ದಿಡ್ಡಳ್ಳಿ ಆದಿವಾಸಿಗಳ ಪುನರ್ವಸತಿಗೆ ಆಗ್ರಹಿಸಿ ಮಂಗಳೂರಿನಲ್ಲಿ ಪ್ರತಿಭಟನೆ
ಮಂಗಳೂರು, ಡಿಸೆಂಬರ್, 21 : ಕೊಡಗಿನ ದಿಡ್ಡಳ್ಳಿಯ ಆದಿವಾಸಿ ಕುಟುಂಬಗಳ ಒಕ್ಕಲೆಬ್ಬಿಸಿದನ್ನು ಖಂಡಿಸಿ ಮತ್ತು ಆದಿವಾಸಿಗಳ ಪುನರ್ವಸತಿಗೆ ಆಗ್ರಹಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮಂಗಳವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ರಾಕೇಶ್ ಕುಂದರ್, 'ಅಹಿಂದ ಪರವೆಂದೇ ಹೇಳಿಕೊಂಡು ಅಧಿಕಾರ ಹಿಡಿದ ರಾಜ್ಯ ಸರಕಾರವು ದಲಿತರ ಮೇಲೆ ಸಂಘಪರಿವಾರವನ್ನೇ ನಾಚಿಸುವಂತೆ ದೌರ್ಜನ್ಯ ಎಸಗಿದೆ.
ಸಿಎಂ ಸಿದ್ದರಾಮಯ್ಯನವರಿಗೆ ದಲಿತರ ಪರ ನಿಜವಾದ ಕಾಳಜಿ ಇದ್ದರೆ ದೌರ್ಜನ್ಯ ಎಸಗಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತಕ್ಷಣವೇ ವಜಾಗೊಳಿಸಲಿ ಎಂದು ಆಗ್ರಹಿಸಿದರು. ಅಲ್ಲದೇ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಿ ಎಂದರು.
ದಲಿತ ಮುಖಂಡ ಅಶೋಕ್ ಕೊಂಚಾಡಿ ಮಾತನಾಡಿ, 'ಆದಿವಾಸಿಗಳನ್ನು ಅಮಾನವೀಯವಾಗಿ ಒಕ್ಕಲೆಬ್ಬಿಸಿರುವ ಘಟನೆ ತೀರಾ ನಾಚಿಕೆಗೇಡು. ಈ ದೌರ್ಜನ್ಯವನ್ನು ಖಂಡಿಸಿ ಉಡುಪಿ ಚಲೋ ಮಾದರಿಯಲ್ಲೇ ಇದೇ 23ರಂದು 'ಮಡಿಕೇರಿ ಚಲೋ' ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಕೋಮು ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಎಸ್ಪಿ ಆನಂದ, ಜಮಾಅತೆ ಇಸ್ಲಾಮಿ ಮುಖಂಡ ಶಬೀರ್ ಮೊದಲಾದವರು ಉಪಸ್ಥಿತರಿದ್ದರು.