ಉಡುಪಿ: ಫ್ಯಾಷನ್ಗಾಗಿ ಬಿಟ್ಟಿದ್ದ ಕೂದಲನ್ನು ದಾನ ಮಾಡಿ ಮಾದರಿಯಾದ ವಿದ್ಯಾರ್ಥಿ
ಉಡುಪಿ, ನವೆಂಬರ್ 29: ಮನುಷ್ಯ ತನ್ನ ದೇಹದಲ್ಲಿ ಅತಿಯಾಗಿ ಪ್ರೀತಿಸುವ ವಿಚಾರ ಯಾವುದು ಅಂದರೆ ಅದು ತಲೆಕೂದಲು. ತಲೆ ಕೂದಲು ಉದುರುವುದಕ್ಕೆ ಶುರುವಾಯ್ತು ಅಂದ್ರೆ ತಲೆ ಕೆಡಿಸಿಕೊಂಡು ಔಷಧಿ ಮೊರೆ ಹೋಗುತ್ತಾರೆ. ಕೂದಲು ಸರಿಯಾಗಿ ನಿಲ್ಲದಿದ್ದರೆ ನಿಮಿಷಗಟ್ಟಲೆ ಕನ್ನಡಿ ಎದುರು ನಿಂತು ತಲೆ ಕೂದಲು ಸರಿ ಮಾಡುತ್ತಾರೆ. ತಲೆ ಕೂದಲು ಅಂದ್ರೆ ಅಷ್ಟರ ಮಟ್ಟಿಗೆ ಜತನದಿಂದ ಜೋಪಾನವಾಗಿ ಕಾಪಾಡಿಕೊಳ್ಳುತ್ತಾರೆ.
ಆದರೆ, ಉದ್ದನೆ ಕೂದಲು ಬಿಟ್ಟು, ಒಂದೂವರೆ ವರ್ಷದಿಂದ ಕೂದಲಿಗೆ ವಿವಿಧ ಶ್ಯಾಂಪೂ ಹಾಕಿ ನವಿಲ ಗರಿಯಂತೆ ಕಾಪಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬ ತನ್ನ ಆಸೆಯನ್ನು ಮಕ್ಕಳಿಗೋಸ್ಕರ ತ್ಯಾಗ ಮಾಡಿದ್ದಾನೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕೇಶ ದಾನ ಮಾಡಿ, ಮಕ್ಕಳ ನೋವಿಗೆ ಸಾಂತ್ವನ ಹೇಳಿದ್ದಾನೆ.
ಡಿಫರೆಂಟ್ ಹೇರ್ ಸ್ಟೈಲ್ ಅನ್ನುವುದು ಯುವ ಜನರ ಕ್ರೇಜ್. ಕಾಲಕ್ಕೆ ತಕ್ಕಂತೆ ಬದಲಾಗುವ ಟ್ರೆಂಡ್ಗೆ ಅನುಗುಣವಾಗಿ ಹೇರ್ ಸ್ಟೈಲ್ ಕೂಡ ಬದಲಾಗುತ್ತದೆ. ತಲೆ ಕೂದಲು ಅನ್ನೋದು ಸದ್ಯ ಮನುಷ್ಯ ಜೀವನದ ಒಂದು ಭಾಗವೇ ಆಗಿ ಬಿಟ್ಟಿದೆ. ಆದರೆ ಉದ್ದನೆ ಕೂದಲು ಬಿಟ್ಟು ವಿಧ ವಿಧವಾದ ಹೇರ್ ಸ್ಟೈಲ್ ಮಾಡಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಕ್ಯಾನ್ಸರ್ ಪೀಡಿತ ಮಕ್ಕಳ ಕಣ್ಣೀರು ನೋಡಿ, ತನ್ನ ಉದ್ದನೆಯ ತಲೆಕೂದಲನ್ನು ದಾನ ಮಾಡಿದ್ದಾನೆ. ಉಡುಪಿ ಜಿಲ್ಲೆಯ ಕುಂದಾಪುರದ ಅನಿಕೇತ್ ಶೆಣೈ ಮಕ್ಕಳ ಕಣ್ಣೀರು ನೋಡಿ ಮಮ್ಮಲ ಮರಗಿದ್ದಾನೆ.

ಉಡುಪಿಯ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಅನಿಕೇತ್ಗೆ, ವಿದ್ಯಾರ್ಥಿ ಜೀವನದ ಜೊತೆಗೆ ಸಮಾಜ ಸೇವೆ ಮಾಡುವುದು ಅಂದ್ರೆ ಇಷ್ಟದ ಕೆಲಸ. 110 ವಾರಗಳಿಗಿಂತಲೂ ಹೆಚ್ಚು ಕಾಲ, ಉಡುಪಿಯ ಕೋಡಿ ಬೀಚ್ ಸ್ವಚ್ಛತೆ ಮಾಡಿದ ಹೆಗ್ಗಳಿಕೆ ಕೂಡಾ ಅನಿಕೇತ್ನದ್ದಾಗಿದೆ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕೂದಲು ಬಿಟ್ಟಿದ್ದ ಅನಿಕೇತ್ ಆ ಬಳಿಕ ಕೂದಲು ತೆಗಯೋಣ ಅಂದರೂ, ಸಲೂನ್ ಇಲ್ಲದ ಕಾರಣ ಕೂದಲು ಹಾಗೇ ಬಿಟ್ಟಿದ್ದರು. ದಿನ ಕಳೆದಂತೆ ಉದ್ದ ಕೂದಲು ಅನಿಕೇತ್ನ ಫ್ಯಾಷನ್ ಕೂಡಾ ಆಯಿತು. ಉದ್ದ ಕೂದಲನ್ನು ಅಷ್ಟೇ ಜತನದಿಂದ ಕಾಪಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಅನಿಕೇತ್ಗೆ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವಿಗ್ ತಯಾರಿಸಲು ತಲೆ ಕೂದಲು ಕೊರತೆ ಇರುವುದು ಗಮನಕ್ಕೆ ಬಂದಿದೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕಿಮೋಥೆರಪಿ ಆದಾಗ ಕೂದಲು ಉದುರುತ್ತವೆ. ಇದಾಗಿ ಶಾಲೆಗೆ ಹೋದಾಗ, ಅದರಲ್ಲೂ ಕಿಮೋಥೆರಪಿಗೆ ಒಳಗಾದ ಬಾಲಕಿಯರು ಶಾಲೆಗೆ ಹೋದಾಗ ತಮಾಷೆಗೆ ಒಳಗಾಗುತ್ತಾರೆ. ಇತರೆ ವಿದ್ಯಾರ್ಥಿಗಳು ಕೆಲವೊಮ್ಮೆ ಗೇಲಿ ಕೂಡ ಮಾಡುತ್ತಾರೆ. ಇದರಿಂದ ಖಿನ್ನತೆಗೆ ಒಳಗಾಗಿ ಶಾಲೆ ತಪ್ಪಿಸುವ ಪ್ರಸಂಗ ಕೂಡ ಬರುತ್ತದೆ ಅಂತ ಅನಿಕೇತ್ ಶೆಣೈಗೆ ಗೊತ್ತಾಗಿದೆ.

ಹೀಗಾಗಿ ಅನಿಕೇತ್ ತಲೆಕೂದಲನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಒಂದೂವರೆ ವರ್ಷದಿಂದ ಬಿಟ್ಟ ಕೂದಲು ನಿರ್ದಿಷ್ಟ ಅಳತೆಗೆ ಬಂದ ಬಳಿಕ ದಾನ ಮಾಡಿ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗು ತರುವಂತೆ ಮಾಡಿದ್ದಾರೆ.
ತನ್ನ ಕೂದಲು ತ್ಯಾಗದ ಬಗ್ಗೆ ಮಾತನಾಡಿದ ಅನಿಕೇತ್, ಪ್ರತೀ ವರ್ಷ ಪ್ರಪಂಚದಲ್ಲಿ ಮೂರು ಲಕ್ಷ ಮಕ್ಕಳು ಕ್ಯಾನ್ಸರ್ ರೋಗಕ್ಕೆ ಒಳಗಾಗುತ್ತಾರೆ. ಅದರಲ್ಲಿ ಐವತ್ತು ಸಾವಿರದಷ್ಟು ಮಕ್ಕಳು ಭಾರತದವರೇ ಆಗಿರುತ್ತಾರೆ. ಒಂದು ವಿಗ್ ಮಾಡಲು ಏಳು ಮಂದಿಯ ಕೂದಲು ಬೇಕಾಗುತ್ತದೆ. ಆದರೆ ಯಾರೂ ಕೇಶ ದಾನ ಮಾಡದೇ ಇರುವುದರಿಂದ ವಿಗ್ ತಯಾರಿಸಲೂ ಕಷ್ಟ ಆಗುತ್ತದೆ. ಕೆಲವೊಂದು ಸ್ವಯಂ ಸೇವಾ ಸಂಸ್ಥೆಗಳು ವಿಗ್ ತಯಾರಿಸಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾದರೂ ಕೂದಲು ಅಸಮರ್ಪಕ ಪೂರೈಕೆಯಿಂದ ವಿಗ್ ತಯಾರಿಕೆಗೆ ಕಷ್ಟ ಆಗುತ್ತದೆ.
ಹೀಗಾಗಿ ಸಂಸ್ಥೆಗಳ ಮಾರ್ಗದರ್ಶನದಂತೇ ಕೂದಲಿಗೆ ಕತ್ತರಿ ಹಾಕಿದ್ದೇನೆ. ಈ ಕೂದಲು ಮತ್ತೆ ಬೆಳೆಯುತ್ತದೆ. ಒಂದು ಕ್ಯಾನ್ಸರ್ ಮಗುವಿನ ಸಂತಸಕ್ಕೆ ಕಾರಣವಾಗುತ್ತದೆ ಅನ್ನುವುದಷ್ಟೇ ನೆಮ್ಮದಿ ತಂದಿದೆ ಅಂತಾ ಅನಿಕೇತ್ ಹೇಳುತ್ತಾರೆ.
ಒಟ್ಟಿನಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಯುವತಿಯರು ಕೇಶದಾನ ಮಾಡುವುದು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಯುವಕರು ಉದ್ದನೆ ಕೂದಲು ಬಿಡದ ಕಾರಣ ಕೇಶದಾನ ಮಾಡುವುದಕ್ಕೆ ಸಾಧ್ಯವಾಗಲ್ಲ. ಆದರೂ ಅನಿಕೇತ್ ಕ್ಯಾನ್ಸರ್ ಪೀಡಿತ ಮಕ್ಕಳ ಮೇಲಿನ ಪ್ರೀತಿ ಅನುಕಂಪದಿಂದ ಉದ್ದನೆ ಕೂದಲು ಬಿಟ್ಟು ಕೇಶದಾನ ಮಾಡಿದ್ದಾರೆ.












Click it and Unblock the Notifications