ಕೋಲ್ಕತಾ, ಏಪ್ರಿಲ್ 23 : ಭಾರತದ ಕ್ರಿಕೆಟ್ ಲೋಕದಲ್ಲಿ ಅರುಣ್ ಲಾಲ್ ವಿಶಿಷ್ಟ ಹೆಸರು. ಟೆಸ್ಟ್ ಕ್ರಿಕೆಟಲ್ಲಿ ಅವರು ಹೆಚ್ಚು ವರ್ಷ ಬಾಳದಿದ್ದರೂ, ಕಾಮೆಂಟರಿ ಕ್ಷೇತ್ರದಲ್ಲಿ ಅವರ ದನಿಯನ್ನು, ಅವರು ಮಾತಾಡುವ ಶೈಲಿಯನ್ನು ಇಷ್ಟಪಡದವರೇ ಇಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ದನಿಯೇ ಕೇಳಿಬರುತ್ತಿಲ್ಲ.
ಇದಕ್ಕೆ ಕಾರಣ ಅಪರೂಪದಲ್ಲಿ ಅಪರೂಪವೆನಿಸುವಂಥ ಮತ್ತು ಡೇಂಜರಸ್ ಎಂದು ಕರೆಯಲಾಗುವ ದವಡೆ ಕ್ಯಾನ್ಸರಿಂದ ಅವರು ಬಳಲುತ್ತಿದ್ದಾರೆ. ಆದರೆ, ಸಂತಸದ ಸಂಗತಿಯೆಂದರೆ, ಜೀವವನ್ನೇ ಬಸಿದುಹಾಕುವ ಆ ಮಹಾಮಾರಿ ಕ್ಯಾನ್ಸರಿಂದ ಚೇತರಿಸಿಕೊಳ್ಳುತ್ತಿದ್ದಾರೆ.
"ಇದು ತುಂಬಾ ಅಪರೂಪದ ಮತ್ತು ಮಾರಣಾಂತಿಕ ಕ್ಯಾನ್ಸರ್. ಇದರ ಸೂಚನೆ ಜನವರಿಯಲ್ಲೇ ಸಿಕ್ಕಿದ್ದರಿಂದ ಕೂಡಲೆ ಚಿಕಿತ್ಸೆ ಆರಂಭಿಸಲಾಗಿದೆ. ದೇವರ ದಯೆಯಿಂದ ನಾನು ಚಿಕಿತ್ಸೆಗೆ ಸ್ಪಂದಿಸುತ್ತಿದ್ದೇನೆ. ನನಗೆ ಪುನರ್ಜನ್ಮ ಸಿಕ್ಕಂತಾಗಿದೆ" ಎಂದು ಕೋಲ್ಕತಾದ ಆಸ್ಪತ್ರೆಯಿಂದ ಹೇಳಿಕೆ ನೀಡಿದ್ದಾರೆ.
ಅರುಣ್ ಲಾಲ್ ಅವರು ಭಾರತದ ಪರ 16 ಟೆಸ್ಟ್, 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ನಲ್ಲಿ ಅವರು 6 ಅರ್ಧಶತಕಗಳನ್ನು ಗಳಿಸಿದ್ದು, ಗರಿಷ್ಠ 93 ರನ್. ಅವರ ಮುಂದಿನ ಜೀವನ ಸುಖವಾಗಿರಲಿ ಹಾಗೂ ಮತ್ತೆ ಕಾಮೆಂಟರಿ ಕ್ಷೇತ್ರಕ್ಕೆ ಮತ್ತೆ ಬರಲಿ ಎಂದು ಹಾರೈಸೋಣ.