ಮೈಸೂರಿನಲ್ಲಿ ಸ್ವಚ್ಛಮೇವ ಜಯತೆ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು, ಜನವರಿ 30: ಮೈಸೂರಿನ ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿರುವ ಮೀನು ಮಾರಾಟ ಮಳಿಗೆಯಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ಹಮ್ಮಿಕೊಂಡಿರುವ ಸ್ವಚ್ಛಮೇವ ಜಯತೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಹಾಗೂ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದ್ರಾಬಾದ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಸ್ವಚ್ಛಮೇವ ಜಯತೆ ಕಾರ್ಯಕ್ರಮಕ್ಕೆ ಮಹಾನಗರಪಾಲಿಕೆಯ ಮಹಾಪೌರ ಎಂ.ಜೆ.ರವಿಕುಮಾರ್ ಫಲಾನುಭವಿಗಳಿಗೆ ಕಸ ಹಾಕುವ ಬಕೆಟ್ ವಿತರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದರು.[ಮೈಸೂರಿನಲ್ಲಿ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಆರಂಭ, ಹ್ಯಾಟ್ರಿಕ್ ಪಟ್ಟ ಸಾಧ್ಯತೆ]
ಮೀನು ಸಂಸ್ಕರಿಸುವಾಗ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೇ ಬಕೆಟ್ ನಲ್ಲಿ ಸಂಗ್ರಹಿಸಿದರೆ ಒಳ್ಳೆಯದು. ಎಲ್ಲೆಂದರಲ್ಲಿ ಬಿಸಾಡುವುದರಿಂದ ಪ್ರಾಣಿ-ಪಕ್ಷಿಗಳು ಅವುಗಳನ್ನು ತಿನ್ನಲು ಬಂದು ರೋಗ-ರುಜಿನವನ್ನು ಹೆಚ್ಚಿಸುವ ಸಾಧ್ಯತೆಯೇ ಇದೆ. ಹೀಗಾಗಿ ನಾವು ನೀಡಿದ ಬಕೆಟ್ ನಲ್ಲಿಯೇ ಸಂಗ್ರಹಿಸಿಡಿ. ಸಂಜೆಯ ವೇಳೆ ಪೌರಕಾರ್ಮಿಕರು ಬಂದು ಅವುಗಳನ್ನು ಕೊಂಡೊಯ್ಯುತ್ತಾರೆ ಎಂದರು.
ಮೈಸೂರು ಈಗಾಗಲೇ ಎರಡು ಬಾರಿ ಸ್ವಚ್ಛ ನಗರಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮುಂದೆಯೂ ಆ ಪ್ರಶಸ್ತಿಯನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮ ಸುತ್ತ ಮುತ್ತಲ ಪರಿಸರಗಳಲ್ಲಿ ಕಸಗಳನ್ನು ಸುರಿಯುವುದರಿಂದ ಅದರಲ್ಲಿ ಉತ್ಪನ್ನವಾಗುವ ಕ್ರಿಮಿ ಕೀಟಗಳಿಂದ ನಮಗೇ ಅನಾನುಕೂಲವಾಗಲಿದೆ ಎಂಬುದನ್ನು ಮನದಟ್ಟು ಮಾಡಿದರು.
ಅಂಗಡಿ ಮೇಲೆ ದಾಳಿ, ಅಪಾರ ಪ್ಲಾಸ್ಟಿಕ್ ವಶ
ಮೈಸೂರು: ಮಹಾನಗರಪಾಲಿಕೆ ವ್ಯಾಪ್ತಿಯ ಮಂಡಿಮೊಹಲ್ಲಾ ಬಳಿ ಸೋಮವಾರ ಪಾಲಿಕೆ ಅಧಿಕಾರಿಗಳು ಕೆಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೈಸೂರನ್ನು ಸ್ವಚ್ಛ ನಗರವಾಗಿರಿಸಲು ಪಣತೊಟ್ಟಿರುವ ಮಹಾನಗರ ಪಾಲಿಕೆ ನಗರದ ಪ್ರತಿಯೊಂದು ಮಳಿಗೆಗೆಗಳು, ರೆಸ್ಟೋರೆಂಟ್ ಗಳ ಮೇಲೆ ಹದ್ದಿನ ಕಣ್ಣಿರಿಸಿದ್ದು, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಮಳಿಗೆಗಳ ಮೇಲೆ ದಾಳಿ ನಡೆಸುತ್ತಿದೆ.
ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ನಾಗರಾಜು ನೇತೃತ್ವದ ತಂಡ ಸುಮಾರು ಒಂದು ಲಕ್ಷರೂ.ಮೌಲ್ಯದ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಲೋಟಾಗಳನ್ನು ವಶಕ್ಕೆ ತೆದುಕೊಂಡಿದ್ದಾರಲ್ಲದೇ ಮತ್ತೆ ಪ್ಲಾಸ್ಟಿಕ್ ಗಳು ಕಂಡು ಬಂದಲ್ಲಿ ದಂಡ ವಿಧಿಸಿ, ಲೈಸನ್ಸ್ ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನು ಅಂಗಡಿಯ ಮಾಲಿಕರಿಗೆ ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಆರೋಗ್ಯಾಧಿಕಾರಿ ನಾಗರಾಜು, ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದರೂ ಕೆಲವು ಅಂಗಡಿಗಳಲ್ಲಿ ಇನ್ನೂ ಪ್ಲಾಸ್ಟಿಕ್ ಕವರ್ ಮತ್ತು ಲೋಟಾಗಳ ಮಾರಾಟ ನಡೆಯುತ್ತಿದೆ ಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದೇವೆ ಎಂದರು.