ಮದ್ಯ ತುಂಬಿದ್ದ ವಾಹನ ಪಲ್ಟಿ : ರಸ್ತೆಯಲ್ಲಿ ಚೆಲ್ಲಾಡಿದ 'ಅಮೃತ'
ತುಮಕೂರು, ನವೆಂಬರ್ 27 ; ತುಮಕೂರು ಹೊರ ವಲದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಊರುಕೆರೆ ಮತ್ತು ಮತ್ತಿತರ ಸಮೀಪದ ಹಳ್ಳಿಗಳ ಕುಡುಕರಿಗೆ ಇಂದು (ನವೆಂಬರ್ 27) ಸಂಭ್ರಮದ ದಿನ, ಸಂಜೆ ಮೇಲೆ ಜೊತೆಯಾಗುತ್ತಿದ್ದ ಸುರದೇವತೆ ಇಂದು ಮಧ್ಯಾಹ್ನವೇ ಒಲಿದುಬಂದಿದ್ದಳು, ಅದೂ ಉಚಿತವಾಗಿ..!
ಹೌದು, ನಗರದ ಹೊರ ವಲಯದ ಊರುಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯದ ಬಾಕ್ಸ್ ತುಂಬಿದ್ದ ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ಕ್ಯಾಂಟರ್ ವಾಹನ ಸೋಮವಾರ(ನವೆಂಬರ್ 27) ಮಧ್ಯಾಹ್ನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮದ್ಯದ ಬಾಕ್ಸ್ ಇದ್ದ ವಾಹನ ಪಲ್ಟಿಯಾಗಿ ಗಾಡಿಯಲ್ಲಿದ್ದ ಮಧ್ಯದ ಪಾಕೆಟ್ ಗಳೆಲ್ಲಾ ರಸ್ತೆಗೆ ಬಿದ್ದುಬಿಟ್ಟಿವೆ.

ವಾಹನ ಪಲ್ಟಿಯಾಗಿದ್ದನ್ನು ಕಂಡ ಜನ ಮೊದಲು ಅನಾಹುತವಾಯಿತೇನೊ ಎಂದು ಹತ್ತಿರಬಂದರು, ಆದರೆ ರಸ್ತೆಯಲ್ಲಿ ಬಿದ್ದಿರುವ ಮದ್ಯದ ಹೊಚ್ಚ ಹೊಸ ಟೆಟ್ರಾ ಪ್ಯಾಕೆಟ್, ಬಾಟಲಿಗಳನ್ನು ನೋಡುತ್ತಿದ್ದಂತಯೇ 'ಕಿಂಕರ್ತವ್ಯ ಮೂಡರಾಗಿ' ರಸ್ತೆಯಲ್ಲಿ ಬಿದ್ದಿದ್ದ ವಾಹನ ಚಾಲಕ, ಅಪಘಾತವಾಗಿ ಬೋರಲು ಮಲಗಿದ್ದ ವಾಹನವನ್ನೆಲ್ಲಾ ಮರೆತು, ನಾ ಮುಂದು ತಾ ಮುಂದು ಎಂದು ಮದ್ಯದ ಪ್ಯಾಕ್ ಗಳನ್ನು ಬಾಚಿಕೊಂಡು ಹೊತ್ತೊಯ್ದರು. ಗ್ರಾಮಸ್ಥರನ್ನು ತಡೆಯಲು ಹೋದ ಚಾಲಕನನ್ನು ದಬಾಯಿಸಿ ಸುಮ್ಮನಾಗಿಸಿದರು.

ವಾಹನದಲ್ಲಿ 3.75 ಲಕ್ಷ ಮೌಲ್ಯದ ಮದ್ಯದ ಬಾಕ್ಸ್ ಇದ್ದವು. ಅಪಘಾತ ನಡೆದ ಗಂಟೆಯ ಒಳಗೆ ರಸ್ತೆಗೆ ಚೆಲ್ಲಿದ್ದ ಮದ್ಯದ ಪ್ಯಾಕೆಟ್ ಗಳೆಲ್ಲಾ ಬಹುತೇಕ ಖಾಲಿ...!

ತುಮಕೂರಿನ ಶಿರಾಗೇಟ್ ನಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಘಟಕದಿಂದ ಶಿರಾದಲ್ಲಿರುವ ನಿಗಮದ ಘಟಕಕ್ಕೆ ಸಾಗಿಸಲಾಗುತ್ತಿತ್ತು' ಶೇ 90ರಷ್ಟು ಮದ್ಯದ ಬಾಕ್ಸ್ ಗಳನ್ಮು ಸಾರ್ವಜನಿಕರು ಹೊತ್ತೊಯ್ದಿದ್ದಾರೆ ಎಂದು ಚಾಲಕ ಹೇಳಿದರು. ಸ್ಥಳಕ್ಕೆ ತುಮಕೂರು ಗ್ರಾಮೀಣ ಠಾಣೆಯ ಸಬ್ ಇನ್ ಸ್ಪೆಕ್ಟರ್ ಯೋಗಾನಂದ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.












Click it and Unblock the Notifications