ದೇಶವನ್ನೇ ಕೊಳ್ಳೆ ಹೊಡೆದ ಯುವರಾಜರು -ಅಮಿತ್ ಶಾ
ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಮೇಲೆ ಗದಾ ಪ್ರಹಾರ ನಡೆಸಿದ್ದಾರೆ. ಒಬ್ಬ ಯುವರಾಜ ದೇಶವನ್ನೇ ಕೊಳ್ಳೆ ಹೊಡೆದರೆ, ಇನ್ನೊಬ್ಬ ಯುವರಾಜ ಉತ್ತರ ಪ್ರದೇಶವನ್ನೇ ಕೊಳ್ಳೆ ಹೊಡ
ಲಕ್ನೊ, ಫೆಬ್ರವರಿ 6: ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಮೇಲೆ ಗದಾ ಪ್ರಹಾರ ನಡೆಸಿದ್ದಾರೆ. ಒಬ್ಬ ಯುವರಾಜ ದೇಶವನ್ನೇ ಕೊಳ್ಳೆ ಹೊಡೆದರೆ, ಇನ್ನೊಬ್ಬ ಯುವರಾಜ ಉತ್ತರ ಪ್ರದೇಶವನ್ನೇ ಕೊಳ್ಳೆ ಹೊಡೆದಿದ್ದಾರೆ ಎಂದು ಹರಿಹಾಯ್ದಿದ್ದಾರೆ.[ನಾವು ಸೈಕಲಿನ ಎರಡು ಗಾಲಿಗಳಿದ್ದಂತೆ-ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್]
ನೊಯ್ಡಾದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರ ಪಂಕಜ್ ಸಿಂಗ್ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭ ಅವರು ಕೇವಲ ಪಂಕಜ್ ಸಿಂಗ್ ಪರವಾಗಿ ಮಾತ್ರ ಮತ ನೀಡಿ ಎಂದು ಕೇಳಲು ನಾನು ಇಲ್ಲಿಗೆ ಬಂದಿಲ್ಲ. ರಾಜ್ಯದಲ್ಲಿ ಬದಲಾವಣೆ ತರಲು ಮತ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.[ಪಂಚರಾಜ್ಯ ಚುನಾವಣಾ ಪ್ರಚಾರಕ್ಕೆ ಮಹಿಳಾ ಮಣಿಗಳ ಗ್ಲಾಮರ್]
ಸೋಲಿನ ಭಯ
ಅಖಿಲೇಶ್ ತಾನೊಬ್ಬ ಶುದ್ಧ ಹಸ್ತದ ರಾಜಕಾರಣಿ ಎಂದು ಬಿಂಬಸಲು ಹೊರಟಿದ್ದಾರೆ. ಆದರೆ ಅವರಿಗೆ ಸೋಲಿನ ಭಯ ಯಾವ ಮಟ್ಟಕ್ಕೆ ಇದೆ ಅಂದರೆ ಅತ್ಯಂತ ಭ್ರಷ್ಟ ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ. ಅಗಸ್ಟಾ ವೆಸ್ಟ್ ಲ್ಯಾಂಡ್, ಆದರ್ಶ್, 2ಜಿ, ಕಾಮನ್ ವೆಲ್ತ್, ಕಲ್ಲಿದ್ದಲು ಹಗರಣ ಹೀಗೆ ಕಾಂಗ್ರೆಸ್ ಭೂಮಿಯಿಂದ ಆಕಾಶದವರೆಗಿನ ಹಗರಣ ಕ್ರೆಡಿಟ್ ಪಡೆಯಬಹುದು. ಅಂತ ಪಕ್ಷದ ಜತೆ ಕೈ ಜೋಡಿಸಿದ್ದಾರೆ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಚುನಾವಣೆಗೂ ಮೊದಲೇ ಸೋಲು
ನೀವು ಆಖಿಲೇಶ್ ಮತ್ತು ರಾಹುಲ್ ಗಾಂಧಿ ಚಿತ್ರವನ್ನು ಜತೆಗೇ ನೋಡುತ್ತಿದ್ದೀರಿ. ರಾಜ್ಯದಲ್ಲಿ ಅಖಿಲೇಶ್ ಅಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ, ಅಷ್ಟೊಂದು ಕ್ಲೀನ್ ಇಮೇಜ್ ಇದ್ದರೆ ಕಾಂಗ್ರೆಸ್ ಜತೆ ಕೈ ಜೋಡಿಸುವ ಅಗತ್ಯ ಏನಿತ್ತು? ಅಖಿಲೇಶ್ ಚುನಾವಣೆಗೂ ಮೊದಲೇ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಕಳ್ಳರು ಕ್ರಿಮಿನಲ್ ಗಳಿಗೆ ಪಕ್ಷದ ಟಿಕೆಟ್ ನೀಡಲಾಗಿದೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಸೈಕಲ್ ಹಗರಣ
ನೋಯ್ಡಾ ಕೂಡ ಅಖಿಲೇಶ್ ಸರಕಾರದ ಸೈಕಲ್ ಟ್ರಾಕ್ ಹಗರಣಗಳಿಗೆ ಸಾಕ್ಷಿಯಾಗಿದೆ. ಕೇಂದ್ರ ಸರಕಾರ 18 ಕೋಟಿ ರೂಪಾಯಿಗಳಲ್ಲಿ ಒಂದು ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡುತ್ತದೆ. ಅದೇ ರಸ್ತೆ ನಿರ್ಮಾಣಕ್ಕೆ ಅಖಿಲೇಶ್ ಯಾದವ್ ಸರಕಾರ 31 ಕೋಟಿ ಖರ್ಚು ಮಾಡಿದೆ ಎಂದು ಹೇಳಿದರು.
ಇತಿಹಾಸ ಸೃಷ್ಟಿಸಿ
ನಾನು ಪಂಕಜ್ ಸಿಂಗ್ ಪರವಾಗಿ ಮತ ಕೇಳಲು ಬಂದಿಲ್ಲ. ನನಗೆ ಗೊತ್ತು ನೊಯ್ಡಾದಲ್ಲಿ ಬಿಜೆಪಿಯೇ ಗೆಲ್ಲುವುದು. ಆದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ, ಪಂಕಜ್ ಸಿಂಗ್ ಜಯ ಉತ್ತರ ಪ್ರದೇಶ ಚುನಾವಣಾ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಬೇಕು. ಬಿಎಸ್ಪಿ ಮತ್ತು ಎಸ್ಪಿ ರಾಜ್ಯವನ್ನು ಲೂಟಿ ಹೊಡೆದಿದ್ದು ಬದಲಾವಣೆಗಾಗಿ ಮತದಾನ ಮಾಡಿ ಎಂದು ಕೇಳಿಕೊಂಡಿದ್ದಾರೆ.
ರಾಹುಲ್ ಪ್ರಶ್ನೆಗೆ ಶಾ ಪ್ರತ್ಯುತ್ತರ
ಕಳೆದ ಎರಡೂವರೆ ವರ್ಷದಲ್ಲಿ ನರೇಂದ್ರ ಮೋದಿ ದೇಶಕ್ಕೆ ಏನು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಕೇಳುತ್ತಿದ್ದಾರೆ. ಅವರಿಗೆ ಮೋದಿ ಪರವಾಗಿ ಹೇಳುತ್ತೇನೆ ನಾವು ದೇಶಕ್ಕೆ ಮೊದಲನೆಯದಾಗಿ ಮಾತನಾಡುವ ಪ್ರಧಾನಿಯನ್ನು ನೀಡಿದ್ದೇವೆ. ಈ ಹಿಂದೆ ಮನಮೋಹನ್ ಸಿಂಗ್ ಸೋನಿಯಾ ಮಾತನ್ನು ಕೇಳುತ್ತಿದ್ದರು. ಯುಪಿಎ ಆಡಳಿತಾವಧಿಯಲ್ಲಿ ಸೈನಿಕರು ಸಾಯುತ್ತಿದ್ದರು, ಆದರೆ ಈಗ ಮೋದಿ ಆಡಳಿತದಲ್ಲಿ ಪಾಕಿಸ್ತಾನದ ಸೈನಿಕರ ಬುಲೆಟ್ಟಿಗೆ ನಮ್ಮ ಸೈನಿಕರು ಬಾಂಬಿನಿಂದ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.