ಉಡುಪಿ; ಕನ್ನಡ ಶಾಲೆಯಲ್ಲಿ ಮಕ್ಕಳಿದ್ದರೂ ಶಿಕ್ಷಕರಿಲ್ಲ!
ಉಡುಪಿ, ಡಿಸೆಂಬರ್ 28; ಸರ್ಕಾರಿ ಶಾಲೆ ಅದು ಊರಿನ ನೆನಪಿದ ಬುತ್ತಿ. ಜ್ಞಾನ ನೀಡುವ ಅಕ್ಷರ ಧಾಮ. ಸರ್ವ ಧರ್ಮಗಳ ಮಂದಿರ. ಇಂತಹ ಸರ್ಕಾರಿಗಳು ಇಂದು, ವಿದ್ಯಾರ್ಥಿಗಳಿಲ್ಲದೇ ಸೊರಗಿ, ಶಿಕ್ಷರಿಲ್ಲದೇ ಬಾಗಿಲು ಮುಚ್ಚುತ್ತಿವೆ. ಆದರೆ ಬುದ್ಧಿವಂತರ ಜಿಲ್ಲೆಯ ಶಾಲೆಯೊಂದರಲ್ಲಿ ಕನ್ನಡ ಕಲಿಯಬೇಕು ಅಂತ ಬಂದಿರುವ ವಿದ್ಯಾರ್ಥಿಗಳಿದ್ದರೂ, ಖಾಯಂ ಶಿಕ್ಷಕರಿಲ್ಲದೇ ಮುಚ್ಚುವ ಹಂತಕ್ಕೆ ಬಂದಿದೆ. ತಾಯಂದಿರು, ಖಾಯಂ ಶಿಕ್ಷಕರನ್ನು ನೇಮಿಸಿ ಶಾಲೆ ಉಳಿಸಿ ಎನ್ನುವ ಹೋರಾಟಕ್ಕೆ ಮುಂದಾಗಿದ್ದಾರೆ.
"ಐಸಿಯುನಲ್ಲಿ ಪೇಶೆಂಟ್ ಇಲ್ಲಾ ಅಂತ ಹಾಸ್ಪಿಟಲ್ ಮುಚ್ಚಲ್ಲ, ಅಸೆಂಬ್ಲಿಗೆ ಸದಸ್ಯರು ಬರೋಲ್ಲ ಅಂತ ಅಸೆಂಬ್ಲಿ ಮುಚ್ಚಲ್ಲ. ಹಾಗೆಯೇ ಎಲ್ಲಿಯವರೆಗೆ ಕನ್ನಡ ಕಲಿಬೇಕು ಅಂತ ಒಬ್ಬ ವಿದ್ಯಾರ್ಥಿ ಶಾಲೆ ಬಂದು ಕೂರ್ತಾನೋ ಅವನಿಗೆ ಕನ್ನಡದಲ್ಲೇ ಕಲಿಸೋದು ಸರ್ಕಾರದ ಕರ್ತವ್ಯ"
ಅಬ್ಬಾ...ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಅನಂತ್ ನಾಗ್ ಹೊಡೆಯುವ ಈ ಡೈಲಾಗ್ ಸಾವಿರಾರು ಜನ ಮೆಚ್ಚಿದ್ದರು. ತಮ್ಮೂರಿನ ಸರ್ಕಾರಿ ಶಾಲೆ ಉಳಿಸುವ ಪಣ ತೊಟ್ಟಿದ್ದರು. ಆದರೆ ಅದು ಅಂದಿನ ಸಮಯಕ್ಕೆ ಮಾತ್ರ, ಸೀಮಿತ ಆಯಿತೋ ಗೊತ್ತಿಲ್ಲ. ಯಾಕೆಂದರೆ ಅದೆಷ್ಟೋ ಹಳ್ಳಿಯ ಶಾಲಾ, ವಿದ್ಯಾರ್ಥಿಗಳು ಮುಂದೆ ಬಂದು ಕನ್ನಡದಲ್ಲಿ ಕಲಿತೀವಿ ಅಂದರೂ ಶಿಕ್ಷಕರೇ ಇಲ್ಲವಾಗಿದೆ.

ಆಆಇಈ ಅಕ್ಷರ ಮಾಲೆ ಹೇಳಿ ಕೊಡಲು ಖಾಯಂ ಶಿಕ್ಷಕರೇ ಇಲ್ಲ. ಹೋರಾಟದ ಮೂಲಕ ಕನ್ನಡ ಶಾಲೆ ಉಳಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಉಡುಪಿಯ ದೂಪದಕಟ್ಟೆಯ ಅಣ್ಣಾಲುವಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ.
1961ರಲ್ಲಿ ಆರಂಭವಾದ ಈ ಜ್ಞಾನ ದೇಗುಲದಲ್ಲಿ 1.40 ಎಕರೆ ವಿಶಾಲ ಜಾಗ, ಸುಸಜ್ಜಿತ ಕಟ್ಟಡ, ಶೌಚಾಲಯ, ಭೋಜನಾಲಯ ಆಟದ ಮೈದಾನ ಹೀಗೆ ಎಲ್ಲಾ ಸೌಲಭ್ಯವಿದೆ. ಒಂದರಿಂದ ಐದನೇ ತರಗತಿಯ ವರೆಗೆ ಒಟ್ಟು 29 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ಎರಡು ವರ್ಷಗಳಿಂದ ಖಾಯಂ ಶಿಕ್ಷಕರು ಇಲ್ಲ ಎನ್ನುವ ಕೊರಗು ಮಕ್ಕಳ ಪೋಷಕರದ್ದು. ಖಾಯಂ ಶಿಕ್ಷಕರು ಇಲ್ಲದೇ ಮಕ್ಕಳ ಸುಂದರ ಭವಿಷ್ಯ ಕಮರಿ ಹೋಗಬಹುದು ಎನ್ನುವ ಆತಂಕ ಹಳ್ಳಿಯವರದ್ದಾಗಿದೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೋಷಕಿ ಸುಮಿತ್ರಾ, "ಬಡ ಮಕ್ಕಳಿಗೆ ಸರ್ಕಾರಿ ಶಾಲೆಯೇ ವಿದ್ಯಾರ್ಜನೆಯ ಆಸೆಗೆ ಆಸರೆಯಾಗಿದೆ. ಆದರೆ ಈ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಖಾಯಂ ಶಿಕ್ಷಕರಿಲ್ಲ. ಸರ್ಕಾರಕ್ಕೆ ಹಲವು ಬಾರಿ ಕೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳಲ್ಲಿ ಶಾಲೆಗೆ ಹೋಗುವಾಗಿನ ಉತ್ಸಾಹ ಮರಳಿ ಬರುವಾಗ ಇರೋದಿಲ್ಲ. ಖಾಯಂ ಶಿಕ್ಷಕರಿಲ್ಲದೇ ಪಾಠ ಸರಿಯಾಗಿ ನಡೆಯುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಣ್ಣಾಲು ಶಾಲೆಗೆ ನೇಮಕಗೊಂಡ ಶಿಕ್ಷಕಿಯೊಬ್ಬರು ಅನಾರೋಗ್ಯ ಕಾರಣದಿಂದ ಬರುತ್ತಿಲ್ಲ. ದೂರದ ಬೆಳ್ಳರ್ಪಾಡಿ ಶಾಲೆಯ ಶಿಕ್ಷಕರನ್ನು ಇಲ್ಲಿಗೆ ಹೆಚ್ಚುವರಿ ಶಿಕ್ಷಕರನ್ನಾಗಿ ನೇಮಕ ಮಾಡಿದ್ದಾರೆ. ಇವರು ವಾರದಲ್ಲಿ ಎರಡು ದಿನ ಬರ್ತಾರೆ. ಉಳಿದ ದಿನದಲ್ಲಿ ಊರವರೇ ನೇಮಿಸಿದ ಶಿಕ್ಷಕಿಯೊಬ್ಬರು ಪಾಠ ಮಾಡುತ್ತಿದ್ದಾರೆ. ಹೀಗಾಗಿ ಶಿಕ್ಷಕರಿಲ್ಲದೇ ವಿದ್ಯಾಭ್ಯಾಸ ಮಾಡೋದೆ ಕಷ್ಟವಾಗಿದೆ. 5 ಕಿಲೋಮೀಟರ್ ದೂರದ ಶಾಲೆಗೆ ಕಳಿಸೋದು ಹಳ್ಳಿಯ ಮಹಿಳೆಯರಿಗೆ ಆರ್ಥಿಕವಾಗಿ ಅದು ಕಷ್ಟ. ಹೀಗಾಗಿ ನಮಗೆ ಶಿಕ್ಷಕರನ್ನು ನೇಮಿಸಿ ಎನ್ನುವುದು ಊರ ಮುಗ್ಧ ಜನರ ಒತ್ತಾಯವಾಗಿದೆ.
ಒಟ್ಟಿನ್ನಲ್ಲಿ ಕನ್ನಡ ಶಾಲೆಗಳಲ್ಲಿ ಕಲಿಯಬೇಕು ಅಂತ ಹೋರಾಟ ಮಾಡುವವರೇ ಹೆಚ್ಚು. ಆದರೆ ಕನ್ನಡ ಶಾಲೆಯಲ್ಲಿ ಕಲಿಯಬೇಕಾದರೆ ಮೊದಲು ಕನ್ನಡ ಶಾಲೆಗಳು ಉಳಿಯುವಂತಾಗಬೇಕು. ಶಿಕ್ಷಕರ ಕೊರತೆ ನೀಗಿಸಬೇಕಿದೆ. ಕನ್ನಡ ಉಳಿಯಬೇಕೆನ್ನುವವರು ಮಕ್ಕಳು ಕನ್ನಡ ಶಾಲೆಯಲ್ಲಿ ಕಲಿಯಲು ಬೇಕಾದ ನೆರವು ನೀಡಬೇಕಾಗಿದೆ.
ಇಂದಲ್ಲಾ ನಾಳೆ ನಮ್ಮ ಶಾಲೆಗೆ ಶಿಕ್ಷಕರು ಬರಬಹುದೆನ್ನುವ ಆಸೆ ಕಂಗಳಿಂದ ಪುಟ್ಟ ಮಕ್ಕಳು ಕಾಯುತ್ತಿದ್ದಾರೆ. ಶಾಲೆಗೆ ಯಾರು ಹೋದರೂ ಮಕ್ಕಳಲ್ಲಿ ಇರೋದು ಒಂದೇ ಪ್ರಶ್ನೆ. ಹಾಗಾದ್ರೆ ನಮ್ಮ ಶಾಲೆಗೆ ಮಾಸ್ಟ್ರು ಬರ್ತಾರಲ್ವಾ ಎಂಬುದು. ಇದಕ್ಕುತ್ತರ ಸರ್ಕಾರದಲ್ಲಿದೆ.












Click it and Unblock the Notifications