ಮೈಸೂರಿನ ಜೈಲಿಗೆ ಮರಳಿ ಬಾರದೆ ಕೈದಿ ಪರಾರಿ
ತಂದೆಯ ಅನಾರೋಗ್ಯ ಕಾರಣದಿಂದ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದ ಕೈದಿ ಮತ್ತೆ ಜೈಲಿಗೆ ಮರಳಿ ಬಾರದೆ ಪರಾರಿಯಾಗಿರುವುದು ಮೈಸೂರಿನ ಜೈಲರಿಗೆ ಫಜೀತಿಗೀಡು ಮಾಡಿದೆ.
ಮೈಸೂರು ,ಫೆಬ್ರವರಿ 6 : ತಂದೆಯ ಆನಾರೋಗ್ಯ ಹಿನ್ನೆಲೆಯಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರ ಬಂದಿದ್ದ ಕೈದಿಯೊಬ್ಬ ನಾಪತ್ತೆಯಾಗಿರುವ ಘಟನೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಕಿಶನ್ ಎಂಬಾತ ನಾಪತ್ತೆಯಾಗಿರುವ ಕೈದಿ. ಮೈಸೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಈತ ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ಪೆರೋಲ್ ಪಡೆದಿದ್ದ. ಹೀಗಾಗಿ ನವೆಂಬರ್ 4 ರಿಂದ ಫೆ.03 ರವರೆಗೆ ಪೆರೋಲ್ ಮೇಲೆ ಕಿಶನ್ ಹೊರ ಬಂದಿದ್ದ. ಫೆ. 3ರಂದು ಕಿಶನ್ ವಾಪಸ್ಸಾಗಬೇಕಿತ್ತು.[ಕೈದಿಗಳಿಗೆ ಮನೆಗಿಂತ ಮಂಗಳೂರು ಜೈಲೇ ಬಲು ಇಷ್ಟ]
ಆದರೆ ಫೆ.06 ಆದರೂ ಕಿಶನ್ ವಾಪಸ್ ಬಂದಿಲ್ಲ. ಕಿಶನ್ಗೆ ಅಣ್ಣ ಸುರೇಶ್ ಕುಮಾರ್ ಶ್ಯೂರಿಟಿ ನೀಡಿದ್ದರು.ಪೆರೋಲ್ ಅವಧಿ ಮುಗಿದರೂ ಕಿಶನ್ ಜೈಲಿಗೆ ಬಾರದ ಹಿನ್ನಲೆಯಲ್ಲಿ ಶ್ಯೂರಿಟಿದಾರ ಅಣ್ಣ ಸುರೇಶ್ಕುಮಾರ್ ವಿರುದ್ಧ ಜೈಲು ಮುಖ್ಯ ಅಧೀಕ್ಷಕ ಆನಂದ್ ರೆಡ್ಡಿ ದೂರು ದಾಖಲಿಸಿದ್ದಾರೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೈದಿಗಳು ಜೈಲಿನಿಂದ ಸೌಜನ್ಯತೆಯ ಆಧಾರದ ಮೇಲೆ ತನ್ನ ತಂದೆಯನ್ನು ನೋಡಲು ಹೊರ ಬಂದು ಹೀಗೆ ಮಾಡಿದರೆ, ಬೇರೆ ಕೈದಿಗಳಿಗೆ ನೀಡುವ ಅವಕಾಶ ಹೇಗೆ ತಾನೇ ನೀಡುತ್ತಾರೆ ಎಂಬುದು ನಾಗರಿಕರ ಮಾತು.