ಎತ್ತಿನಹೊಳೆ ವಿರೋಧಿಸಿ ಫೆ.10ರಿಂದ ಆಮರಣಾಂತ ಉಪವಾಸ
ಮಂಗಳೂರು, ಫೆಬ್ರವರಿ, 05 : ಎತ್ತಿನಹೊಳೆ ಯೋಜನೆ ವಿರೋಧಿಸಿ ನೇತ್ರಾವತಿ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಸಹಭಾಗಿತ್ವದೊಂದಿಗೆ ಫೆಬ್ರವರಿ 10ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಬಂಟರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರು, ಶಾಸಕರು, ಜಿ.ಪಂ. ಅಧ್ಯಕ್ಷರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಕಲಾವಿದರನ್ನು ತೊಡಗಿಸಿಕೊಳ್ಳುವ ಮೂಲಕ ಸರಕಾರದ ಮೇಲೆ ಒತ್ತಡ ತರಲು ತೀರ್ಮಾನಿಸಲಾಗಿದೆ.
ಫೆ.10ರಿಂದ ಆರಂಭವಾಗುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಮೊದಲ ದಿನ ಕನಿಷ್ಠ 20 ಸಾವಿರ ಜನರ ಮೂಲಕ ಹೋರಾಟ ನಡೆಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಧರ್ಮಗುರು, ಸ್ವಾಮೀಜಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರ ಸಹಕಾರ ಬೇಕೆಂದು ಕರಾವಳಿ ಕಾಲೇಜು ಸಮೂಹದ ಅಧ್ಯಕ್ಷ ಎಸ್.ಗಣೇಶ್ ರಾವ್ ಮನವಿ ಮಾಡಿದ್ದಾರೆ.
ದಿನಕ್ಕೊಂದರಂತೆ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ 25 ನಾಟಕ ಕಲಾವಿದರ ತಂಡವನ್ನು ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ ಎಂದು ನಾಟಕ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹೇಳಿದ್ದಾರೆ.
ಈ ಸತ್ಯಾಗ್ರಹದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಹರಿಕೃಷ್ಣ ಬಂಟ್ವಾಳ್, ಮೋನಪ್ಪ ಭಂಡಾರಿ, ಪುರುಷೋತ್ತಮ ಚಿತ್ರಾಪುರ, ಶರಣ್ ಪಂಪ್ ವೆಲ್, ಜಿತೇಂದ್ರ ಕೊಟ್ಟಾರಿ, ಆನಂದ್ ಅಡ್ಯಾರ್, ಸತ್ಯಜಿತ್ ಸುರತ್ಕಲ್, ರಘುವೀರ್ ಸೂಟರ್ ಪೇಟೆ, ಸಂಜಯ್ ಪ್ರಭು, ದಿನಕರ್ ಶೆಟ್ಟಿ ಸೇರಿದಂತೆ ಹಲವು ಸ್ವಾಮೀಜಿ, ಧರ್ಮಗುರುಗಳು, ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.
ಎತ್ತಿನಹೊಳೆ ಯೋಜನೆ ವಿರೋಧಿಸುವುದರ ಜೊತೆಗೆ ನೇತ್ರಾವತಿ ನದಿ ಉಳಿಸುವ ನಿಟ್ಟಿನಲ್ಲಿ ಈ ಬೃಹತ್ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.