ಬೆಳೆನಾಶ ಕಂಡು ಹೊಲದಲ್ಲೇ ಹೃದಯಾಘಾತದಿಂದ ಮೃತನಾದ ರೈತ
ಅಮರಾವತಿ, ಡಿಸೆಂಬರ್ 19: ಫೆಥಾಯ್ ಚಂಡಮಾರುತದಿಂದ ಬೆಳೆಯೆಲ್ಲವೂ ನಾಶವಾಗಿದ್ದನ್ನು ಕಂಡು ಆಘಾತಗೊಂಡ ರೈತನೊಬ್ಬ ತನ್ನ ಹೊಲದಲ್ಲೇ ಹೃದಯಾಘಾತಕ್ಕೊಳಗಾಗಿ ಮೃತನಾದ ಘಟನೆ ಆಂಧ್ರಪ್ರದೇಶದ ಶ್ರೀಕಕುಳಂ ನಲ್ಲಿ ನಡೆದಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಆರಂಭವಾದ ಫೆಥಾಯ್ ಚಂಡಮಾರುತ ಆಂಧ್ರದಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಸುಮಾರು 14,000 ಹೆಕ್ಟೇರ್ ನಷ್ಟು ಪ್ರದೇಶ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಗೊಟ್ಟಿಪಾಳ್ಯ ಚಿನ್ನಸಾಮಿ ಎಂಬ ರೈತ ತನ್ನ ಭತ್ತದ ಗದ್ದೆಗೆ ಹೋಗಿದ್ದಾಗ ಸೈಕ್ಲೋನ್ ನಿಂದಾಗಿ ಬೆಳೆ ಪೂರ್ತಿ ನಾಶವಾಗಿದ್ದು ಗಮನಕ್ಕೆ ಬಂದಿತ್ತು. ಹೊಲಕ್ಕೆಲ್ಲ ನೀರು ತುಂಬಿರುವುದನ್ನು ಕಂಡು ಆಘಾತಗೊಂಡ ಅವರು ಸ್ಥಳದಲ್ಲೇ ಕುಸಿದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಷ್ಟರಲ್ಲೇ ಅವರು ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದರು.

ಚಿನ್ನಸಾಮಿ ಅವರು ಮೂವರು ಗಂಡು ಮತ್ತು ಓರ್ವ ಹೆಣ್ಣು ಮಗುವನ್ನು ಅಗಲಿದ್ದಾರೆ.
ಸೈಕ್ಲೋನ್ ಕಾರಣ ಈಗಾಗಲೇ ಸುಮಾರು 11000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.












Click it and Unblock the Notifications