ಜೀವ ವೈವಿಧ್ಯವನ ಭಾಗ-10: ಮನ್ ಕಿ ಬಾತ್; ಹೇಳಿದ್ದನ್ನು ಮಾಡಿ ಪ್ಲೀಸ್
ಪ್ರಧಾನಮಂತ್ರಿ "ಮನ್ ಕಿ ಬಾತ್'ನಲ್ಲಿ ಇತ್ತೀಚೆಗೆ ಮಳೆ ನೀರು ಸಂಗ್ರಹದ ಮಹತ್ವದ ಕುರಿತು ಮಾತನಾಡಿದ್ದಾರೆ ("Catch the rain"). ಇದು ಅತ್ಯಂತ ಸ್ವಾಗತಾರ್ಹ ಸಂದೇಶ. ಆದರೆ ಭಾರತೀಯ ಜನತಾ ಪಕ್ಷವೇ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ಮಳೆ ನೀರು ಸಂಗ್ರಹ ಮಾಡುತ್ತಿರುವ ಬಹುದೊಡ್ಡ ಮಾನವ ನಿರ್ಮಿತ ಜೀವ ವೈವಿಧ್ಯವನಕ್ಕೆ ಕೊಡಲಿ ಹಾಕುವ ಹುನ್ನಾರ ನಡೆದಿದೆ. ಆ ಬಗ್ಗೆ ನ್ಯಾಯಾಲಯದಲ್ಲಿ ತಕರಾರಿದೆ ಎನ್ನಿ. ಆದಾಗ್ಯೂ ಘೋಷಣೆಗಳೆಗೆ, ಹೇಳಿಕೆಗಳಿಗೆ ಮತ್ತು ಕ್ರಿಯೆಗೆ ಕೊಂಚ ಸಂಬಂಧ ಉಳಿಸಿಕೊಳ್ಳುವುದು ಪ್ರಭುತ್ವದ ಜವಾಬ್ದಾರಿಯಾಗಬೇಕು.
ಪ್ರಧಾನಿ ನರೇಂದ್ರ ಮೋದಿ ಅವರ "ಮನ್ ಕಿ ಬಾತ್'ನಲ್ಲಿ ಮಳೆ ನೀರು ಸಂಗ್ರಹದ ಬಗ್ಗೆ ನೀಡಿರುವ ಸಂದೇಶವನ್ನು ಸ್ವಾಗತಿಸುತ್ತಲೇ ಬೆಂಗಳೂರು ವಿಶ್ವವಿದ್ಯಾಲಯದ ಜೀವವೈವಿಧ್ಯವನದ ಮಾಜಿ ವಿಶೇಷಾಧಿಕಾರಿ ಡಾ.ಟಿ.ಜೆ ರೇಣುಕಾ ಪ್ರಸಾದ್ ಅವರು ಜ್ಞಾನಭಾರತಿ ಆವರಣದಲ್ಲಿರುವ ಜೀವವೈವಿಧ್ಯವನ ಹಾಗೂ ಅಲ್ಲಿನ ಮಳೆನೀರು ಕೊಯ್ಲಿನ ಬಗ್ಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಇತ್ತೀಚೆಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಜೀವವೈವಿಧ್ಯವನ ಭಾಗ 8; "ಜ್ಞಾನಭಾರತಿ ಆವರಣದ ವನ ಕಡಿಯದಂತೆ ಸರ್ಕಾರ ಸುಗ್ರೀವಾಜ್ಞೆ ತರಲಿ"
ರೇಣುಕಾ ಪ್ರಸಾದ್ ಪತ್ರದ ಸಾರಾಂಶ ಇಲ್ಲಿದೆ.
""ಪ್ರಧಾನಿ ಮೋದಿ ಅವರ ಮಳೆ ನೀರು ಸಂಗ್ರಹಣೆ ಕರೆ ಸ್ವಾಗತಾರ್ಹ. ನೂರು ದಿನಗಳ ಅರ್ಪಣಾ ಕಾರ್ಯಕ್ಕೆ ನೀಡಿರುವ ಕರೆ ಅದರ ಅನುಷ್ಠಾನ ಅತ್ಯವಶ್ಯಕ.
ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಈ ಕೆಲಸ 20 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಬಯೋಪಾರ್ಕ್ 1ನೇ ಭಾಗದಲ್ಲಿ ಮೊದಲೆರಡು ಹಂತದಲ್ಲಿ 100 ಎಕರೆಯಲ್ಲಿ 20 ಕೋಟಿ ಲೀಟರ್ ಅಂತರ್ಜಲ ಮರುಪೂರಣ ವ್ಯವಸ್ಥೆ ಮಾಡಲಾಗಿದೆ. ಇದೇ ಕ್ಷೇತ್ರದಲ್ಲಿ ಮತ್ತೆರಡು ಚೆಕ್ ಡ್ಯಾಂ, ಕಲ್ಯಾಣಿ ಹಾಗೂ ಅಂತರ್ಜಲ ಮರುಪೂರಣ ಬಾವಿಗಳನ್ನು ಮಾಡಲಾಗಿದ್ದು, ಒಟ್ಟಾರೆ 30 ಕೋಟಿ ಲೀಟರ್ ಅಂತರ್ಜಲ ಮರುಪೂರಣ ಆಗುತ್ತಿದೆ.''
ಲಕ್ಷಾಂತರ ಲೀಟರ್ ಮರುಪೂರಣ ಆಗುತ್ತಿದೆ
ಮುಂದುವರೆದು, ""ದೂರ ಸಂವೇದಿ ಆಧರಿಸಿ ಆವರಣದ ಡಿಜಿಟಲ್ ಎಲಿವೇಶನ್ ಮಾಡೆಲ್ ಮಾಡಿ ಮೊದಲ, ಎರಡನೇ ಹಾಗೂ ಮೂರನೇ ಹಂತದ ಹಳ್ಳ-ಕೊಳ್ಳಗಳನ್ನು ಗುರುತಿಸಿ ಮಳೆ ನೀರು ಸಂಗ್ರಹಣಾ ಸ್ಥಳಗಳ ನಕ್ಷೆ ತಯಾರಿಸಿದ್ದೇನೆ. ಇಲ್ಲಿ ಹಲವಾರು ಕಟ್ಟೆಗಳು, ಆಂತರಿಕ ತಡೆಗೋಡೆ, ಕಲ್ಯಾಣಿ ಮಾಡಿದರೆ ಸುಮಾರು 250 ಕೋಟಿ ಲೀಟರ್ ಮಳೆನೀರು ಕೊಯ್ಲು ಮಾಡಬಹುದಾಗಿದೆ. ಮೇಲ್ಛಾವಣಿ ಮಳೆನೀರು ಕೊಯ್ಲು ಒಂದೆಡೆ ಮಾಡಿ ಲಕ್ಷಾಂತರ ಲೀಟರ್ ಮರುಪೂರಣ ಆಗುತ್ತಿದೆ. ಆವರಣದ 137 ಕಟ್ಟಡಗಳ ಮೇಲ್ಛಾವಣಿ ಅಳತೆ ಮಾಡಲಾಗಿದೆ. ಇವುಗಳ ಪಕ್ಕದಲ್ಲಿ ಕಟ್ಟೆ ಕಲ್ಯಾಣಿ ಮಾಡಲು ಅನುಕೂಲವಿದೆ. ಇವೆಲ್ಲವೂ ಕಾರ್ಯಗತವಾದಲ್ಲಿ ಸುಮಾರು 350 ಕೋಟಿ ಲೀಟರ್ ಅಂತರ್ಜಲ ಮರುಪೂರಣ ವ್ಯವಸ್ಥೆ ಆಗುವಂತೆ ಮಾಡಲು ನೂರು ದಿನಗಳು ಸಾಕು.''
ಜೀವವೈವಿಧ್ಯ ವನ ಭಾಗ 7: ಜ್ಞಾನಭಾರತಿಯ ಜೈವಿಕ ವನ ಏಕೆ ಉಳಿಯಬೇಕು?: ಹೆಬ್ಳೀಕರ್ insights...
ವರ್ಷವಿಡೀ ನೀರು ಸಂಗ್ರಹಣೆ
""ವಸತಿಗೃಹಗಳ ತ್ಯಾಜ್ಯ ನೀರು ಸಂಸ್ಕರಣೆ ಮಾಡಿ ವರ್ಷವಿಡೀ ನೀರು ಸಂಗ್ರಹಣೆ, ಸರಬರಾಜು ಹಾಗೂ ಅಂತರ್ಜಲ ಮರುಪೂರಣ ಮಾಡಲು ಅತಿ ಅದ್ಭುತ ಕ್ಷೇತ್ರ. ಆವರಣದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿರುವುದು ಸಾಮಾನ್ಯ ಮಾತಾಗಿದೆ. ಇದೇ ಮಾದರಿ ಬೆಂಗಳೂರಿನ ಎಲ್ಲಾ ಜಲಾನಯನಗಳಲ್ಲಿ ಅನುಸರಿಸಿ ಪ್ರಧಾನಿಯವರ ಆಶಯ ಪರಿಪೂರ್ಣವಾಗಿಸಬಹುದು.''
ಜೀವಜಲ ತಾಣ ಮರೆಯಾಗುವ ಸ್ಥಿತಿ
""ಇತ್ತೀಚಿನ ವಿದ್ಯಮಾನಗಳು ಇಂತಹ ಜೀವಜಲ ತಾಣ ಮರೆಯಾಗುವ ಸ್ಥಿತಿ ನಿರ್ಮಾಣವಾಗಿದೆ, ದುರದೃಷ್ಟಕರ. ಮೂವತ್ತು ಕೋಟಿ ಅಂತರ್ಜಲ ಸಂಗ್ರಹ ಆಗುತ್ತಿರುವುದು ಇಪ್ಪತ್ತು ವರ್ಷಗಳ ಶ್ರಮದ ಫಲ. ಪ್ರಧಾನಿಯವರು ನೂರು ದಿನಗಳ ಶ್ರಮ ವಹಿಸಲು ಆಶಿಸಿದ್ದಾರೆ. ಮೊದಲ ಜಲ ಸಂರಕ್ಷಣೆ 7500 ಸಾವಿರಕ್ಕೂ ಹೆಚ್ಚು ದಿನಗಳು ಹಾಗೂ ಇತ್ತೀಚೆಗೆ 1000 ಕ್ಕೂ ಹೆಚ್ಚು ದಿನಗಳು ಬಯೋ ಪಾರ್ಕ್-1ರಲ್ಲಿ ಜಲಸಂರಕ್ಷಣೆ ಮುಂದುವರಿದಿದೆ. ಈ ಜಾಲಕ್ಕೆ ಕುತ್ತು ಬಂದು ಜಲ ಸಂರಕ್ಷಣಾ ತಾಣ ನಾಶವಾಗುತ್ತಿದೆ. ಬೆಂಗಳೂರಿಗರಿಗೆ ಪರಮ ಅನ್ಯಾಯವಾಗುತ್ತದೆ.''
ಜೈವಿಕ ವನದ ಜಲ ಸಂಪತ್ತು ಉಳಿಸಿ
""ನಾವೆಲ್ಲ ಬೆಂಗಳೂರಿಗರು, ಜೈವಿಕ ವನ ಉಳಿಯಲು ತಮ್ಮಲ್ಲಿ ಹಲವು ಬಗೆಯಲ್ಲಿ ಬೇಡಿಕೊಂಡಿರುವುದು ಹಸಿರಾಗಿಯೇ ಉಳಿದಿದೆ. ತಮ್ಮ ಹಸಿರು ಬೆಂಗಳೂರು ಕಾರ್ಯಕ್ರಮದಡಿಯಲ್ಲಿ ಜ್ಞಾನಭಾರತಿ ಜೈವಿಕ ವನ ಘೋಷಿಸಲು ಪತ್ರದ ಮೂಲಕ ಕೋರಿದ್ದೇನೆ. ಪ್ರಧಾನಿಗಳ ಇಂದಿನ ಆಶಯಕ್ಕೆ ಒತ್ತು ಕೊಟ್ಟು ಈ ಜೈವಿಕ ವನದ ಜಲ ಸಂಪತ್ತು ಉಳಿಸಿ ಬೆಳೆಸಲು ಹಾಗೂ ಬಳಸಲು ಅನುವು ಮಾಡಿ ಕೊಡಲು ಎಲ್ಲಾ ಬೆಂಗಳೂರಿಗರ ಪರವಾಗಿ ಮನವಿ ಮಾಡುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.