ಜೈಲಿನಿಂದಲೇ ಶಶಿಕಲಾ ತ.ನಾಡು ಸರಕಾರ ನಡೆಸುತ್ತಿರುವುದು ಹೇಗೆ?
ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಹೊರಗಿನವರು ಭೇಟಿ ಮಾಡುವ ವಿಚಾರದಲ್ಲಿ ಕೆಲವು ನಿಬಂಧನೆಗಳಿವೆ. ಅಂಥದ್ದರಲ್ಲಿ ಶಶಿಕಲಾ ನಟರಾಜನ್ ಗೆ ಸಿಕ್ಕಿರುವ ವಿನಾಯಿತಿ ಬಗ್ಗೆ ತಿಳಿದರೆ ಆಶ್ಚರ್ಯ ಆಗುತ್ತದೆ.
ಬೆಂಗಳೂರು, ಏಪ್ರಿಲ್ 6: ಮುಖ್ಯಮಂತ್ರಿ ಹುದ್ದೆಗೆ ಏರಲು ಕಾಯುತ್ತಿದ್ದ ಶಶಿಕಲಾ ನಟರಾಜನ್ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಯಾಗಿ ಜೈಲಿನಲ್ಲಿದ್ದಾರೆ. ಮಂಚ, ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂಬುದು ಸೇರಿದಂತೆ ಆಕೆಯ ಬಹಳ ಬೇಡಿಕೆಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹರದ ಜೈಲು ಅಧಿಕಾರಿಗಳು ನಿರಾಕರಿಸಿದರು. ಆಕೆ ತನ್ನನ್ನು ರಾಜಕಾರಣಿ ಎಂದು ಕರೆದುಕೊಂಡಿದ್ದು, ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ಪ್ರಮುಖ ಬೇಡಿಕೆ ಇಟ್ಟಿದ್ದಾರೆ.
ನಿಯಮಗಳ ಪ್ರಕಾರ ಶಶಿಕಲಾ ತಿಂಗಳಿಗೆ ಇಬ್ಬರನ್ನು ಮಾತ್ರ ಭೇಟಿಯಾಗಬಹುದು. ಆದರೆ ನಿಯಮಗಳು ಪಕ್ಕಕ್ಕೆ ಸರಿದಿವೆ. ಮೂವತ್ತೊಂದು ದಿನದಲ್ಲಿ 19 ಮಂದಿಯನ್ನು ಭೇಟಿಯಾಗಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ನರಸಿಂಹಮೂರ್ತಿ ತಿಳಿಸಿದ್ದಾರೆ.[ಶಶಿಕಲಾ ನಟರಾಜನ್ ಬೇರೆ ಜೈಲಿಗೆ ವರ್ಗ ಸಾಧ್ಯವಿಲ್ಲ: ಹೈಕೋರ್ಟ್]
ಶಶಿಕಲಾ ಪತಿ ನಟರಾಜನ್ ಆಗಾಗ ಭೇಟಿಯಾಗುತ್ತಾರೆ. ಆದರೆ ಶಶಿಕಲಾರನ್ನು ವಕೀಲರೂ ಸೇರಿದಂತೆ ಇನ್ನೂ ಹಲವರು ಭೇಟಿಯಾಗಿದ್ದಾರೆ. ಸಂಸದ ತಂಬಿದುರೈ, ದಿನಕರನ್, ಶಾಸಕರು, ವಲರ್ ಮತಿ, ಗೋಕುಲ ಇಂದಿರಾ, ಸಿಆರ್ ಸರಸ್ವತಿ, ಮನ್ನಾರ್ ಗುಡಿಯ ಹಲವು ಪ್ರತಿನಿಧಿಗಳು ಪದೇ ಪದೇ ಭೇಟಿ ನೀಡಿದ್ದಾರೆ.[ಶಶಿಕಲಾ ನಟರಾಜನ್ ಗೆ ಜೈಲಿನಲ್ಲಿ ಏನೇನು ಸಿಗುತ್ತಿದೆ?]
ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಜೈಲು ಅಧಿಕಾರಿಗಳು, ಆರೋಪಿ ಕೈದಿಯನ್ನು ವಾರಕ್ಕೊಮ್ಮೆ ಭೇಟಿ ಮಾಡಬಹುದು ಎಂದು ಹೇಳಿದ್ದಾರೆ. ಇನ್ನು ಕಾರಾಗೃಹ ಡಿಜಿ ಎಚ್.ಎನ್.ಸತ್ಯನಾರಾಯಣ ರಾವ್, ಭೇಟಿ ನಿಯಮಗಳು ಕಡ್ಡಾಯವೇನಲ್ಲ. ಜೈಲರ್ ತನ್ನ ವಿವೇಚನೆಯಿಂದ ನಿರ್ಧರಿಸಬಹುದು ಎಂದಿದ್ದಾರೆ.