ರೈತನ ಸಾವಿನ ಮನೆಯಲ್ಲೂ ಬಿಡದ ರಾಜಕೀಯ ಮೇಲಾಟ
ಬ್ಯಾಂಕ್ ಸಾಲ, ಫೈನಾನ್ಸ್ ಸಾಲ, ಕೈಬಡ್ಡಿ ಸಾಲ ಮಾಡಿ ಕೃಷಿ ಮೇಲೆ ದುಡ್ಡು ಸುರಿದ ಅನ್ನದಾತ ಕಂಗಾಲಾಗಿದ್ದಾನೆ. ಸೂಕ್ತ ಪರಿಹಾರ ನೀಡುವ ಬದಲು ರಾಜಕೀಯ ಮುಖಂಡರು ಸೂತಕದ ಮನೆಯಲ್ಲೂ ರಾಜಕೀಯ ಲಾಭಕ್ಕೆ ಮುಂದಾಗಿದ್ದಾರೆ.
ಪಾಂಡವಪುರದಲ್ಲಿ ಫಸಲಿಗೆ ಬಂದಿದ್ದ ರೈತ ತನ್ನ ಗೆದ್ದೆಗೆ ಬೆಂಕಿಯಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ಬೆನ್ನಲ್ಲೇ ನಂಜನಗೂಡಿನಲ್ಲಿ ರೈತನೊಬ್ಬ ವಿಷ ಸೇವಿಸಿ ಸತ್ತಿದ್ದಾನೆ. ಇದಕ್ಕೂ ಮುನ್ನ ಶ್ರೀರಂಗಪಟ್ಟಣದಲ್ಲಿ ನೇಣಿಗೆ ರೈತ ಕೊರಳೊಡ್ಡಿದ್ದಾನೆ.
ಇದರಿಂದ ತೀವ್ರ ಆಕ್ರೋಶಗೊಂಡ ರೈತರು ಜನಪ್ರತಿನಿಧಿಗಳನ್ನು ವಾಮಾಗೋಚರವಾಗಿ ನಿಂದಿಸಿದ ನಂತರ ರಾಜ್ಯದ ಮೂರು ಪಕ್ಷಗಳು ಎಚ್ಚೆತ್ತಕೊಂಡಿವೆ. ಇದರ ನಂತರವೂ ಜೇವರ್ಗಿಯಲ್ಲಿ, ಅದಾದ ನಂತರ ಹಾವೇರಿ, ಮಂಡ್ಯದಲ್ಲಿ ರೈತರು ಜೀವ ತೆಗೆದುಕೊಂಡಿದ್ದಾರೆ. (ಕುಮಾರಸ್ವಾಮಿ ಪಾದಯಾತ್ರೆ)

ಸಾವನ್ನಪ್ಪಿದ ರೈತನ ಮನೆಗೆ ತೆರಳಿದ ಮೂರೂ ಪಕ್ಷದ ಮುಖಂಡರು, ಸ್ವಲ್ಪ ದುಡ್ಡು ಕೊಟ್ಟು, ಕುಟುಂಬಕ್ಕೆ ಸಾಂತ್ವನ ಹೇಳಿ, ಫೋಟೋ ತೆಗೆಸಿಕೊಂಡು ವಾಡಿಕೆಯಂತೆ ಆಡಳಿತ ಪಕ್ಷದ ಮೇಲೆ ಟೀಕಿಸಿ ಹೊರಟೋಗಿದ್ದಾರೆ.
ಇತ್ತ ಮುಖ್ಯಮಂತ್ರಿಗಳು ರೈತ ಸಾವನ್ನಪ್ಪುತ್ತಿರುವುದು ನಮ್ಮ ಅಧಿಕಾರದ ಅವಧಿಯಲ್ಲಿ ಮಾತ್ರ ಅಲ್ಲ, ಹಿಂದಿನ ಬಿಜೆಪಿ, ಜೆಡಿಎಸ್ ಸರಕಾರದ ಅವಧಿಯಲ್ಲೂ ನಡೆದಿತ್ತು ಎನ್ನುವ ಘನಂದಾರಿ ಹೇಳಿಕೆ ನೀಡಿದ್ದಾರೆ.
ರೈತರು ತಾವು ಬೆಳೆದ ಫಸಲಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕೆಂದು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ, ರಾಜ್ಯದ ಮೂರು ಪಕ್ಷಗಳ ಬಗ್ಗೆ ಮಾಧ್ಯಮದರ ಪ್ರಶ್ನೆಗೆ ಉತ್ತರಿಸುತ್ತಾ ರೈತನೊಬ್ಬ ಹೇಳುತ್ತಾನೆ, ನಮಗೆ ಇವರ ಹೊಲಸು ರಾಜಕೀಯ ಬೇಕಾಗಿಲ್ಲ, ನಮಗೆ ಬೇಕಾಗಿರುವುದು ನಮ್ಮ ದುಡಿಮೆಗೆ ಸೂಕ್ತ ಪ್ರತಿಫಲ.

ರೈತನ ಈ ನೋವಿನ ನುಡಿ ನಮ್ಮ ರಾಜಕೀಯ ವ್ಯವಸ್ಥೆಯನ್ನು, ರಾಜಕಾರಣಿಗಳ ಮುಖವಾಡವನ್ನು ತೋರಿಸುತ್ತದೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಗಾಲೇ ರಾಜಕೀಯ ಮುಖಂಡರು ಎಚ್ಚೆತ್ತುಕೊಳ್ಳುತ್ತಾರೆ ಎನ್ನುವ ಸತ್ಯದ ಅರಿವು ಜನತೆಗಾಗಿದೆ.
ರಾಜ್ಯದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಿಸಲಾರಷ್ಟು ಗಂಭೀರವಾಗಿ ಬೆಳಿದಿದೆಯೇ ಅಥವಾ ಇದರ ಹಿಂದೆ ಬಲಾಢ್ಯ ಸಕ್ಕರ ಕಾರ್ಖಾನೆ ಮಾಲೀಕರ ಲಾಬಿಯಿದೆಯೇ? ಯಾಕೆಂದರೆ ಸಕ್ಕರೆ ಕಾರ್ಖಾನೆ ಹೊಂದಿರುವವರಲ್ಲಿ ಎಲ್ಲಾ ಪಕ್ಷದ ಮುಖಂಡರೂ ಇದ್ದಾರೆ. (ಆತ್ಮಹತ್ಯೆಗೆ ಶರಣಾಗಬೇಡಿ)
ಕಳೆದೆರಡು ವರ್ಷದಿಂದ ಸಕ್ಕರೆ ಕಾರ್ಖಾನೆ ಮಾಲೀಕರಿಂದ ರೈತರಿಗೆ ಸಂದಾಯವಾಗ ಬೇಕಿರುವ ಮೊತ್ತ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿಗೂ ಮೇಲು.
ಜೊತೆಗೆ ಕಬ್ಬಿನ ಉಪ ಉತ್ಪನ್ನಗಳ ಮಾರಾಟದ ಆದಾಯದ ಮೇಲೆ ಸಿಂಹಪಾಲು ಸಿಗಬಹುದು ಎನ್ನುವ ಆಸೆಯೂ ಮರೀಚೆಕೆಗಾಗಿ ಉಳಿಯುವ ಸಾಧ್ಯಯೆತೇ ಹೆಚ್ಚು.

ಮಳೆಗಾಲದ ಅಧಿವೇಶನದ ಸಮಯದಲ್ಲಿ ಕುಮಾರಸ್ವಾಮಿ ಪಾದಯಾತ್ರೆಯ ರಾಜಕೀಯ ನಾಟಕ ಆಡುತ್ತಿದ್ದಾರೆ ಎನ್ನುವುದು ಆಡಳಿತ ಪಕ್ಷದ ಆಪಾದನೆಯಾದರೆ, ಕೆಲವು ವರ್ಷಗಳ ಹಿಂದೆ ಸಿದ್ದರಾಮಯ್ಯ ಬಳ್ಳಾರಿಯಿಂದ ಪಾದಯಾತ್ರೆ ನಡೆಸಿದ್ದು ಯಾತಕ್ಕಾಗಿ?
ರಾಜಕೀಯ ಎಂದ ಮೇಲೆ ಆರೋಪ ಪ್ರತ್ಯಾರೋಪ ಸಹಜ. ಆದರೆ ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟರೆ ರೈತರು ರಾಜಕೀಯ ವ್ಯವಸ್ಥೆಯ ಮೇಲೆ ತಿರುಗಿ ಬೀಳುವ ದಿನ ದೂರವಿಲ್ಲ.
ಸೋಮವಾರದಿಂದ (ಜೂನ್ 29) ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ ಮೂರೂ ಪ್ರಮುಖ ಪಕ್ಷಗಳು ಕೈಜೋಡಿಸಿ ರೈತನ ಪರವಾಗಿ ನಿಂತು, ಇನ್ನಷ್ಟು ರೈತರು ಆತ್ಮಹತ್ಯೆಯ ಹಾದಿ ಹಿಡಿಯದ ಹಾಗೇ ಕಾನೂನು ರೂಪಿಸುವಂತಹ ದೇವರು ಮೆಚ್ಚುವ ಕೆಲಸ ರಾಜಕೀಯ ಪಕ್ಷಗಳಿಂದ ಆಗಲಿ.












Click it and Unblock the Notifications