ಮೂರೂ ರಾಜ್ಯಗಳಲ್ಲಿ ಬಡ ರೈತರ ಕೋಪ ಬಿಜೆಪಿ ದವಡೆಗೆ ಮೂಲ!
Recommended Video

ಬೆಂಗಳೂರು, ಡಿಸೆಂಬರ್ 12 : ಭಾರತೀಯ ಜನತಾ ಪಕ್ಷ ಆಡಳಿತವಿದ್ದ ಮೂರೂ ರಾಜ್ಯಗಳಲ್ಲಿ ಅಧಿಕಾರವನ್ನು ಒಂದೇ ದಿನ ಕಳೆದುಕೊಳ್ಳುವುದು ಸುಮ್ಮನೆ ಮಾತಲ್ಲ. 5 ರಾಜ್ಯಗಳ ಚುನಾವಣೆಯಲ್ಲಿ ಜನ ನೀಡಿರುವ ಈ ಭರ್ಜರಿ ಹೊಡೆತದಿಂದ ಸುಧಾರಿಸಿಕೊಳ್ಳಲು, ಕಾರಣ ಕಂಡುಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.
ಗಾಯದ ಮೇಲೆ ಉಪ್ಪು ಸುರಿದಂತೆ ಮೂರೂ ರಾಜ್ಯಗಳಲ್ಲಿ ತನ್ನ ಬದ್ಧವೈರಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸಲಿದೆ. ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದ ನಂತರ ಇಂಥ ಆಘಾತವನ್ನು ಯಾವ ಚುನಾವಣೆಯಲ್ಲಿಯೂ ಎದುರಿಸಿರಲಿಲ್ಲ. ಬಿಜೆಪಿಯಿಂದ ಅಧಿಕಾರ ಕಿತ್ತುಕೊಂಡಿರುವ ಕಾಂಗ್ರೆಸ್ ಗಹಗಹಿಸುತ್ತಿದೆ.
ಲೋಕಸಭೆ ಚುನಾವಣೆ ಇನ್ನು ಕೇವಲ ಆರು ತಿಂಗಳು ಮಾತ್ರ ಬಾಕಿಯಿರುವಾಗ ಕಂಡಿರುವ ಇಂಥ ಸೋಲು ಬಿಜೆಪಿಯನ್ನು ಕಂಗೆಡುವಂತೆ ಮಾಡಿದೆ. ಆದರೂ, ಮುಂದಿನ ಅವಧಿಗೂ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮುಂದುವರಿಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿರುವ ಸಾರ್ವಜನಿಕ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರುವ ಉಮ್ಮೇದಿಯಲ್ಲಿ ಭಾರತೀಯ ಜನತಾ ಪಕ್ಷವಿದೆ.
ವಿಧಾನಸಭೆ ಚುನಾವಣೆಯೇ ಬೇರೆ, ಲೋಕಸಭೆ ಚುನಾವಣೆಯಲ್ಲಿ ಎದುರಾಗುವ ಸನ್ನಿವೇಶವೇ ಬೇರೆ ಎಂಬುದು ಭಾರತೀಯ ಜನತಾ ಪಕ್ಷದ ಥಿಂಕ್ ಟ್ಯಾಂಕ್ ನ ಅಭಿಮತ. ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳೇ ಪ್ರಾಧಾನ್ಯತೆ ಪಡೆದುಕೊಳ್ಳುತ್ತವೆ ಎಂದು ಅವರ ಅಭಿಪ್ರಾಯ. ಏನೇ ಆಗಲಿ, ಸೋಲು ಸೋಲೇ, ಗೆಲುವು ಗೆಲವೇ. ಬಿಜೆಪಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು, ತಪ್ಪು ತಿದ್ದಿಕೊಳ್ಳಲು, ಸರಿಯಾದ ಮಾರ್ಗ ಕಂಡುಕೊಳ್ಳಲು ಇದು ಸೂಕ್ತವಾದ ಸಮಯ.

ರೈತರ ಬಗ್ಗೆ ಗಮನ ಹರಿಸದ ಬಿಜೆಪಿ
ಬಿಜೆಪಿಯ ಥಿಂಕ್ ಟ್ಯಾಂಕ್ ಪ್ರಕಾರ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ರೈತರ ಸಾಲಮನ್ನಾ ಮಾಡುವ ಕಾಂಗ್ರೆಸ್ಸಿನ ಭರವಸೆಯನ್ನು ಬಿಜೆಪಿ ಸರಿಯಾಗಿ ಅಧ್ಯಯನ ಮಾಡಲಿಲ್ಲ, ಆ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಬಿಜೆಪಿಯ ಲೆಕ್ಕಾಚಾರಗಳೆಲ್ಲ ತಲೆಕೆಳಗಾದರೆ, ಇದನ್ನು ಬಂಡವಾಳ ಮಾಡಿಕೊಂಡ ಕಾಂಗ್ರೆಸ್, ಪ್ರಮುಖವಾಗಿ ಗ್ರಾಮೀಣ ಮತಗಳನ್ನು ಕಬಳಿಸುವಲ್ಲಿ ಯಶಸ್ವಿಯಾಯಿತು. ಛತ್ತೀಸ್ ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಇದರ ಪರಿಣಾಮ ಗಾಢವಾಗಿ ಕಾಣಿಸುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ದೆಹಲಿಯ ಬಿಜೆಪಿ ನಾಯಕರೊಬ್ಬರು ವಿಶ್ಲೇಷಣೆ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಎಲ್ಲ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಘೋಷಿಸಿದ್ದರು.

ಎಂಪಿಯಲ್ಲಿ ತಿರುಗಿಬಿದ್ದ ಉನ್ನತ ವರ್ಗದ ಜನ
ಮಧ್ಯ ಪ್ರದೇಶದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಶಿವರಾಜ್ ಸಿಂಗ್ ಚೌಹಾಣ್ ಅವರ ಮೀಸಲಾತಿ ನೀತಿಯಿಂದಾಗಿ, ಮೀಸಲಾತಿಯನ್ನು ವಿರೋಧಿಸುವ ಉನ್ನತ ವರ್ಗದ ಜನರು ತಿರುಗಿಬಿದ್ದಿದ್ದರು. ಎಸ್ಸಿ ಮತ್ತು ಎಸ್ಟಿಗಳಿಗೆ ಭಡ್ತಿ ನೀಡುವುದನ್ನು ಅಲ್ಲಗಳೆದು ಹೈಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ, ಎಸ್ಸಿ ಎಸ್ಟಿಗಳನ್ನು ಓಲೈಸಲು ಶಿವರಾಜ್ ಸಿಂಗ್ ಚೌಹಾಣ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಉನ್ನತ ವರ್ಗದವರನ್ನು ಕೆರಳಿಸಿತ್ತು. ಇದರ ಫಲವನ್ನು ಈಗ ಅವರು ಚುನಾವಣೆಯಲ್ಲಿ ಕಂಡಿದ್ದಾರೆ. ಉನ್ನತ ವರ್ಗದವರು ಸಿಂಧಿಯಾ ವಿರುದ್ಧ ಪ್ರತಿಭಟಿಸಿದ್ದರೂ, ಕಡೆಗೆ ತಿರಸ್ಕರಿಸಿದ್ದು ಚೌಹಾಣ್ ಅವರನ್ನು. ಜೊತೆಗೆ ಪ್ರತಿಭಟನೆ ಮಾಡಿತ್ತಿದ್ದ ರೈತರ ಮೇಲೆ ಗೋಳಿಬಾರ್ ಮಾಡಿ ಹತ್ಯೆ ಮಾಡಿದ್ದು ಕೂಡ ಬಿಜೆಪಿಗೆ ಮುಳುವಾಯಿತು.

ವಸುಂಧರಾ ಜನಪ್ರಿಯತೆಯಲ್ಲಿ ಕುಸಿತ
ರಾಜಸ್ಥಾನದಲ್ಲಿ ಚುನಾವಣೆ ಆರಂಭಕ್ಕೂ ಮುನ್ನವೇ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಇದಕ್ಕೆ ಪ್ರಮುಖ ಕಾರಣ ಜನಪ್ರಿಯತೆಯ ಪಾತಾಳ ಕಂಡಿದ್ದ ಮುಖ್ಯಮಂತ್ರಿ ವಸುಂಧರಾ ರಾಜೇ ಎನ್ನುವುದು ಗುಪ್ತವಾಗೇನೂ ಉಳಿದಿಲ್ಲ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ನೇಮಕಾತಿಗೆ ಸಂಬಂಧಿಸಿದಂತೆ ರಾಜೇ ಅವರು ಅಮಿತ್ ಶಾ ಅವರೊಂದಿಗೇ ಕಿತ್ತಾಟವಾಡಿದ್ದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸಾಕಷ್ಟು ಪ್ರಚಾರ ಮಾಡಿದ್ದರಿಂದ 73 ಸೀಟನ್ನಾದರೂ ಗೆಲ್ಲಲು ಬಿಜೆಪಿಗೆ ಸಾಧ್ಯವಾಯಿತು. ಇಲ್ಲದಿದ್ದರೆ ಇದಕ್ಕಿಂತ ಹೀನಾಯ ಸೋಲು ಕಾಣಬೇಕಾಗಿತ್ತು. ರಾಜೇ ಅವರು ಜನರ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ, ಕಾರ್ಯಕರ್ತರಿಗೂ ದುರ್ಲಭವಾಗಿದ್ದರು ಮತ್ತು ದುರಹಂಕಾರದ ವರ್ತನೆಯಿಂದಾಗಿ ಜನರೇ ಅವರನ್ನು ದೂರ ಸರಿಸುವಂತಾಯಿತು. ಬದಲಿಗೆ, ಭಿನ್ನಾಭಿಪ್ರಾಯಗಳಿದ್ದರೂ ಕಾಂಗ್ರೆಸ್ ನಾಯಕರು ತೋರಿಸಿದ ಒಗ್ಗಟ್ಟು ಬಿಜೆಪಿಗೆ ಋಣಾತ್ಮಕವಾಗಿ ಪರಿಣಮಿಸಿತು.

ತಿರುಗಿಬಿದ್ದ ರೈತರು, ಗ್ರಾಮೀಣ ಜನತೆ
ಗುಜರಾತ್ ಚುನಾವಣೆಯ ಸಮಯದಲ್ಲಿಯೇ ಬಿಜೆಪಿ ಗ್ರಾಮೀಣ ವಿಭಾಗದಲ್ಲಿ ಮತಗಳನ್ನು ಕಳೆದುಕೊಂಡಿತ್ತು. ರೈತರು ಕೇಂದ್ರದ ನೀತಿಯಿಂದಾಗಿ ಸಿಡಿದೆದ್ದಿದ್ದರು. ಅದು ಈ ಮೂರು ರಾಜ್ಯಗಳಲ್ಲಿಯೂ ಮುಂದುವರಿದಿದೆ. ರೈತ ಸಮುದಾಯ ಮಾತ್ರವಲ್ಲ, ರೈತೇತರ ಸಮುದಾಯ ಮತ್ತು ನಗರದ ಮತದಾರರು ಕೂಡ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದು ತಿರುಗಿಬಿದ್ದಿದ್ದರು. ಛತ್ತೀಸ್ ಗಢದಲ್ಲಿ ಕೂಡ ಬಿಜೆಪಿಗೆ ಚುನಾವಣೆ ಸಮಯದಲ್ಲಿಯೇ ಸೋಲಿನ ಸುಳಿವು ದೊರೆತಿತ್ತು. ಸರಕಾರಕ್ಕೆ ಭತ್ತ ಮಾರಲು ರೈತರು ಹಿಂದೇಟು ಹಾಕಿದಾಗಲೇ ಬಿಜೆಪಿ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಸಮಯ ಮೀರಿತ್ತು. ಆದರೆ, ಈ ರೀತಿ ಧೂಳಿಪಟವಾಗುತ್ತದೆ ಎಂದು ಬಿಜೆಪಿ ಖಂಡಿತ ಎಣಿಸಿರಲಿಲ್ಲ.

ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸ
ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದ್ದರಿಂದ ನಾವು ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸ ಅಭ್ಯರ್ಥಿಗಳಲ್ಲಿತ್ತು. ಅಲ್ಲದೆ, ಸೂಕ್ತವಾದ ಅಭ್ಯರ್ಥಿಗಳನ್ನು ಕೂಡ ಆಯ್ಕೆ ಮಾಡದಿರುವುದು ಬಿಜೆಪಿಗೆ ಮುಳುವಾಯಿತು. ಮಧ್ಯ ಪ್ರದೇಶದಲ್ಲಿ ಶಾಸಕರಾಗಿದ್ದವರೇ ಹಲವರು ಸೋಲು ಕಂಡಿದ್ದಾರೆ. ಇಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸಾರಥ್ಯ ಇಲ್ಲದಿದ್ದರೆ ಬಿಜೆಪಿ ಇನ್ನೂ ಹೀನಾಯವಾಗಿ ಸೋಲುತ್ತಿತ್ತು. ಛತ್ತೀಸ್ ಗಢದಲ್ಲಿ ಛತ್ತೀಸ್ ಗಢ ಜನತಾ ಕಾಂಗ್ರೆಸ್ ಅಧ್ಯಕ್ಷ ಅಜಿತ್ ಜೋಗಿ ಜೊತೆ ಬಿಎಸ್ಪಿ ಕೈಜೋಡಿಸಿದ್ದರಿಂದ ಕಾಂಗ್ರೆಸ್ಸಿಗೆ ಹೊಡೆತ ಬೀಳಲಿದೆ ಎಂದು ಬಿಜೆಪಿ ಎಣಿಸಿತ್ತು. ಆದರೆ ಆಗಿದ್ದೇನು? ಜೋಗಿ ಮತ್ತು ಬಿಎಸ್ಪಿ ಮೈತ್ರಿಕೂಟ ಬಿಜೆಪಿ ಮತಗಳನ್ನೇ ನುಂಗಿ ಹಾಕಿವೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications