"ಈಗ ಎಲ್ಲಿ ನೋಡಿದರೂ ರಾಷ್ಟ್ರಧ್ವಜ": ಮೋದಿಗೆ ಅಭಿನಂದನೆ ಹೇಳಿದ ರಮೇಶ್ ಕುಮಾರ್
ಉಡುಪಿ, ಜನವರಿ 30: ಉಡುಪಿಯಲ್ಲಿ ಪೌರತ್ವ ವಿರೋಧಿ ಕಿಚ್ಚು ಜೋರಾಗಿದೆ. ಮೂರೇ ದಿನದ ಅಂತರದಲ್ಲಿ ಇಂದು ಮತ್ತೆ ಸಹಬಾಳ್ವೆ ವತಿಯಿಂದ ಎರಡನೇ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಿಎಎ ವಿರುದ್ಧ ನಡೆದ ಸಮಾವೇಶದಲ್ಲಿ ಸಾವಿರಾರು ಜನ ಪ್ರಗತಿಪರರು, ಸಮಾನಮನಸ್ಕ ಸಂಘಟನೆಗಳು, ದಲಿತ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು ಭಾಗಿಯಾಗಿದ್ದವು. ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದವು.
ಪ್ರಧಾನಿ ಮೋದಿ ಅಭಿನಂದಿಸಿದ ರಮೇಶ್ ಕುಮಾರ್
ಇದೇ ಸಂದರ್ಭ ಉಡುಪಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಈ ವೇಳೆ ಪ್ರಧಾನಿ ಮೋದಿಯನ್ನು ಅಭಿನಂದಿಸಿದರು. "ಇಂದು ದೇಶದ ಎಲ್ಲಿ ನೋಡಿದರೂ ರಾಷ್ಟ್ರಧ್ವಜ ಕಾಣಿಸುತ್ತಿದೆ. ಸ್ವಾತಂತ್ರ್ಯ ಕಾಲದಲ್ಲಂತೂ ನಾವು ಇರಲಿಲ್ಲ. ಈಗ ನಾವು ಸಾಯೋ ಕಾಲಕ್ಕೆ ಇಷ್ಟು ಧ್ವಜಗಳನ್ನು ನೋಡುವ ಅವಕಾಶವಾಗಿದೆ" ಎಂದು ಕುಟುಕಿದರು.
"ಕೇಸರಿ ಧ್ವಜ ನೋಡಿ ನೋಡಿ ಸಾಕಾಗಿದೆ"
"ನಮಗೆ ಕೇಸರಿ ಬಟ್ಟೆ, ಧ್ವಜ ನೋಡಿ ನೋಡಿ ಸಾಕಾಗಿತ್ತು. ಆದರೆ ಈಗ ರಾಷ್ಟ್ರಧ್ವಜ ನೋಡುವ ಭಾಗ್ಯ ಒದಗಿ ಬಂದಿದೆ" ಎಂದರು. ಮುಸಲ್ಮಾನರನ್ನು ಅನುಮಾನದಿಂದ ನೋಡಬೇಡಿ ಎಂದು ಮನವಿ ಮಾಡಿದ ರಮೇಶ್ ಕುಮಾರ್, ಹಾಗೆ ಮಾಡಿದರೆ ಭಾರತ ಮಾತೆ ಕಣ್ಣೀರು ಹಾಕುತ್ತಾಳೆ. ಮುಸಲ್ಮಾನರು ಕೂಡ ಭಾರತ ಮಾತೆಯ ಮಕ್ಕಳು" ಎಂದು ಕೇಳಿಕೊಂಡರು.
"ಗೋಡ್ಸೆ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಲು ಬಿಡಲ್ಲ"
"ಮುಸಲ್ಮಾನರು ಭಾರತಕ್ಕೆ ಸೇರಿದವರು. ಆದರೆ ಬಿಜೆಪಿಯವರಿಗೆ ಭಾರತದ ಇತಿಹಾಸದ ಪರಿಚಯ ಇಲ್ಲ. ಭಾರತದ ಇತಿಹಾಸ ಬಿಜೆಪಿಗರಿಗೆ ಬೇಕಾಗಿಯೂ ಇಲ್ಲ ಎಂದರು. ನಾವು ಗೋಡ್ಸೆ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಲು ಬಿಡಲ್ಲ" ಎಂದ ರಮೇಶ್ ಕುಮಾರ್, ಅಮೆರಿಕಾದಲ್ಲಿ ಜನಿಸಿದರೆ ಪೌರತ್ವ ಸಿಗುತ್ತದೆ. ಆದರೆ ಇಲ್ಲಿ ಜನರನ್ನೇ ಬೀದಿಗೆ ತರಲಾಗಿದೆ ಎಂದರು.
ಧರ್ಮಾಧಾರಿತವಾಗಿ ಕಾಯ್ದೆ ರಚನೆ ಎಂದು ತಿವಿದ ಮಾಜಿ ಸ್ಪೀಕರ್
1955ರಲ್ಲಿ ಜಾತಿ ಧರ್ಮದ ಆಧಾರದಲ್ಲಿ ಪೌರತ್ವ ಕಾಯ್ದೆ ಮಾಡಿರಲಿಲ್ಲ. ನಿರಾಶ್ರಿತರು ಮತ್ತು ನುಸುಳುಕೋರರು ಎಂಬ ಎರಡು ವಿಧ ಇದೆ. ಈಗ ಕೇಂದ್ರ ಸರಕಾರ ಕಾಯ್ದೆಯನ್ನು ಧರ್ಮಾಧಾರಿತವಾಗಿ ಮಾಡಿದೆ ಎಂದರು. ಮೋದಿ ಸರ್ಕಾರ ಸಂವಿಧಾನ ವಿರೋಧಿ ಎಂದು ತಿವಿದ ಮಾಜಿ ಸ್ಪೀಕರ್, ಸ್ವಾತಂತ್ರ್ಯಾನಂತರ ಸಂವಿಧಾನ ಮತ್ತು ಜನರ ನಡುವೆ ತಿಕ್ಕಾಟ ಶುರುವಾಗಿದೆ. ಆದರೆ ದೇಶದ ಜಾತಕವನ್ನು ಜನ ಬದಲು ಮಾಡುತ್ತಾರೆ ಎಂದು ಗುಡುಗಿದರು.