ಪಿಎಂ ಕಿಸಾನ್: ವಿಜಯದಶಮಿಗೆ ರೈತರಿಗೆ 2,000 ರೂ. ಬಿಡುಗಡೆ ಸಾಧ್ಯತೆ
ಬೆಂಗಳೂರು, ಸೆಪ್ಟಂಬರ್ 27: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ಸಿಗಬೇಕಾದ 12ನೇ ಕಂತು ಇದೇ ದಸರಾ ಹಬ್ಬದದಲ್ಲಿ ನವರಾತ್ರಿ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯ ದೇಶದ 11 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳಿಗೆ ವಿಜಯದಶಮಿಯಂದು ಸಿಹಿ ಸುದ್ದಿಯೊಂದು ಕೇಂದ್ರ ಸರ್ಕಾರ ನೀಡಲಿದೆ. ಈ ವಾರದಲ್ಲಿ ಅಷ್ಟು ಫಲಾನುಭವಿಗಳಿಗೆ ಯೋಜನೆ 12ನೇ ಕಂತಿನ 2,000 ರೂ. ರೈತರ ಖಾತೆಗೆ ಜಮೆ ಆಗಲಿದೆ ಎಂದು ವರದಿಯಾಗಿದೆ.
ಗೋವಾ ಸರ್ಕಾರದಿಂದ ಸ್ವಾವಲಂಬಿ ನಡೆ: ಆತಂಕದಲ್ಲಿ ಕರ್ನಾಟಕದ ರೈತರು
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಒಂದು ಕಂತಿನ ಹಣ ಬಿಡುಗಡೆಯಾಗಿ ರೈತರ ಖಾತೆಗೆ ಸೇರಿತ್ತು. ಆದರೆ ಈ ವರ್ಷ ಫಲಾನುಭವಿಗಳ ಜಮೀನು ದಾಖಲೆಗಳು ಹಾಗೂ ಇನ್ನಿತರ ವಿವರಗಳ ಸರಿಯಾದ ಪರಿಶೀಲನೆ ವಿಚಾರವಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಕೇಂದ್ರ ಸರ್ಕಾರವು ಕೆಲವು ತಿಂಗಳು ಹಿಂದಷ್ಟೇ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದ ವಿವಿಧ ರಾಜ್ಯಗಳ ಲಕ್ಷಾಂತರ ಮಂದಿ ಅನರ್ಹ ರೈತರನ್ನು ಗುರುತಿಸಿತ್ತು. ಈ ಕಾರಣದಿಂದಲೇ ಪ್ರಸ್ತಕ ವರ್ಷದ 12ನೇ ಕಂತಿನ ಹಣ ಸಂದಾಯ ಮಾಡಲು ಸರ್ಕಾರ ರೈತರ ದಾಖಲೆ, ಅತ್ಯಗತ್ಯ ವಿವರ ಪರಿಶೀಲಿಸುವಲ್ಲಿ ಎಚ್ಚರಿಕೆ ವಹಿಸಿದೆ.
ರೈತರಿಗೆ ಕೇಂದ್ರ ಸರ್ಕಾರದ ನೆರವು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಥವಾ 'ಪಿಎಂ ಕಿಸಾನ್' ಮೂಲಕ ಕೇಂದ್ರ ಸರ್ಕಾರವು ರೈತರಿಗೆ ರೂ.2000ನಂತೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು 6,000 ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಹಾಕುತ್ತದೆ. ಈ ಪೈಕಿ ಕೇಂದ್ರ ಸರ್ಕಾರ ಈಗಾಗಳೇ 11ಕಂತುಗಳನ್ನು ಬಿಡುಗಡೆ ಮಾಡಿದ್ದು, 12ನೇ ಕಂತು ಬಿಡುಗಡೆ ಆಗುವುದ ಬಾಕಿ ಇದೆ.
ಅರ್ಹರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ಹೇಗೆ?
ರೈತರು ತಾವು ಪಿಎಂ ಕಿಸಾನ್ನ 12ನೇ ಕಂತಿನ ಫಲಾನುಭವಿ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಬೇಕಾದರೆ ಈ ಕೆಳಗಿನ ನಿಯಮ ಅನುಸರಿಸಬೇಕಿದೆ. ಮೊದಲು ನೀವು 'ಪಿಎಂ ಕಿಸಾನ್' ವೆಬ್ಸೈಟ್ಗೆ ಭೇಟಿ ನೀಡಬೇಕು. ವೆಬ್ಸೈಟ್ ಮುಖಪುಟದ 'ಫಾರ್ಮರ್ಸ್ ಕಾರ್ನರ್' ವಿಭಾಗದಲ್ಲಿ 'ಫಲಾನುಭವಿಗಳ ಪಟ್ಟಿ' ಇದ್ದು, ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರಾಜ್ಯಗಳು, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಯ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮಾಹಿತಿ ಆಯ್ಕೆ ಮಾಡಿ ಕೊನೆಗೆ ವರದಿ (Get Report) ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಹೆಸರು ಹುಡುಕಬಹುದು. ಅಲ್ಲಿ ನಿಮ್ಮ ಹೆಸರಿದ್ದರೆ ಆದಷ್ಟು ಶೀಘ್ರವೇ ನಿಮ್ಮ ಖಾತೆಗೆ ಕೇಂದ್ರದಿಂದ 12ನೇ ಕಂತಿನ 2,000ರೂ.ಹಣ ಜಮೆ ಆಗಲಿದೆ.