ಮಂಡ್ಯ: ಸಾಲದ ನೋಟೀಸ್ ಕೈಯ್ಯಲ್ಲಿಡಿದುಕೊಂಡೇ ಜೀವತೆತ್ತ ಅನ್ನದಾತ
ಬ್ಯಾಂಕ್ನವರು ಸಾಲವನ್ನು ಮರುಪಾವತಿಸುವಂತೆ ನೀಡಿದ ನೋಟೀಸ್ಗೆ ಹೆದರಿ ಅದನ್ನು ಕೈಯ್ಯಲ್ಲ ಹಿಡಿದುಕೊಂಡೇ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಮಂಡ್ಯ, ಮೇ 27: ಬ್ಯಾಂಕ್ನವರು ಸಾಲವನ್ನು ಮರುಪಾವತಿಸುವಂತೆ ನೀಡಿದ ನೋಟೀಸ್ಗೆ ಹೆದರಿ ಅದನ್ನು ಕೈಯ್ಯಲ್ಲ ಹಿಡಿದುಕೊಂಡೇ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಶೀಳನೆರೆ ಗ್ರಾಮದ ಚಿಕ್ಕಣ್ಣಗೌಡ ಅವರ ಮಗ ರಾಮಚಂದ್ರು(52) ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದಾರೆ. ಇವರು ಕೃಷಿ ಮಾಡುವ ಉದ್ದೇಶದಿಂದ ತಮ್ಮ ಸುಮಾರು ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಕೊಳವೆ ಬಾವಿಯನ್ನು ಕೊರೆಯಿಸಿ ತರಕಾರಿ ಬೆಳೆಯಲು ತೀರ್ಮಾನಿಸಿದ್ದರು.
ಇದಕ್ಕಾಗಿ ತೆಂಡೇಕರೆ ಗ್ರಾಮೀಣ ಬ್ಯಾಂಕ್ನಲ್ಲಿ 1.40ಲಕ್ಷ ರೂ ಸಾಲ, ಡಿಸಿಸಿ ಬ್ಯಾಂಕಿನಲ್ಲಿ 1ಲಕ್ಷ ರೂ ಹಾಗೂ ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ 60ಸಾವಿರ ಜೊತೆಗೆ ಕೈಸಾಲ ಸೇರಿ ಸುಮಾರು ಐದಾರು ಲಕ್ಷ ರೂ.ಗಳ ಸಾಲವನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ನಡುವೆ ಬರದ ಹಿನ್ನಲೆಯಲ್ಲಿ ಕೃಷಿಗಾಗಿ ಕೊರೆಯಿಸಿದ್ದ ಕೊಳವೆ ಬಾವಿಯಲ್ಲಿ ನೀರು ಬಾರದೆ ಹೋದ ಪರಿಣಾಮ ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತರಕಾರಿ ಬೆಳೆಗಳು ನೀರಿಲ್ಲದೆ ಒಣಗಿ ಹೋಗಿ ನಷ್ಟವಾಗಿತ್ತು.
ಆದರೆ ತೆಂಡೇಕೆರೆ ಕಾವೇರಿ ಬ್ಯಾಂಕ್ನವರು ಸಾಲ ವಸೂಲಾತಿಗೆ ಕೋರ್ಟ್ ಮೂಲಕ ಸಮನ್ಸ್ ನೋಟೀಸ್ ಜಾರಿ ಮಾಡಿದ್ದರು. ಇದಕ್ಕೆ ಹೆದರಿದ ರೈತ ರಾಮಚಂದ್ರು ನೋಟೀಸ್ನ್ನು ಕೈಯಲ್ಲೇ ಹಿಡಿದುಕೊಂಡೇ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಗಾಯಿತ್ರಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಈ ಸಂಬಂಧ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.