ದಾವಣಗೆರೆ: ಟೋಲ್ ಗೇಟ್ ಬಳಿ ರೈತರ ಚಳುವಳಿ
ದಾವಣಗೆರೆ, ಡಿಸೆಂಬರ್ 14: ಕೇಂದ್ರ ಸರ್ಕಾರ ಜಾರಿಗೊಳಿಸಿರುವ 3 ಕರಾಳ ರೈತ ಕಾಯ್ದೆಗಳನ್ನು ವಿರೋಧಿಸಿ ಅಖಿಲ ಭಾರತ ರೈತ-ಕಾರ್ಮಿಕರ ಸಂಘರ್ಷ ಸಮನ್ವಯ ಸಮಿತಿ ಪದಾಧಿಕಾರಿಗಳು ದಾವಣಗೆರೆ ಹತ್ತಿರದ ಹೆಬ್ಬಾಳು ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಇಡೀ ದೇಶದ ಸುಮಾರು 250ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕಳೆದ 19 ದಿನಗಳಿಂದ ಒಂದು ಕೋಟಿಗೂ ಹೆಚ್ಚು ರೈತರು ದೇಶದ ರಾಜಧಾನಿ ದೆಹಲಿಯ ಹೊರಭಾಗದಲ್ಲಿ ಸಂಧಾನ ರಹಿತವಾದ ಧೀರೋಧಾತ್ತ ಹೋರಾಟವನ್ನು ಮುಂದುವರೆಸುತ್ತಿದ್ದಾರೆ.
ಈ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರವು ರೈತರನ್ನು ಮನವೊಲಿಸಲು ಹೀಗಾಗಲೇ ನಡೆದ ಕೇಂದ್ರ ಸರ್ಕಾರದ ಕೃಷಿ ಸಚಿವರ ಸಮ್ಮುಖದಲ್ಲಿನ 6 ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಹೋರಾಟ ನಿರತ ರೈತರ ಏಕೈಕ ಬೇಡಿಕೆ ಎಂದರೆ 3 ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬುದು.

ಈ ಹೋರಾಟದಲ್ಲಿ ಕೇವಲ ರೈತರಲ್ಲದೆ, ಮಕ್ಕಳು, ವೃದ್ಧರು, ಮಹಿಳೆಯರು ಸಹ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಈ ಡಿಸೆಂಬರ್ ನ ಕೊರೆಯುವ ಚಳಿಯಲ್ಲೂ ಸಹ ಪೊಲೀಸರ, ಅರೆ ಮಿಲಿಟರಿ ಪಡೆಯ ಅಡೆ-ತಡೆಗಳನ್ನು ಮೀರಿ ಶಾಂತಿಯುತ ಹೋರಾಟ ಮುಂದುವರೆಸಿದ್ದಾರೆ. ಈ ತೀವ್ರ ಚಳಿಯಿಂದಾಗಿ ಈಗಾಗಲೇ ಸುಮಾರು 9 ರೈತ ನಾಯಕರು ಹುತಾತ್ಮರಾಗಿದ್ದಾರೆ.
ಆದರೂ ಕೇಂದ್ರ ಸರ್ಕಾರ ಬಂಡವಾಳಶಾಹಿ ಪರವಾದ ರೈತರ, ಜನಸಾಮಾನ್ಯರ ವಿರೋಧಿಯಾದ ಈ 3 ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಹೋರಾಟವನ್ನು ಹಂತ ಹಂತವಾಗಿ ತೀವ್ರರೂಪಕ್ಕೆ ಕೊಡೋಯ್ಯುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ಹಿಂಪಡೆಯಬೇಕೆಂದು ರೈತ ಮುಖಂಡರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಹೆಬ್ಬಾಳು ಸಮೀಪದ ಹಳ್ಳಿಗಳಾದ ಹೊನ್ನೂರು, ಬುಳ್ಳಾಪುರ, ಚಿನ್ನಸಮುದ್ರ, ಮಲ್ಲಶೆಟ್ಟಿಹಳ್ಳಿ, ಹುಣಸೆಕಟ್ಟೆ, ಹೆಬ್ಬಾಳು, ನೀರ್ಥಡಿ ಗುಮ್ಮನೂರು, ಆನಗೋಡು, ಮಾಯಕೊಂಡ ಇತರೆ ಹಳ್ಳಿಯ ರೈತರು ಪಾಲ್ಗೊಂಡಿದ್ದರು.












Click it and Unblock the Notifications