ನಾಗದೋಷ ಎಂದರೇನು, ಅದರಿಂದ ಪಾರಾಗುವುದು ಹೇಗೆ?
ಸುಬ್ರಮಣ್ಯ, ಕಾಳಸರ್ಪ ಮತ್ತು ಕುಜದೋಷ ತೊಂದರೆ ಇರುವವರಿಗೆ ಪರಿಹಾರ ನೀಡುವ ದೇವರು ಎನ್ನುವುದು ಪ್ರತೀತಿ. ಈ ಪೂಜೆಯ ವಿಧಿ ನಿಯಮದಂತೆ ಎಂಟು ಜಾತಿಯ ನಾಗಗಳಾದ ಸರ್ಪ, ಅನಂತ, ಶೇಷ, ಕಪಿಲಾ, ನಾಗ, ಕಾರ್ಕೋಟಕ, ಶಂಖಪಾಲ ಮತ್ತು ಭೂದರ ಇವರುಗಳಿಗೆ ಪ್ರಧಾನ ಹೋಮ, ಕಳಸಪೂಜೆ, ನವಶಕ್ತಿ ಪೂಜೆ, ಮಂಡಲ ಪೂಜೆ ಮುಂತಾದ ಹದಿನಾರು ರೀತಿಯ ಪೂಜೋಪಚಾರಗಳ ಮೂಲಕ ಬಲಿದಾನ ಕೊಡಲಾಗುವುದು.
ಈ ಪೂಜೆಯಲ್ಲಿ ಒಟ್ಟು ಎರಡು ಮಂಡಲವನ್ನು ಬರೆಯಲಾಗುವುದು. ಬಲಬದಿಯಲ್ಲಿ ಒಂಬತ್ತು ಚೌಕಗಳು ಮತ್ತು ಎಡಮಂಡಲದ ಸುತ್ತ ನಾಗದೇವರ ಶರೀರದ ರಚನೆ ಮತ್ತು ತುದಿಯಲ್ಲಿ ಹೆಡೆಯ ಚಿತ್ರ ವಿರುತ್ತದೆ. ಬಲಬದಿಯ ಮಂಡಲದಲ್ಲಿರುವ ಒಂಬತ್ತು ಚೌಕಗಳಲ್ಲಿ ಒಂಬತ್ತು ಪ್ರಧಾನ ದೇವತೆಗಳನ್ನು ಆಹ್ವಾನಿಸಲಾಗುವುದು. ಮಂಡಲದ ಮಧ್ಯೆ 52 ಚೌಕಗಳಲ್ಲಿ ನಾಗದೇವರ ವಿವಿಧ ಅವತಾರಗಳ ಸ್ಥಾನವಿರುತ್ತದೆ.
ಮೊದಲ ಮಂಡಲದ 9 ಮತ್ತು ಎರಡನೇ ಮಂಡಲದ 76 ಸ್ಥಾನಗಳಲ್ಲಿ ಕಲ್ಪೋಕ್ತ ಪೂಜೆ ಮುಂತಾದ ವಿಧಿವಿಧಾನ ನಡೆದು, ಪ್ರತಿಯೊಂದು ಚೌಕದಲ್ಲೂ ದರ್ಭೆಯ ಮೇಲೆ ಪಿಂಡ ಅದರ ಮೇಲೆ ಅಪ್ಪ(ಒಂದು ಬಗೆಯ ಭಕ್ಷ್ಯ) ಮತ್ತು ತುಪ್ಪದ ದೀಪ ಮತ್ತು ಹೂವು ಇಡಲಾಗುವುದು. ಶ್ರದ್ದೆ, ಭಕ್ತಿಯಿಂದ ಯಾರು ಆಶ್ಲೇಷ ಪೂಜೆ ನಡೆಸುತ್ತಾರೋ ಅವರ ಎಲ್ಲಾ ಮನದಾಸೆಯನ್ನು ಸುಬ್ರಮಣ್ಯ ನಾಗದೇವರು ನಡೆಸಿ ಕೊಡುತ್ತಾರೆನ್ನುವುದು ನಂಬಿಕೆ.
ರಾಜ್ಯದ ಪ್ರಮುಖ ಸುಬ್ರಮಣ್ಯ ದೇವಾಲಯಗಳು : ಕುಕ್ಕೆ ಸುಬ್ರಮಣ್ಯ ದೇವಾಲಯ, ಕುಡುಪು ಅನಂತಪದ್ಮನಾಭ ದೇವಾಲಯ (ದಕ್ಷಿಣಕನ್ನಡ ಜಿಲ್ಲೆ), ಘಾಟಿ ಸುಬ್ರಮಣ್ಯ ದೇವಾಲಯ, ಮುಚ್ಚಿಲಕೋಡು ಸುಬ್ರಮಣ್ಯ ದೇವಾಲಯ (ಉಡುಪಿ ಜಿಲ್ಲೆ), ಖಡ್ಗೆಶ್ವರಿ ಮೂಲ (ಉಡುಪಿ ಜಿಲ್ಲೆ, ಪಡುಬಿದ್ರೆ ಬಲಿ, ಧಕ್ಕೆದಬಲಿ ಎಂದು ಜನಪ್ರಿಯ), ಹಾದಿಗಲ್ಲು (ಶಿವಮೊಗ್ಗ ಜಿಲ್ಲೆ) ಬೆಂಗಳೂರು ಸಜ್ಜನರಾವ್ ವೃತ್ತದ ಸುಬ್ರಮಣ್ಯ ಸ್ವಾಮಿ ದೇವಾಲಯ, ಹನುಮಂತನಗರದ ಕುಮಾರಸ್ವಾಮಿ ದೇವಾಲಾಯ ಇತ್ಯಾದಿ..