ಕುಸಿದಿದೆ ಟೊಮಾಟೊ ರೇಟ್; ಟೊಮಾಟೊ ಬೆಳೆದ ರೈತನ ಸಂಕಷ್ಟ ಕೇಳೋರಿಲ್ಲ...
ಚಾಮರಾಜನಗರ,
ಮೇ 25: ಲಾಕ್ ಡೌನ್ ನಿಂದಾದ ಪರಿಣಾಮ ಇನ್ನೂ ಮುಗಿಯುವಂತೆ ಕಾಣುತ್ತಿಲ್ಲ. ಟೊಮಾಟೊ ಬೆಳೆದ ರೈತರ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಉತ್ತಮ ದರ ದೊರೆಯದ ಕಾರಣದಿಂದಾಗಿ ಟೊಮಾಟೊ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದು, ಮಾಡಿದ ಖರ್ಚು ಬಾರದ ಕಾರಣದಿಂದ ರಸ್ತೆಯಲ್ಲಿಯೇ ಸುರಿದು ಹೋಗುತ್ತಿರುವುದು ಮಾಮೂಲಿಯಾಗಿದೆ. id="toptextpromo"> id='are-slot-1' class='oiad oi-axt oiadv'>ಚಾಮರಾಜನಗರದಲ್ಲಿ
ಒಂದಲ್ಲ ಒಂದು ರೀತಿಯ ತೊಂದರೆ ಅನುಭವಿಸುತ್ತಿರುವ ರೈತರು ತಮ್ಮ ಸಮಸ್ಯೆ ನಡುವೆಯೂ ಸಾವಿರಾರು ರೂಪಾಯಿ ಖರ್ಚು ಮಾಡಿ ಟೊಮಾಟೊ ಬೆಳೆದಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಸಮಾರಂಭಗಳು ನಡೆಯದ್ದರಿಂದ ಮತ್ತು ಹೊರ ರಾಜ್ಯಗಳಿಗೆ ಸರಿಯಾಗಿ ಸರಬರಾಜಾಗದಿರುವುದರಿಂದ ಬೇಡಿಕೆ ಕುಸಿಯುತ್ತಿದೆ. id='are-slot-2' class='oiad oi-axt oiadv'>
ರೈತರಿಗೆ ವಾಹನದ ಬಾಡಿಗೆಯೂ ಸಿಗುತ್ತಿಲ್ಲ
ರೈತರಿಗೂ ತಾವು ಬೆಳೆದ ಬೆಳೆಯನ್ನು ಜಮೀನಿನಲ್ಲೇ ಬಿಡುವಂತಿಲ್ಲ. ಹೀಗಾಗಿ ಕೊಯ್ಲು ಮಾಡಿ ಮಾರುಕಟ್ಟೆಗೆ ತಂದರೆ ವಾಹನದ ಬಾಡಿಗೆಯೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ನೊಂದ ರೈತರು ಟೊಮಾಟೊವನ್ನು ರಸ್ತೆ ಬದಿಯಲ್ಲಿಯೇ ಸುರಿದು ತಮ್ಮ ಹಾದಿ ಮನೆಯ ಹಾದಿ ಹಿಡಿಯುತ್ತಿದ್ದಾರೆ. ಸೋಮವಾರ ಗುಂಡ್ಲುಪೇಟೆ ಮಾರುಕಟ್ಟೆಗೆ ಮಾರಾಟ ಮಾಡಲು ಟೊಮಾಟೊ ತಂದ ರೈತನದ್ದೂ ಇದೇ ಪರಿಸ್ಥಿತಿಯಾಗಿತ್ತು.

ಕೆ.ಜಿ. ಟೊಮಾಟೊಗೆ 2 ರೂ ದರ ನಿಗದಿ
ಗುಂಡ್ಲುಪೇಟೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಖರೀದಿ ನಡೆಯುತ್ತಿದ್ದ ವೇಳೆ ಕೆಜಿ ಟೊಮಾಟೊಗೆ ಎರಡು ರೂಪಾಯಿಯಂತೆ ವರ್ತಕರು ದರ ನಿಗದಿ ಮಾಡಿದ್ದಾರೆ. ಈ ವೇಳೆ ರೈತರು ಕನಿಷ್ಠ ಮೂರು ರೂಪಾಯಿ ಕೊಡುವಂತೆ ಮನವಿ ಮಾಡಿದರೂ ವರ್ತಕರು ಅವರ ಮಾತಿಗೆ ಮಣೆ ಹಾಕಿಲ್ಲ. ಇದರಿಂದ ನೊಂದ ರೈತ, ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ನೀವು ಕೇಳಿದ ದರಕ್ಕೆ ನೀಡುವ ಬದಲಿಗೆ ರಸ್ತೆಗೆ ಎಸೆಯುತ್ತೇನೆಂದು ರಸ್ತೆಗೆ ಸುರಿದು ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ರೈತರಿಗೆ ಅರ್ಧದಷ್ಟೂ ದರ ಸಿಗುತ್ತಿಲ್ಲ
ಒಂದು ಎಕರೆ ಟೊಮಾಟೊ ಬೆಳೆಯಲು ಕನಿಷ್ಠ 30 ರಿಂದ 40 ಸಾವಿರ ರೂ. ಖರ್ಚು ಮಾಡಬೇಕು. ಹಗಲಿರುಳೆನ್ನದೆ ನೀರು ಕಟ್ಟಬೇಕು, ಮುದುರು ಬೂದು ರೋಗ ಕಾಟವಿದ್ದು, ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸಬೇಕು. ಕಾಡು ಪ್ರಾಣಿಗಳ ಕಾಟವನ್ನು ತಪ್ಪಿಸಿ ಕಣ್ಣಲ್ಲಿ ಕಣ್ಣಿಟ್ಟು ಕಾದು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದರೆ ಒಂದು ಕೆ.ಜಿ.ಗೆ ಕೇವಲ 2 ರೂ.ಗೆ ನಿಗದಿ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 8 ರಿಂದ 10 ರೂ. ದರವಿದ್ದರೂ ರೈತರಿಗೆ ಮಾತ್ರ ಅರ್ಧದಷ್ಟು ಕೂಡ ಸಿಗುತ್ತಿಲ್ಲ ಎನ್ನುವುದು ರೈತರ ಅಳಲಾಗಿದೆ.

ಚಿಂತಾಕ್ರಾಂತರಾಗಿರುವ ರೈತರು
ಒಟ್ಟಾರೆ ಹೇಳಬೇಕೆಂದರೆ ಈ ಬಾರಿ ರೈತ ಸಂಕಷ್ಟಕ್ಕೀಡಾಗಿದ್ದು, ಅವನು ಬೆಳೆದ ಯಾವ ಬೆಳೆಯೂ ಆತನ ಕೈ ಹಿಡಿಯದ ಕಾರಣದಿಂದಾಗಿ ಮುಂದೇನು ಎಂದು ಚಿಂತಾಕ್ರಾಂತನಾಗಿದ್ದಾನೆ. ಈಗ ಬೆಳೆಯಿಂದ ನಷ್ಟ ಅನುಭವಿಸಿರುವ ರೈತ ಮುಂದಿನ ದಿನಗಳಲ್ಲಿ ಬೆಳೆಗಳನ್ನು ಬೆಳೆಯುವುದಾದರೂ ಹೇಗೆಂದು ತಲೆ ಮೇಲೆ ಕೈಹೊತ್ತು ಕೂತಿದ್ದಾನೆ.












Click it and Unblock the Notifications