ಕತ್ತರಿ ಸಾಣೆ ಮಾಡುತ್ತಾ ಗಾಂಜಾ ಮಾರುತ್ತಿದ್ದ ಯುವಕ ಕಂಬಿ ಹಿಂದೆ
ಕತ್ತರಿ ಸಾಣೆ ಹಿಡಿಯುವ ನೆಪದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ಮಾರುತ್ತಿದ್ದ ಆಂಧ್ರದ ಚಿತ್ತೂರು ಮೂಲದ ವ್ಯಕ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸರು ಬಲೆಗೆ ಕೆಡವಿದ್ದಾರೆ.
ಮಂಗಳೂರು, ಜನವರಿ 5 : ಗ್ರಾಮಾಂತರ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ 22 ವರ್ಷದ ಅಬ್ದುಲ್ ಲತೀಫ್ ಬಂಧಿತ. ಆತನನ್ನು ಗುರುವಾರ ಕೈರಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಗಾಂಜಾ ಮಾರಾಟ ಮಾಡುವ ಸಂದರ್ಭದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈತ ಕತ್ತರಿ ಸಾಣೆ ಮಾಡುತ್ತಾ ಮನೆ-ಮನೆಗೆ ತಿರುಗುತ್ತಿದ್ದ. ಆ ವೇಳೆ ಗ್ರಾಮಾಂತರ ಪ್ರದೇಶದ ಜನರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಗ್ರಾಮಾಂತರ ಠಾಣೆ ಸಬ್ ಇನ್ ಸ್ಪೆಕ್ಟರ್ ರಕ್ಷಿತ್ ಗೌಡ ಮತ್ತು ಅವರ ತಂಡ ಗಸ್ತು ತಿರುಗುತ್ತಿದ್ದ ವೇಳೆ ಈತನ ಮೇಲೆ ಅನುಮಾನ ಬಂದಿತ್ತು. ಆ ನಂತರ ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಅತ ಗಾಂಜಾ ಮಾರಾಟದ ಬಗ್ಗೆ ಬಾಯಿ ಬಿಟ್ಟಿದ್ದಾನೆ.[ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 'ಹಕ್ಕಿ ಜ್ವರ'ದ ಭೀತಿ, ಕಟ್ಟೆಚ್ಚರ]
ಈ ವೇಳೆ ಈತ ಗಾಂಜಾ ಮಾರಾಟ ಮಾಡುತ್ತಿರುವುದನ್ನ ಒಪ್ಪಿಕೊಂಡಿದ್ದಾನೆ. ಪೊಲೀಸ್ ಸಿಬ್ಬಂದಿ ಜಗದೀಶ್, ಸುರೇಶ್, ಮಾಧವ, ಜನಾರ್ದನ್, ಪ್ರವೀಣ್, ಪುನೀತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿ ಬಂಧನದಲ್ಲಿರಿಸಿದ್ದಾರೆ.