ಸಿಡ್ನಿ, ಜ. 24: ಟೀಂ ಇಂಡಿಯಾ ನಾಯಕನಾಗಿ ಎಂಎಸ್ ಧೋನಿ ಅವರು ಅಗತ್ಯಕ್ಕಿಂತ ಹೆಚ್ಚು ಕಾಲ ಉಳಿದುಕೊಂಡಿದ್ದಾರೆ. ಇದರಿಂದ ತಂಡದ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ ರೂಢಿಸಿಕೊಳ್ಳುವುದು ಮುಖ್ಯ. ಆದರೆ, ಯಶಸ್ವಿ ನಾಯಕನಾದವನು ತನ್ನ ಕಾರ್ಯಕ್ಷಮತೆ ಕುಗ್ಗಿದೊಡನೆ ಇತರರಿಗೆ ಜವಾಬ್ದಾರಿಯನ್ನು ವಹಿಸಿಕೊಡಬೇಕು ಇಲ್ಲದಿದ್ದರೆ ತಂಡ ಹಾಗೂ ಇತರೆ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ. ಧೋನಿ ಅವರು ಈಗ ಈ ಹಂತದಲ್ಲಿದ್ದಾರೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ಅಂಕಣದಲ್ಲಿ ಬರೆದಿದ್ದಾರೆ.[ಕೊಹ್ಲಿರನ್ನು ಕ್ಯಾಪ್ಟನ್ ಮಾಡಲು ಇದು ಸಕಾಲ: ಪ್ರಸನ್ನ]
ಟೀಂ ಇಂಡಿಯಾಕ್ಕೆ ಈಗ ಹೊಸ ಐಡಿಯಾಗಳು, ಹೊಸ ಹುರುಪು ಬೇಕಿದೆ. ಇಲ್ಲದಿದ್ದರೆ ನಾಲ್ಕು ಇನ್ನಿಂಗ್ಸ್ ಗಳಲ್ಲಿ 1,300 ರನ್ ಗಳನ್ನು ಟೀಂ ಇಂಡಿಯಾ ಹೊಡೆಸಿಕೊಳ್ಳಬೇಕಾಗಿರಲಿಲ್ಲ. ಫ್ಲಾಟ್ ಪಿಚ್ ಗಳಷ್ಟೇ ಅಲ್ಲ ಬೌಲಿಂಗ್ ಮೊನಚು ಕಳೆದುಕೊಂಡಿರುವುದು ಇಲ್ಲಿ ಮುಖ್ಯ ಎಂದಿದ್ದಾರೆ.[ಸೋತ ಧೋನಿ ಕಿಚಾಯಿಸೋದು ನಿಂತಿಲ್ಲ!]
ಜಡೇಜ ಅವರು ಮನುಕಾ ಒವಲ್ ನಲ್ಲಿ ಮಿಚೆಲ್ ಮಾರ್ಷ್ ರನ್ನು ಕಾಡಲು ಧೋನಿ ಉತ್ತೇಜಿಸಿದ್ದು ಬಿಟ್ಟರೆ ಉಳಿದಂತೆ ಯಾವುದೇ ರೀತಿಯಲ್ಲಿ ಬೌಲರ್ ಗಳಿಗೆ ಪ್ರೋತ್ಸಾಹ ನೀಡಲಿಲ್ಲ. ಹೆಚ್ಚು ಡಿಫೆನ್ಸ್ ಮೋಡ್ ನಲ್ಲೇ ಧೋನಿ ಆಡಿದ್ದು ಕುತೂಹಲಕಾರಿ ಎಂದು ಬರೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಧೋನಿ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲರು ಎಂದು ಚಾಪೆಲ್ ಬರೆದಿದ್ದಾರೆ.
ಧೋನಿ ಅವರು ತಮ್ಮ ವೃತ್ತಿ ಬದುಕಿನ ಯಶಸ್ಸಿನ ತುದಿ ಮುಟ್ಟಿಯಾಗಿದೆ. ಈಗ ಉಳಿದವರಿಗೆ ಅವಕಾಶ ನೀಡುವ ಕಾಲ ಬಂದಿದೆ ಎಂದಿದ್ದಾರೆ. (ಪಿಟಿಐ)