ಉತ್ತರ ಕರ್ನಾಟಕದ ಭಾಗಕ್ಕೆ ಪ್ರತಿದಿನದ ಹೊಸ ರೈಲಿಗೆ ಬೇಡಿಕೆ, ಮಾರ್ಗಗಳು
ಬೆಂಗಳೂರು, ಜುಲೈ 01: ಕರ್ನಾಟಕದಲ್ಲಿ ಹೊಸ ಹೊಸ ರೈಲುಗಳ ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇದೆ. ವಂದೇ ಭಾರತ್ ಮಾತ್ರವಲ್ಲ ಹೊಸ ಮಾರ್ಗದಲ್ಲಿ ಇಂಟರ್ ಸಿಟಿ, ಪ್ಯಾಸೆಂಜರ್ ರೈಲು ಸೇವೆಯನ್ನು ಆರಂಭಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಗದಗ ರೈಲು ಬಳಕೆದಾರರು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಬೇಕಾದ ಹೊಸ ರೈಲುಗಳ ಬೇಡಿಕೆಯನ್ನು ಇಟ್ಟಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಬಿಜೆಪಿ ಸಂಸದ ವಿ. ಸೋಮಣ್ಣ ಅವರನ್ನು ಟ್ಯಾಗ್ ಮಾಡಿದ್ದು, ರೈಲು ಸೇವೆ ಆರಂಭಿಸಿ ಎಂದು ಮನವಿ ಮಾಡಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈನಲ್ಲಿ 2024ರ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ರೈಲ್ವೆ ಬಜೆಟ್ ಅನ್ನು ಸಹ ಇದರ ಜೊತೆಗೆ ಮಂಡಿಸಲಾಗುತ್ತದೆ. ಅದರಲ್ಲಿ ಹೊಸ ರೈಲುಗಳ ಘೋಷಣೆ ಮಾಡುವಂತೆ ಬೇಡಿಕೆ ಇಡಲಾಗಿದೆ.
ಯಾವ-ಯಾವ ಮಾರ್ಗಗಳು?; ಸಚಿವ ವಿ. ಸೋಮಣ್ಣಗೆ ಉತ್ತರ ಕರ್ನಾಟಕದ ಭಾಗಕ್ಕೆ ಹೊಸ ದೈನಂದಿನ ರೈಲುಗಳನ್ನು ಓಡಿಸಲು ಮನವಿ ಸಲ್ಲಿಸಲಾಗಿದೆ. ಯಾವ-ಯಾವ ಮಾರ್ಗ ಎಂದು ಸಹ ಟ್ವೀಟ್ ಮಾಡಲಾಗಿದೆ.
* ಬೆಂಗಳೂರು-ಮುಂಬೈ (ವಯಾ ಗದಗ, ಬಾಗಲಕೋಟೆ)
* ಬೆಂಗಳೂರು-ರಿಷಿಕೇಶ್ (ವಯಾ ಗದಗ, ವಿಜಯಪುರ)
* ಪಂಢರಪುರ-ತಿರುಪತಿ (ವಯಾ ವಿಜಯಪುರ, ಹೊಸಪೇಟೆ, ಬಳ್ಳಾರಿ)
* ಬಳ್ಳಾರಿ-ಮಂಗಳೂರು ಇಂಟರ್ಸಿಟಿ (ವಯಾ ಕೊಪ್ಪಳ, ಹುಬ್ಬಳ್ಳಿ, ಅಂಕೋಲಾ)
ಗದಗ ರೈಲು ಬಳಕೆದಾರ ಟ್ವೀಟ್ಗೆ ಹಲವು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಪಂಢರಪುರ-ತಿರುಪತಿ ಬದಲು ಕಜ್ಜಡೋಣಿ-ತಿರುಪತಿ ( ವಯಾ ವಿಜಯಪುರ, ಹೊಸಪೇಟೆ, ಬಳ್ಳಾರಿ) ರೈಲು ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು-ಮುಂಬೈ ನಡುವೆ (ವಯಾ ಗದಗ, ಬಾಗಲಕೋಟೆ) ನಡುವೆ ರೈಲು ಓಡಿಸಬೇಕು.
ಬೆಂಗಳೂರು-ರಿಷಿಕೇಶ್ ಮಾರ್ಗದಲ್ಲಿ (ವಯಾ ಗದಗ, ಬಾಗಲಕೋಟೆ, ವಿಜಯಪುರ) ಮೂಲಕ ಸಂಚಾರ ನಡೆಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
ಸಚಿವ ವಿ. ಸೋಮಣ್ಣ ರೈಲ್ವೆ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ನೈಋತ್ಯ ರೈಲ್ವೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ರಾಜ್ಯದ ರೈಲು ಯೋಜನೆಗಳ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ.
ಮಾನ್ಯ @VSOMANNA_BJP ಅವರಿಗೆ ವಿನಂತಿ ಏನಂದರೆ ಉತ್ತರ ಕರ್ನಾಟಕದ ಭಾಗಕ್ಕೆ ಹೊಸ ದೈನಂದಿನ ರೈಲು ಓಡಿಸಲು ಮನವಿ
— ಗದಗ ರೈಲು ಬಳಕೆದಾರರು Gadag Railway Users (@GadagRailUsers) June 30, 2024
1. ಬೆಂಗಳೂರು - ಮುಂಬೈ(ವಯಾ ಗದಗ ಬಾಗಲಕೋಟ)
2. ಬೆಂಗಳೂರು- ರಿಷಿಕೇಶ್ (ವಯಾ ಗದಗ ವಿಜಯಪುರ)
3.ಪಂಢರಪುರ- ತಿರುಪತಿ ( ವಯಾ ವಿಜಯಪುರ, ಹೊಸಪೇಟೆ, ಬಳ್ಳಾರಿ)
4. ಬಳ್ಳಾರಿ- ಮಂಗಳೂರು ಇಂಟರಸಿಟಿ (ವಯಾ ಕೊಪ್ಪಳ ಹುಬ್ಬಳ್ಳಿ ಅಂಕೋಲಾ)
ಹಲವು ವರ್ಷಗಳಿಂದ ವಿಳಂಬವಾಗಿರುವ ರೈಲು ಯೋಜನೆಗಳನ್ನು ಪೂರ್ಣಗೊಳಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 9 ರೈಲು ಯೋಜನೆಗಳನ್ನು ಪೂರ್ಣಗೊಳಿಸಲು ಗಡುವು ನೀಡಿದ್ದಾರೆ.
ಉತ್ತರ ಕರ್ನಾಟಕ ಮತ್ತು ಕರಾವಳಿ ಸಂಪರ್ಕಿಸಲು ವಿಜಯಪುರ-ಮಂಗಳೂರು ನಡುವೆ ಪ್ರತಿದಿನದ ಎಕ್ಸ್ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಹುಬ್ಬಳ್ಳಿ-ಮಂಗಳೂರು, ಹುಬ್ಬಳ್ಳಿ-ಮೈಸೂರು ನಡುವೆ ಇಂಟರ್ ಸಿಟಿ ರೈಲು ಓಡಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಕೇಂದ್ರ ಬಜೆಟ್ 2024ರಲ್ಲಿ ಕರ್ನಾಟಕಕ್ಕೆ ಹೊಸ ಕೊಡುಗೆಗಳು ಘೋಷಣೆಯಾಗುವ ನಿರೀಕ್ಷೆ ಇದೆ. ವಿ. ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವರು, ಅಲ್ಲದೇ ಬಜೆಟ್ ಮಂಡಿಸುವ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 17 ಸ್ಥಾನದಲ್ಲಿ ಜಯಗಳಿಸಿದೆ. ಆದ್ದರಿಂದ ಹೊಸ ರೈಲು ಘೋಷಣೆಯಾಗಲಿದೆಯೇ? ಕಾದು ನೋಡಬೇಕು.












Click it and Unblock the Notifications