ಉಡುಪಿ; ವಿದೇಶದಲ್ಲಿರುವ ಮತದಾರರನ್ನು ಸೆಳಯಲು ವಿಶೇಷ ಪ್ರಯತ್ನ
ಉಡುಪಿ, ಮೇ 07; ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10ರ ಬುಧವಾರ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನ ಆಗಬೇಕು ಎಂದು ಚುನಾವಣಾ ಆಯೋಗ, ಜಿಲ್ಲಾಡಳಿತಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಎಲ್ಲ ಅರ್ಹ ಮತದಾರರು ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 10,41,672 ಮತದಾರರು ಇದ್ದಾರೆ. ಇವರಲ್ಲಿ ಪುರುಷರು 5,02,836, ಮಹಿಳೆಯರು 5,38,823 ಮತ್ತು ಇತರರು 13. ಆದರೆ ಜಿಲ್ಲೆಯ ಹಲವು ಮತದಾರರು ವಿದೇಶ ಮತ್ತು ಹೊರ ರಾಜ್ಯದಲ್ಲಿದ್ದಾರೆ. ಈ ಬಾರಿ ಅವರು ತವರಿಗೆ ಬಂದು ಮತದಾನ ಮಾಡುವಂತೆ ಮಾಡಲು ವಿಶೇಷ ಪ್ರಯತ್ನ ನಡೆದಿದೆ.

ಜಿಲ್ಲೆಯಲ್ಲಿ ಮತದಾರರಿಗೆ ಮತದಾನದ ಜಾಗೃತಿ ಮತ್ತು ಮಹತ್ವದ ಕುರಿತು ಅರಿವು ಮೂಡಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿಯು, ಕಳೆದ ಬಾರಿಗಿಂತ ಹೆಚ್ಚಿನ ಮತದಾನ ಮಾಡಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಮತ್ತು ಹೊರರಾಜ್ಯದಲ್ಲಿ ನೆಲೆಸಿರುವ ಜಿಲ್ಲೆಯ ಮತದಾರರನ್ನು ಮತಗಟ್ಟೆಗೆ ಬರುವಂತೆ ಮಾಡಲು ವಿನೂತನ ಪ್ರಯತ್ನ ಮಾಡಿದೆ.
ಜಿಲ್ಲೆಯ ಸಾವಿರಾರು ಮಂದಿ ಉದ್ಯೋಗ, ವಿದ್ಯಾಭ್ಯಾಸ ಮತ್ತಿತರ ಕಾರಣಗಳಿಂದ ವಿದೇಶಗಳಿಗೆ ಮತ್ತು ಹೊರರಾಜ್ಯಗಳಿಗೆ ತೆರಳಿದ್ದಾರೆ. ಆದರೆ ಅವರ ಹೆಸರು ಜಿಲ್ಲೆಯ ಮತದಾರರ ಪಟ್ಟಿಯಲ್ಲಿದೆ. ಇಲ್ಲಿನ ತಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಬ್ಬ ಮುಂತಾದ ವಿಶೇಷ ದಿನಗಳಂದು ಊರಿಗೆ ಅವರು ಆಗಮಿಸುತ್ತಾರೆ.
ಪತ್ರದ ಮೂಲಕ ಮನವಿ; ಮೇ 10ರ ಮತದಾನದ ದಿನದಂದು ಅವರು ಊರಿಗೆ ಆಗಮಿಸಿ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಿ, ಆ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಮುಂದಾಗಿದೆ.

ಪ್ರಸ್ತುತ ಸಾಮಾಜಿಕ ಜಾಲತಾಣಗಳ ಮೂಲಕ ಎಷ್ಟೇ ದೂರದಲ್ಲಿದ್ದರೂ ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಲಿದ್ದು, ಇದನ್ನು ಬಳಸಿಕೊಂಡು ಹೊರದೇಶ ಮತ್ತು ಹೊರ ರಾಜ್ಯದಲ್ಲಿರುವ ಜಿಲ್ಲೆಯ ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೊಂದಿಗೆ ಝೂಮ್ ಮೂಲಕ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಭೆ ನಡೆಸಿದ್ದಾರೆ.
ವಿದೇಶದಲ್ಲಿರುವ ಜಿಲ್ಲೆಯ ನಾಗರೀಕರನ್ನು ಮತದಾನಕ್ಕೆ ಕರೆತರಲು , ಇಲ್ಲಿ ನಲೆಸಿರುವ ಅವರ ಪೋಷಕರು ಮತ್ತು ಅಪ್ತರ ಮೂಲಕ ಮತದಾನ ದಿನವಾದ ಮೇ 10ರಂದು ಮನೆಗಳಿಗೆ ಆಗಮಿಸುವಂತೆ ಮನವೊಲಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಪೋಷಕರಿಂದ ತಮ್ಮ ಮಕ್ಕಳಿಗೆ ಪತ್ರ ಬರೆಯುವಂತೆ ಪ್ರೇರೆಪಿಸಲಾಗಿದೆ.
ಈ ಪತ್ರದಲ್ಲಿ ಚುನಾವಣೆಗಾಗಿ ನೀವು ಓದಿದ ಶಾಲೆಯ ಕಟ್ಟಡಗಳು ಸಾಂಪ್ರಾದಾಯಿಕ ಚಿತ್ರಗಳ ವಿನ್ಯಾಸದೊಂದಿಗೆ ಆಕರ್ಷಕವಾಗಿ ಶೃಂಗಾರಗೊಂಡಿರುವ ಬಗ್ಗೆ, ಮತದಾನ ದಿನದಂದು ಮತದಾನಕ್ಕೆ ಆಗಮಿಸಲು ಬರುವ ನಿಮ್ಮ ನಿರೀಕ್ಷೆಯನ್ನು ಕಾತುರದಿಂದ ಕಾಣುತ್ತಿರುವ ನಿಮ್ಮ ಇಲ್ಲಿನ ಸ್ನೇಹಿತರನ್ನೂ, ಬಂಧುಗಳ ಆಶಯವನ್ನೂ ತಿಳಿಸುವ ಉದ್ದೇಶ ವಿವರಿಸಲಾಗಿದೆ.
ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ, ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ ಪ್ರಸನ್ನ ಹೆಚ್. ಈ ಕುರಿತು ಮಾತನಾಡಿದ್ದಾರೆ, "ಜಿಲ್ಲೆಯ ಸಾವಿರಾರು ಮಂದಿ ವಿದೇಶ ಮತ್ತು ಹೊರರಾಜ್ಯದಲ್ಲಿ ನಲೆಸಿದ್ದು, ಜಿಲ್ಲೆಯೊಂದಿಗೆ ಎಲ್ಲಾ ರೀತಿಯ ಭಾವನಾತ್ಮಕ ಸಂಬಂಧಗಳನ್ನು ಹೊಂದಿದ್ದು, ಜಿಲ್ಲೆಯ ಪ್ರಗತಿಯ ಬಗ್ಗೆ ವಿಶೇಷ ಕಾಳಜಿಯನ್ನೂ ಹೊಂದಿದ್ದಾರೆ" ಎಂದರು.
"ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವದ ಘಟ್ಟವಾದ ಮತದಾನ ಪ್ರಕ್ರಿಯೆಯಲ್ಲಿ ಈ ಎಲ್ಲಾ ನಾಗರೀಕರು ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಬೇಕು. ಇದಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನ ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.
ವಿನೂತನ ಚಟುವಟಿಕೆಗಳು; ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತದಾನದ ಬಗ್ಗೆ ಅರಿವು ಮೂಡಿಸಲು ವಿನೂತನ ಚಟುವಟಿಕೆ ಆಯೋಜನೆ ಮಾಡುತ್ತಿದೆ. ಸಾಲಿಗ್ರಾಮದ ಸೀತಾ ನದಿಯ ಹಿನ್ನೀರಿನ ನಡುವಿನ ದಟ್ಟ ಕಾಂಡ್ಲಾವನದ ನಡುವೆ ಕಯಾಕಿಂಗ್ ಮಾಡಲು ಬಳಸುವ ದೋಣಿಗಳ ಮೂಲಕ ಮತದಾನ ಜಾಗೃತಿಯ ಸಂದೇಶವನ್ನು ಸಾರಿ ಗಮನ ಸೆಳೆಯಲಾಗಿತ್ತು.
ಸುಮಾರು 30 ನಿಮಿಷಗಳ ಕಯಾಕಿಂಗ್ ನಂತರ ಮಾಂಗ್ರೋವ್ ಕಾಡುಗಳ ಮಧ್ಯೆ ಇರುವ ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಕಯಾಕ್ ದೋಣಿಗಳ ಮೂಲಕ ಮತದಾನ ದಿನವಾದ, ಮೇ 10 ದಿನಾಂಕದ ಚಿತ್ರಣ ರೂಪಿಸಿ ಮತ್ತು ಮತದಾನ ಜಾಗೃತಿಯ ಫಲಕವನ್ನು ನೀರಿನ ಮೇಲೆ ಪ್ರದರ್ಶಿಸಿ ಜಾಗೃತಿ ಮೂಡಿಸಲಾಗಿತ್ತು.












Click it and Unblock the Notifications