ಮಾಹಿತಿ ಭಂಡಾರವುಳ್ಳ ರೈತ ದಸರೆಗೆ ವಿಧ್ಯುಕ್ತ ಚಾಲನೆ
ಮೈಸೂರು, ಸೆಪ್ಟೆಂಬರ್ 22: ಮೂರು ದಿನಗಳ ಕಾಲ ನಡೆಯುವ ರೈತ ದಸರಾ ಮಹೋತ್ಸವಕ್ಕೆ ಇಂದು (ಸೆ.22) ನಗರದ ಜೆ.ಕೆ.ಮೈದಾನದಲ್ಲಿರುವ ಮೆಡಿಕಲ್ ಕಾಲೇಜು ಅಲ್ಯುಮಿನಿ ಸಭಾಂಗಣದಲ್ಲಿ ಬೆಂಗಳೂರು ಜೆಕೆವಿಕೆ ಕೃಷಿ ವಿವಿಯ ಉಪಕುಲಪತಿ ಡಾ.ಎಂ.ಶಿವಣ್ಣ ಹೊಂಬಾಳೆ ಹೂ ಬಿಡಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 24 ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಹಿತಿ ಭಂಡಾರದ ರೈತ ದಸರೆ :
ದೇಶದ ಬೆನ್ನೆಲುಬು ರೈತ. ಅನ್ನದಾತನಾಗಿರುವ ರೈತ ಸಾಲಬಾಧೆ, ಬೆಳೆನಷ್ಟ ಎಂದು ಬೇಸತ್ತು ಒಂದೆಡೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದರೆ, ಮತ್ತೊಂದೆಡೆ ರೈತ ಕೃಷಿಯಿಂದ ದೂರ ಉಳಿಯುತ್ತಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳದೆ, ಕೃಷಿಯಿಂದ ದೂರ ಉಳಿಯದೆ, ಆಧುನಿಕ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಲಾಭಗಳಿಸುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿ ಒಂದೇ ಸೂರಿನಡಿ ಸಿಗಲಿದೆ. ದಸರಾ ಮಹೋತ್ಸವದ ಅಂಗವಾಗಿ ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ರೈತ ದಸರಾ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಈ ಮಾಹಿತಿ ಸಿಗಲಿದೆ.

ಈ ಬಾರಿಯ ರೈತ ದಸರಾವನ್ನು ವಿಶೇಷವಾಗಿ ಮಣ್ಣು, ನೀರಿನ ಸಮಸ್ಯೆ, ಸಿರಿಧಾನ್ಯ, ಸಾವಯವ ಕೃಷಿಗೆ ಹೆಚ್ಚು ಮಹತ್ವ ನೀಡಿ ಆಯೋಜಿಸಲಾಗಿದೆ. ಸಿರಿಧ್ಯಾನ, ಮುಸುಕಿನ ಜೋಳದ ತಳಿಗಳು, ಮುಸುಕಿನ ಜೋಳದಿಂದ ತಯಾರಿಸಬಹುದಾದ ತಿಂಡಿಗಳು, ಹುಲ್ಲಿನ ತಳಿಗಳು, ಮೀನಿನ ತಳಿಗಳು, ಅದರ ವೈಶಿಷ್ಟಗಳು, ರೇಷ್ಮೆ ಹುಳುಗಳ ಮಾಹಿತಿ, ಕೃಷಿ ಚಟುವಟಿಕೆಗಾಗಿ ಬಳಸಲಾಗುವ ಯಂತ್ರೋಪಕರಣಗಳು ಹೀಗೆ ಹತ್ತು ಹಲವು ಮಾಹಿತಿಗಳನ್ನು ರೈತರು ರೈತ ದಸರಾಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು.

ದಷ್ಟ-ಪುಷ್ಟವಾಗಿರುವ ಬಂಡೂರು ಕುರಿ, ಶಿರೋಹಿ, ಬಿಟಲ್, ಜಮುನಾ ಪ್ಯಾರಿ ಮೇಕೆಗಳು ಎಲ್ಲರ ಗಮನ ಸೆಳೆಯುತ್ತಿದ್ದು, ಪಶುಸಂಗೋಪನೆಯಡಿಯಲ್ಲಿ ಈ ತಳಿಗಳ ಕುರಿ, ಮೇಕೆಯನ್ನು ಸಾಕಿ ಉತ್ತಮ ಲಾಭಗಳಿಸುವುದು ಹೇಗೆ ಎಂಬುದನ್ನು ಕುರಿ, ಮೇಕೆ ಸಾಕುತ್ತಿರುವ ರೈತರೇ ಸ್ವತಃ ಮಾಹಿತಿ ನೀಡುತ್ತಿದ್ದದ್ದು ಮತ್ತೊಂದು ವಿಶೇಷವೇ ಸರಿ.












Click it and Unblock the Notifications