ಕ್ರಿಮಿನಲ್ ಕೇಸು ಹಾಕಿಯೇ ಸಿದ್ಧ: ಶೀರೂರು ಶ್ರೀಗಳ ಕೊನೆಯ ಮಾತು
ಉಡುಪಿ, ಜುಲೈ 19: ಶೀರೂರು ಶ್ರೀಗಳು ಇಂದು ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ. ಅವರು ಸಾಯುವ ಕೆಲ ದಿನಗಳ ಮುಂಚೆ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಅಷ್ಟಮಠದ ಆರು ಮಠಗಳ ವಿರುದ್ಧ ಕ್ರಿಮಿನಲ್ ಕೇಸು ಹಾಕಿಯೇ ಸಿದ್ಧ ಎಂದು ಗುಡುಗಿದ್ದರು.
ಸಾಯುವ ಕೆಲವು ದಿನಗಳ ಮುಂಚೆಯಷ್ಟೆ ಸುದ್ದಿಗೋಷ್ಠಿ ನಡೆಸಿದ್ದ ಶ್ರೀಗಳು 'ಅಷ್ಟ ಮಠದ ಆರು ಮಠಗಳವರು ಸಭೆಗೆ ಕರೆದರೂ ನಾನು ಹೋಗುವುದಿಲ್ಲ, ಅವರೊಂದಿಗೆ ಮಾತು ಬೇಡ, ಕ್ರಿಮಿನಲ್ ಕೇಸು ಹಾಕಿಯೇ ಸಿದ್ಧ' ಎಂದು ಗುಡುಗಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದ ಧ್ವನಿ ಮುದ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರು ಯಾವುದೇ ಬಳಲಿಕೆಗಳಾಗಲಿ ಇಲ್ಲದೆ ಆರೋಗ್ಯವಂತರಾಗಿಯೇ ಇದ್ದರು ಎನಿಸುತ್ತದೆ.

ವಿಠ್ಠಲ ನನ್ನ ಸ್ವತ್ತು
ವರದಿಗಾರರೊಂದಿಗೆ ಬಹಳಷ್ಟು ವಿಷಯವನ್ನು ಮಾತನಾಡಿದ ಅವರು, ಕೃಷ್ಣ ನನ್ನ ಸ್ವತ್ತಲ್ಲ, ರಾಮ ನನ್ನ ಸ್ವತ್ತಲ್ಲ ಆದರೆ ವಿಠ್ಠಲ ನನ್ನ ಸ್ವತ್ತು ಅದನ್ನು ನಾನು ಪಡೆದೇ ತೀರುತ್ತೇನೆ ಎಂದಿದ್ದರು.

ಪಟ್ಟದ ದೇವರನ್ನು ಕೃಷ್ಣಮಠದಲ್ಲಿಟ್ಟಿದ್ದರು
ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾಗ ಪಟ್ಟದ ದೇವರನ್ನು ಕೃಷ್ಣಮಠದಲ್ಲಿ ಇಟ್ಟಿದ್ದರು ಆದರೆ ನಂತರ ಅಷ್ಟ ಮಠದ ಆರು ಮಠಗಳ ಶ್ರೀಗಳು ಪಟ್ಟದ ದೇವರನ್ನು ಹಿಂದಿರುಗಿಸಲು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಶೀರೂರು ಶ್ರೀಗಳು ಕೋರ್ಟ್ ಮೆಟ್ಟಿಲೇರಿದ್ದರು.

ತೀರ್ಪು ಪರವಾಗುವ ಭರವಸೆ
ನ್ಯಾಯಾಲಯದ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದಿದ್ದ ಅವರು, ನ್ಯಾಯಾಲಯದ ತೀರ್ಪು ತಮ್ಮ ಪರವಾಗಿಯೇ ಆಗುತ್ತದೆ ಎಂದು ಹೇಳಿದ್ದರು. ಅದು ನನ್ನದು, ನನ್ನ ಸ್ವತ್ತು ಕದ್ದಿದ್ದಲ್ಲ ಎಂದು ಆಕ್ರೋಶದಿಂದ ನುಡಿಸಿದ್ದರು ಶ್ರೀಗಳು.

ಉಳಿದ ಶ್ರೀಗಳ ಬಗ್ಗೆ ಮಾತು
ಇಷ್ಟೆ ಅಲ್ಲದೆ, ಅಷ್ಟ ಮಠದ ಕೆಲವು ಶ್ರೀಗಳ ಬಗ್ಗೆಯೂ ಲೋಕಾಭಿರಾಮವಾಗಿ ಮಾತನಾಡಿದ್ದ ಶ್ರೀಗಳು ಕೆಲವು ಶ್ರೀಗಳ ಪಟ್ಟದ ದೇವರನ್ನು ವಿಮಾನ ನಿಲ್ದಾಣದ ಸೆಕ್ಯೂರಿಟಿ ಅವರು ಮುಟ್ಟಿಬಿಟ್ಟಿದ್ದಾರೆ, ಅದು ಶಾಸ್ತ್ರಬದ್ಧವಲ್ಲ ಎಂದು ಆರೋಪಿಸಿದ್ದರು.

ಅನುಭವ ಹಂಚಿಕೊಂಡಿದ್ದ ಶ್ರೀಗಳು
ತಮಗೆ ಒಮ್ಮೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅದೇ ಪರಿಸ್ಥಿತಿ ಎದುರಾಗಿ ಆ ನಂತರ ಭಕ್ತರೊಬ್ಬರ ಸಹಾಯದಿಂದ ಪಟ್ಟದ ದೇವರನ್ನು ಇಟ್ಟಿದ್ದ ಪೆಟ್ಟಿಗೆಯನ್ನು ಪರಿಶೀಲಿಸದೆ ಹೊರ ಬಂದ ಘಟನೆಯನ್ನು ಹೇಳಿದ್ದರು.











Click it and Unblock the Notifications