ಮಂಡ್ಯದ ನಾಗತಿಹಳ್ಳಿ ಗ್ರಾಮಸ್ಥರನ್ನು ಕಂಗೆಡಿಸಿದ ಜ್ವರ
ಮಂಡ್ಯ, ಮೇ 21 : ನಾಗಮಂಗಳ ತಾಲೂಕಿನ ಜಿ.ನಾಗತಿಹಳ್ಳಿ ಗ್ರಾಮದಲ್ಲಿ ಸಾಮೂಹಿಕವಾಗಿ ಕಾಣಿಸಿಕೊಳ್ಳುತ್ತಿರುವ ಜ್ವರದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಒಬ್ಬರಿಂದ ಮತ್ತೊಬ್ಬರಿಗೆ ಸಾಂಕ್ರಾಮಿಕ ರೋಗದಂತೆ ಹರಡುತ್ತಿರುವ ಜ್ವರ ಡೆಂಗ್ಯೂ ಇರಬಹುದೆಂದು ಶಂಕಿಸಲಾಗಿದೆ.
ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಂಬೆಗಳ ತಳಮಟ್ಟದಲ್ಲಿ ಗಲೀಜು ತುಂಬಿದ್ದು, ಇದನ್ನು ಶುಚಿಗೊಳಿಸಲು ಗ್ರಾಪಂ ಅಧಿಕಾರಿಗಳು ಕ್ರಮವಹಿಸಿಲ್ಲ. ಮನೆಗಳ ತ್ಯಾಜ್ಯ ನೀರು ಹರಿದುಹೋಗಲು ಊರಿನಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ಬೋರ್ವೆಲ್ಗಳಿಂದ ಕ್ಯಾಲ್ಸಿಯಂಯುಕ್ತ ನೀರು ಬರುತ್ತಿದ್ದು, ಈ ಕಾರಣದಿಂದಲೇ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.[ಸಿಟ್ಟಾಗದ ಸದಾನಂದ ಗೌಡರೇ ರಮ್ಯಾಗೆ ಎಂಥ ಪೆಟ್ಟು ಕೊಟ್ಟರು ನೋಡಿ..]
ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಅಧಿಕಾರಿಗಳು ಗ್ರಾಮದಲ್ಲಿರುವ ಚರಂಡಿ ಹಾಗೂ ಮನೆಯ ಸುತ್ತಮುತ್ತಲ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಗಲೀಜು ತುಂಬಿರುವುದರಿಂದಾಗಿ ಸೊಳ್ಳೆಗಳು ಮೊಟ್ಟೆಯಿಟ್ಟು ಮರಿಮಾಡುತ್ತಿವೆ. ಅಲ್ಲದೆ ಗಲೀಜು ಇರುವುದರಿಂದ ಕಾಯಿಲೆಗಳು ಹರಡುತ್ತಿವೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.
ಗ್ರಾಮದ ನಿವಾಸಿ ವೆಂಕಟೇಶ್ (45) ಎಂಬ ವ್ಯಕ್ತಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ಹೀಗಾಗಿ ಗ್ರಾಮದಲ್ಲಿ ಭಯ ಆರಂಭವಾಗಿದೆ.
ಜಿ.ನಾಗತಿಹಳ್ಳಿಯಲ್ಲಿ ಕಾಣಿಸಿಕೊಂಡಿರುವ ಜ್ವರದ ಬಗ್ಗೆ ಮಾಹಿತಿ ಪಡೆದ ಶಾಸಕ ಎನ್.ಚೆಲುವರಾಯಸ್ವಾಮಿ ಅವರು ಜಿಲ್ಲಾ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಕಳೆದ ಇಪ್ಪತ್ತು ದಿನಗಳಿಂದ ಗ್ರಾಮದಲ್ಲಿ ಜ್ವರ ಜನರನ್ನು ಕಾಡುತ್ತಿದೆ ಬಹುತೇಕ ಮಂದಿಯಲ್ಲಿ ಬಿಳಿ ರಕ್ತಕಣಗಳು ಕ್ಷೀಣಿಸುತ್ತಿವೆ. ಆದ್ದರಿಂದ ಸೂಕ್ತ ದೊರಕಲು ವ್ಯವಸ್ಥೆ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.[ರಮ್ಯಾಗೆ ಲಾಲಿಪಪ್ ಕಳಿಸಿದ ಬಿಜೆಪಿ ಕಾರ್ಯಕರ್ತರು]
ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದ ಕಾರಣ ಜನರು ಅನಾರೋಗ್ಯಕ್ಕೆ ಸಿಲುಕುವಂತಾಗಿದೆ. ಜಿಲ್ಲಾಡಳಿತ ಅಂತಹ ಹಳ್ಳಿಗಳಿಗೆ ಪ್ರಥಮ ಆದ್ಯತೆ ನೀಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಜೊತೆಗೆ, ಜಿ.ನಾಗತಿಹಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಶೀಘ್ರದಲ್ಲೇ ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಜಿಪಂ ಸಿಇಒ ಶರತ್ ಅವರಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು, ಸೋಂಕನ್ನು ತಡೆಗಟ್ಟಲು ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮವಹಿಸಿದ್ದು, ಈಗ ಹತೋಟಿಗೆ ಬಂದಿದೆ. ಜನರು ಮನೆ ಬಳಕೆಯ ನೀರಿನ ತೊಟ್ಟಿ, ಪ್ಲಾಸ್ಟಿಕ್ ಡ್ರಂ, ಬಕೇಟ್, ಬ್ಯಾರಲ್, ಮಡಿಕೆ ತುಂಡು, ತೆಂಗಿನ ಚಿಪ್ಪು, ಹಳೆಯ ಟೈರ್ಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಹೇಳಿದರು.
ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು. ಮುಖ್ಯವಾಗಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ರೋಗದಿಂದ ದೂರವಿರಲು ಸಾಧ್ಯವಾಗುತ್ತದೆ. ಈಗಾಗಲೇ ಜ್ವರದಿಂದ ಬಳಲುತ್ತಿರುವ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿರುವುದಾಗಿ ತಿಳಿಸಿದರು.
{promotion-urls}