ಮುಂಗಾರಿನಲ್ಲಿ ಬೇಸಿಗೆಯ ಅನುಭವ; ಬರದತ್ತ ಭಾರತ
ಬೆಂಗಳೂರು, ಜೂನ್ 26: ಮುಂಗಾರಿನಲ್ಲಿ ಬೇಸಿಗೆಯ ಅನುಭವವಾಗುತ್ತಿದೆ. ಆಷಾಢ ಆರಂಭಕ್ಕೂ ಮುನ್ನ ತುಸು ಆಷಾಢದ ಗಾಳಿ ಬೀಸುತ್ತಿರುವುದರಿಂದ ಮತ್ತು ಅಲ್ಲಿಲ್ಲಿ/ಆಗಾಗ ಮುಂಗಾರು ಲೀಲೆ ಕಾಣಿಸಿಕೊಳ್ಳುತ್ತಿರುವುದರಿಂದ ವಾತಾವರಣ ಸ್ವಲ್ಪ ತಂಪಾಗಿದೆ. ಅದು ಬಿಟ್ಟರೆ...
ಕೈಕೊಟ್ಟ ಮುಂಗಾರಿನಿಂದಾಗಿ ಮುಂದಿನ ದಿನಗಳು ಭೀಕರವಾಗಲಿದೆ. ದೇಶದ ಬಹುಪಾಲು ಭಾಗದಲ್ಲಿ ಮಳೆಯೇ ಇಲ್ಲವಾಗಿದೆ. ಮುಂಗಾರು ಮಳೆ ಕೈಕೊಟ್ಟಿರುವುದು ಮೊದಲು ನೇರವಾಗಿ ರೈತನ ಮೇಲೆ ಪರಿಣಾಮ ಬೀರಲಿದೆ. ಅದರ ಜತೆಗೆ ಜನಸಾಮಾನ್ಯರ ಬದುಕು ಮತ್ತಷ್ಟು ಹೈರಾಣಗೊಳ್ಳಲಿದೆ.
ಹವಾಮಾನ ಇಲಾಖೆಯ ಪ್ರಕಾರ ದೇಶದಲ್ಲಿ ಮುಂಗಾರು ಸಕಾಲಕ್ಕೆ ಕಾಣಿಸಿಕೊಂಡಿತಾದರೂ ಶೇ. 80 ರಷ್ಟು ಮಳೆ ಕೊರತೆ ಎದುರಾಗಿದೆ. ಮುಂಗಾರು ಆರಂಭವಾಗಿ ಇನ್ನೇನು ಮಾಯದಂಥ ಮಳೆಯಾಗಲಿದೆ ಎಂದು ರೈತಾಪಿ ಜನ ಹೊಲಗಳತ್ತ ಹೆಜ್ಜೆ ಹಾಕುವ ವೇಳೆಗೆ ಮಳೆರಾಯ ಮಾಯವಾಗಿದ್ದಾನೆ.

ದೇಶದ ಬಹುತೇಕ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಇದು ಸರಕಾರ ಮತ್ತು ಕೃಷಿಕರನ್ನು ಕಂಗೆಡಿಸಿದೆ. ಇದರ ನೇರ ಪರಿಣಾಮ ಗ್ರಾಹಕನ ಮೇಲೆ ಆಗಿದ್ದು, ಧವಸ ಧಾನ್ಯಗಳ, ತರಕಾರಿ ಬೆಲೆಗಳು ಸದ್ದಿಲ್ಲದೇ ಅದಾಗಲೇ ಮಳೆಯನ್ನು ಹುಡುಕಿಕೊಂಡು ಗಗನದತ್ತ ಹೊರಟಿವೆ.
ಆಗಸ್ಟ್- ಸೆಪ್ಟೆಂಬರಿಗಾದರೂ ಉತ್ತಮ ಮಳೆಯಾದರೆ ಮಳೆ ಜತೆಗೆ ಬೆಲೆಗಳೂ ಧರೆಗೆ ವಾಪಸಾಗಲಿವೆ. ಇಲ್ಲವಾದಲ್ಲಿ ಜೀವನಾವಶ್ಯ ದಿನಸಿ ಬೆಲೆಗಳು ಜನಸಾಮಾನ್ಯರ ಕೈಗೆಟುಕುವುದಿಲ್ಲ ಎಂಬಂತಾಗಿದೆ.
ನೈಋತ್ಯ ಮುಂಗಾರು ದುರ್ಬಲವಾಗಿರುವ ಕಾರಣ ಜೂನ್ 1ರಿಂದ 25ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟಾರೆ ವಾಡಿಕೆ ಮಳೆ ಪ್ರಮಾಣದಲ್ಲಿ ಶೇ. 25ರಷ್ಟು ಕೊರತೆ ಎದುರಾಗಿದೆ. ಕರಾವಳಿಯ ಕೆಲ ಭಾಗದಲ್ಲಿ ಭಾರಿ ಮಳೆಯಾಗಿದ್ದು ಬಿಟ್ಟರೆ ಒಳನಾಡು ಪ್ರದೇಶಗಳಲ್ಲಿ ಮುಂಗಾರು ತೀರಾ ದುರ್ಬಲವಾಗಿದೆ.












Click it and Unblock the Notifications