿಸಲು ಮತ್ತು ಮಾರುಕಟ್ಟೆಯನ್ನು ಮಾಫಿಯಾಗಳ ಹಿಡಿತದಿಂದ ತಪ್ಪಿಸಲು ಕುರಿ ಮತ್ತು ಮೇಕೆ ಸಾಕಣೆದಾರರ ಸಂಘಗಳ ಮಹಾಮಂಡಳ ಈ ಯೋಜನೆ ರೂಪಿಸಿದೆ.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾಮಂಡಳಗಳೊಂದಿಗೆ ಸಂಯೋಜನೆಗೊಂಡಿರುವ ಯೋಜನೆ ಇದಾಗಿದೆ. ಕುರಿತಳಿಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸರಿದೂಗಿಸಲು ಯೋಜನೆ ಸಹಾಯ ಮಾಡುತ್ತದೆ.
ದೇಶಿಯ ತಳಿಗಳಿಗೆ ಆದ್ಯತೆ: ಈ ಯೋಜನೆಯಡಿ ದೇಶಿಯ ತಳಿಗಳ ಕುರಿಗಳ ಸಾಕಣೆಗೆ ಆದ್ಯತೆ ನೀಡಲಾಗುತ್ತದೆ. ನಾರಿ ಸುವರ್ಣ, ಬನ್ನೂರು, ಡೆಕ್ಕಣಿ, ಬಳ್ಳಾರಿ, ಯಳಗ, ಕೆಂಗುರಿ ಇತ್ಯಾದಿ ದೇಶಿ ತಳಿಗಳ ಅಭಿವೃದ್ಧಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ.
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 20,000 ಸದಸ್ಯರು ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಅರ್ಹರು. ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆ ನೀಡಲಾಗುತ್ತದೆ. 75 ಲಕ್ಷ ರೂಪಾಯಿ ಘಟಕ ವೆಚ್ಚದಲ್ಲಿ ಶೇ 50ರಷ್ಟು ಮೊತ್ತವನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಸಾಲವಾಗಿ ನೀಡಲಾಗುತ್ತದೆ. ಶೇ 25ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದ ಸಹಾಯಧನ ರೂಪದಲ್ಲಿ ನೀಡಲಾಗುತ್ತದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಬಳಿಕ ಸರ್ಕಾರ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಈ ಯೋಜನೆ ಫಲಾನುಭವಿಯಾಗಲು ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳಲ್ಲಿ ಸದಸ್ಯರಾಗಿರಬೇಕು. ಹೋಬಳಿ ಮಟ್ಟದಲ್ಲಿ ಪ್ರತಿ 15 ಕುರಿ-ಮೇಕೆಗಳಿಗೆ ಒಂದು ಸಹಕಾರ ಸಂಘದಂತೆ ಇದ್ದು, ಸದಸ್ಯರಾದ ಕುರಿಗಾರರು ಮಾತ್ರ ಕುರಿ-ಮೇಕೆ ಪಡೆಯಲು ಅರ್ಹರು.
ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಸಮಿತಿ ಆಯ್ಕೆ ಮಾಡುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಯ್ಕೆ ಸಮಿತಿಗೆ ಅಧ್ಯಕ್ಷರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಉಪ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ, ಸಹಕಾರ ಇಲಾಖೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ಸಮಿತಿಯಲ್ಲಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 7 ಸಂಘಗಳ ಸದಸ್ಯರುಗಳಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ (20+1) ಕುರಿ, ಮೇಕೆ ಸಾಕಾಣಿಕೆಗಾಗಿ ಸಾಲ ಮತ್ತು ಸಹಾಯಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕುರಿಗಾಹಿಗಳು ಫೆಬ್ರವರಿ 19, 204 ರೊಳಗಾಗಿ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಮೂಲಕ ನಿಗದಿತ ಅರ್ಜಿಯನ್ನು ದಾಖಲಾತಿಗಳೊಂದಿಗೆ ನಿಗಮದ ಕಛೇರಿಗೆ ಸಲ್ಲಿಸಬೇಕು. ಈ ಯೋಜನೆಯು ಸಂಘದ ಸದಸ್ಯರಿಗೆ ಮಾತ್ರ ಸೀಮಿತಗೊಂಡಿರುತ್ತದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.












Click it and Unblock the Notifications