ಮೈಸೂರು: ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಐವರ ಬಂಧನ
ಮೈಸೂರು, ಜುಲೈ 30 : ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಐವರನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಂದು (ಭಾನುವಾರ) ಬಂಧಿಸಿದ್ದಾರೆ.
ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಶಂಕರ ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಟಿಕೆ ದಂಧೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಯುವಕರು ಸೇರಿದಂತೆ ಮೂವರು ಯುವತಿಯರನ್ನು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ : ಮೈಸೂರು-ಮಡಿಕೇರಿಯಲ್ಲಿ 8 ಮಂದಿ ಬಂಧನ
ಮಮುದ ಅಕ್ತರ್, ರುಕ್ಸಾನಾ ಶೇಖ್ ಹಾಗೂ ಸುಧಾಕರ್ ಮತ್ತು ಗಿರಾಕಿ ಶ್ರೇಯಸ್, ಈಟಿ ಇಕ್ಬಾಲ್ ಶೇಖ್ ಬಂಧಿತರು. ಮಮುದ ಅಕ್ತರ್ ಹಾಗೂ ರುಕ್ಸಾನಾ ಶೇಖ್ ಬಾಂಗ್ಲಾದೇಶದ ನಿವಾಸಿಗಳಾಗಿದ್ದು, ವಿಚಾರಣೆ ವೇಳೆ ಇಬ್ಬರೂ ಅಕ್ರಮವಾಗಿ ಭಾರತಕ್ಕೆ ನುಸುಳಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬಲೆಗೆ ಬೀದ್ದ ಚಾಲಾಕಿ ಕಳ್ಳ: ಖಾಸಗಿ ಸಂಸ್ಥೆಯೊಂದರ ಕಚೇರಿಯ ಡ್ರಾನಲ್ಲಿಟ್ಡಿದ್ದ 7 ಲಕ್ಷ ರೂಪಾಯಿ ಹಣ ಕಳುವು ಮಾಡಿದ್ದ ಮಾಜಿ ನೌಕರನೋರ್ವನನ್ನು ಮೈಸೂರಿನ ಎನ್.ಆರ್. ಠಾಣೆ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಬಂಧಿತನನ್ನು ಕೇರಳ ಮೂಲದ ಮೋಸೆಸ್ (24)ಎಂದು ಗುರುತಿಸಲಾಗಿದೆ. ಮೈಸೂರಿನ ಬನ್ನಿಮಂಟಪದಲ್ಲಿ ಶಾಲಾ ಕಾಲೇಜುಗಳ ಸೀಟ್ ಗಳನ್ನು ಕೊಡಿಸುವ ನಿಕಿಲ್ ಹಾಗೂ ಬೆನ್ಸಿನ್ ಎಂಬುವರು ನಡೆಸುತ್ತಿದ್ದ ಏಜೆಂಟ್ ಕಛೇರಿಯೊಂದರಲ್ಲಿ ನೌಕರನಾಗಿದ್ದ.
ಜುಲೈ 22 ರಂದು ನಿಕಿಲ್ ಹಾಗೂ ಬೆನ್ಸಿನ್ ಸಂಗ್ರಹವಾಗಿದ್ದ 7 ಲಕ್ಷ ರೂ. ಹಣವನ್ನು ಡ್ರಾನಲ್ಲಿರಿಸಿ ಕೇರಳಕ್ಕೆ ತೆರಳಿದ್ದರು. ಮೋಸಿಸ್ ಈ ಹಿಂದೆ ನೌಕರನಾಗಿದ್ದ ವೇಳೆ ಕಛೇರಿಯ ಮತ್ತೊಂದು ಕೀಲಿಯನ್ನು ಕಳವು ಮಾಡಿ ಇಟ್ಟುಕೊಂಡಿದ್ದ. ಕಛೇರಿ ಬಾಗಿಲು ಹಾಕಿದ್ದ ಸಂದರ್ಭವನ್ನು ಬಳಸಿಕೊಂಡು ತನ್ನ ಬಳಿ ಇದ್ದ ಕೀಲಿಯಿಂದ ಹಣ ಲಪಟಾಯಿಸಿದ್ದ.
ಹಣ ಲಪಟಾಯಿಸಿದ ನಂತರ ತನ್ನ ಫೇಸ್ ಬುಕ್ ನಲ್ಲಿ 'ನಾಳೆಯಿಂದ ನಾನು ಹೊಸ ಮನುಷ್ಯ' ಎಂದು ಸ್ಟೇಟಸ್ ಹಾಕಿಕೊಂಡು ಸುಳಿವು ನೀಡಿದ್ದ. ನಿಕಿಲ್ ಹಾಗೂ ಬೆನ್ಸಿನ್ ನೀಡಿದ ಸುಳಿವಿನಿಂದ ಆರೋಪಿ ಮೋಸೆಸ್ ನನ್ನು ಪೊಲೀಸರು ಸೆರೆ ಹಿಡಿದಿದ್ದು, ಬಂಧಿತನಿಂದ 6,78,000ರೂ ನಗದು ವಶ ಪಡಿಸಿಕೊಂಡಿದ್ದಾರೆ. ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತ ಆತ್ಮಹತ್ಯೆ: ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ತಾಲೂಕು ಮರಟಿಕ್ಯಾತನಹಳ್ಳಿಯಲ್ಲಿ ಇಂದು ನಡೆದಿದೆ. ಮೃತರನ್ನು ಮರಟಿಕ್ಯಾತನಹಳ್ಳಿ ಶಿವಕುಮಾರ್ (35) ಎಂದು ಗುರುತಿಸಲಾಗಿದೆ. ಇವರು ಕೃಷಿ ಇನ್ನಿತರ ಉದ್ದೇಶಗಳಿಗಾಗಿ 5 ಲಕ್ಷ ರೂ.ಸಾಲ ಮಾಡಿದ್ದರು.
ಎರಡು ಎಕರೆ ಜಮೀನು ಹೊಂದಿದ್ದ ಶಿವಕುಮಾರ್ ಮಾಡಿದ ಸಾಲ ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಕಾರ್ಮಿಕ ನೇಣಿಗೆ ಶರಣು: ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾತಗಳ್ಳಿಯಲ್ಲಿ ಇಂದು ನಡೆದಿದೆ.
ಮೃತನನ್ನು ಪಳನಿ (35) ಎಂದು ಗುರುತಿಸಲಾಗಿದೆ. ಈತ ಮನೆಯೊಂದರ ನವೀಕರಣ ಕೆಲಸಕ್ಕಾಗಿ ಬಂದಿದ್ದ. ಕಳೆದ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.