ಮಂಗಳೂರು; 3 ರೈಲು ವಿಸ್ತರಣೆಗೆ ಪಾಲಕ್ಕಾಡ್ ರೈಲು ವಿಭಾಗಕ್ಕೆ ಮನವಿ
ಮಂಗಳೂರು, ಡಿಸೆಂಬರ್ 08; ಪಾಲಕ್ಕಾಡ್ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಮಂಗಳೂರಿನ ವಿವಿಧ ರೈಲುಗಳ ಬಗ್ಗೆ ಚರ್ಚೆಗಳು ನಡೆದಿವೆ. ರೈಲು ಸೇವೆ ವಿಸ್ತರಣೆ, ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳ ಗಮನ ಸೆಳೆಯಲಾಗಿದೆ.
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಪಾಲ್ಘಾಟ್ ವಿಭಾಗ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರು ಮಂಗಳೂರು ವ್ಯಾಪ್ತಿಯ ರೈಲು ಸೇವೆಗಳ ಬಗ್ಗೆ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ.

ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ; ಈ ಸಭೆಯಲ್ಲಿ ಮಂಗಳೂರು-ಮುಂಬೈ ಸಿಎಸ್ಟಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್, ಮಂಗಳೂರು-ಬೆಂಗಳೂರು ಎಕ್ಸ್ಪ್ರೆಸ್, ವಿಜಯಪುರ-ಮಂಗಳೂರು ಪ್ರತಿದಿನದ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರದ ಪ್ರಸ್ತಾವನೆ ಸಿದ್ಧವಾಗಿದೆ. ಇದಕ್ಕೂ ಮೊದಲು ಮಂಗಳೂರು ಜಂಕ್ಷನ್ನಿಂದ ಸಂಚಾರ ನಡೆಸುವ ಈ ಮೂರು ರೈಲುಗಳನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಸಭೆಯಲ್ಲಿ ಮಾತನಾಡಿದ ರೈಲ್ವೆ ಇಲಾಖೆ ಅಧಿಕಾರಿಗಳು ಬೇಡಿಕೆಗೆ ಮನ್ನಣೆ ನೀಡಿದರು. ಮಂಗಳೂರು-ವಿಜಯಪುರ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗುತ್ತದೆ. ಆಗ ವೇಳಾಪಟ್ಟಿ ಬದಲಾವಣೆಯಾಗಲಿದೆ ಎಂದು ಮಾಹಿತಿ ನೀಡಿದರು.
ರಾಮೇಶ್ವರಂ-ಮಂಗಳೂರು ಹೊಸ ರೈಲು ಪ್ರಸ್ತಾವನೆ ರೈಲ್ವೆ ಸಚಿವಾಲಯದ ಪರಿಶೀಲನೆಯಲ್ಲಿದೆ. ಒಪ್ಪಿಗೆ ನೀಡಿದ ಬಳಿಕ ರೈಲು ಸೇವೆ ಆರಂಭಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಈ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದರು.
ಮುಂಬೈ ಸಿಎಸ್ಟಿ-ಮಂಗಳೂರು ಜಂಕ್ಷನ್ ರೈಲನ್ನು ಸದ್ಯಕ್ಕೆ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಕೊಂಕಣ ರೈಲ್ವೆ ವಲಯದಲ್ಲಿ ರೈಲು ವೇಗವಾಗಿ ಕ್ರಮಿಸಿದರೆ ಮಂಗಳೂರಿನಲ್ಲಿ ಮಂಗಳೂರು ಜಂಕ್ಷನ್ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬಹುದು ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಕರ್ನಾಟಕದ ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ. ಹೊರ ರಾಜ್ಯಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿತ್ಯ ಸಾವಿರಾರು ಜನರು ಮಂಗಳೂರು ನಗರಕ್ಕೆ ಆಗಮಿಸುತ್ತಾರೆ. ಬಂದರು ನಗರಿಯಾದ ಮಂಗಳೂರು ವಾಣಿಜ್ಯ ವ್ಯವಹಾರಗಳಿಗೆ ಪ್ರಸಿದ್ಧಿಯಾಗಿದೆ. ಆದರೆ ಜನರ ಬೇಡಿಕೆಗೆ ತಕ್ಕಂತೆ ರೈಲು ಸೌಲಭ್ಯಗಳು ಇಲ್ಲ ಎಂಬ ಆರೋಪವೂ ಇದೆ.
ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳು ಅಭಿವೃದ್ಧಿಯಾಗುತ್ತಿವೆ. ಆದ್ದರಿಂದ ಹೆಚ್ಚಿನ ರೈಲುಗಳನ್ನು ಒದಗಿಸಬೇಕು ಎಂದು ಬೇಡಿಕೆ ಇಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಎಲ್ಲಾ ರೈಲುಗಳು ಬಂದರೆ ಜನರಿಗೆ ಅನುಕೂಲವಾಗಲಿದೆ ಎಂದು ಆಗ್ರಹಿಸಲಾಗಿದೆ.
ಮಂಗಳೂರನ್ನು ಪಾಲಕ್ಕಾಡ್ ವಿಭಾಗದಿಂದ ಪ್ರತ್ಯೇಕವಾಗಿಸಿ ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸಬೇಕು ಎಂಬ ಬೇಡಿಕೆಯೂ ಇದೆ. ತಾರತಮ್ಯ ನೀತಿಯನ್ನು ಅನುಸರಿಸಲಾಗುತ್ತಿದೆ ಎಂಬ ಆರೋಪವಿದೆ. ಮಂಗಳೂರು ರೈಲು ನಿಲ್ದಾಣವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪವನ್ನು ಪಾಲಕ್ಕಾಡ್ ವಿಭಾಗದ ಡಿಆರ್ಎಂ ನಿರಾಕರಿಸಿದ್ದಾರೆ.
ಮಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬ ಬೇಡಿಕೆಯೂ ಇದೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮಂಗಳೂರು-ಮಡಗಾಂವ್ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಆದರೆ ರೈಲು ಸಂಚಾರ ಯಾವಾಗ ಆರಂಭವಾಗುತ್ತದೆ ಎಂಬ ದಿನಾಂಕ ನಿಗದಿಯಾಗಿಲ್ಲ.












Click it and Unblock the Notifications