ಸಿದ್ದಗಂಗಾಶ್ರೀಗಳಿಗೆ 'ಭಾರತ ರತ್ನ' ಸಿದ್ದು, ಪರಂ ಏಕರಾಗ
ತುಮಕೂರು, ಏ. 2: ಕಳೆದ 85 ವರ್ಷಗಳಿಂದ ದಣಿವರಿಯದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು 'ಭಾರತ ರತ್ನ' ಪ್ರಶಸ್ತಿಗೆ ಅರ್ಹರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಒಂದೇ ರಾಗ ಹಾಡಿದ್ದು ವಿಶೇಷವಾಗಿದೆ.
ಸಿದ್ದಗಂಗಾಶ್ರೀಗಳಿಗೆ ಭಾರತ ರತ್ನ ಸಿಗಬೇಕು ಎಂಬುದು ನಮ್ಮ ಆಗ್ರಹವೂ ಆಗಿದೆ. ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರದ ಜೊತೆ ಮಾತನಾಡುವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಏ.1ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ತ್ರಿವಿಧ ದಾಸೋಹಿಗೆ ಕೋಟಿ ವಂದನೆ]

ತುಮಕುರು ನಗರಕ್ಕೆ ಸಮೀಪವಿರುವ ಸಿದ್ದಗಂಗಾ ಮಠಕ್ಕೆ ಶ್ರೀಗಳ 108ನೇ ಜನ್ಮದಿನೋತ್ಸವದ ಪ್ರಯುಕ್ತ ಭೇಟಿ ನೀಡಿ ಶ್ರೀಗಳಿಗೆ ಹುಟ್ಟುಹಬ್ಬದ ಶುಭ ಹಾರೈಸಿ ಆಶೀರ್ವಾದ ಪಡೆದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ "ಭಾರತ ರತ್ನ" ಪ್ರಶಸ್ತಿಯನ್ನು ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರದ ವತಿಯಿಂದ ಆಗ್ರಹಿಸುತ್ತೇನೆ ಎಂದರು.

ಸಿದ್ದಗಂಗಾ ಶ್ರೀಗಳು ಆದರ್ಶನೀಯರು. ಇವರು ದೀರ್ಘಕಾಲ ಬಾಳಲಿ. ಸಮಾಜ, ಧಾರ್ಮಿಕ, ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡುತ್ತಿರುವ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು. [ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]
ಯಾವುದೇ ಜಾತಿ, ಭೇದವಿಲ್ಲದೆ ಎಲ್ಲಾ ಸಮುದಾಯದ ಗ್ರಾಮೀಣ ಪ್ರದೇಶದ ಬಡವ, ಕೆಳವರ್ಗದ ಮಕ್ಕಳಿಗೆ ಉಚಿತವಾಗಿ ಅನ್ನ, ವಸತಿ ಸಹಿತ ಶಿಕ್ಷಣ ನೀಡುವ ಮೂಲಕ ಮಕ್ಕಳು ಆದರ್ಶ ರೀತಿಯಲ್ಲಿ ಬದುಕುವುದನ್ನು ಶ್ರೀಗಳು ಕಲಿಸುತ್ತಿದ್ದಾರೆ ಎಂದರು.

ಶ್ರೀಗಳ ಆರೋಗ್ಯ ಒಂದು ಪವಾಡವಿದ್ದಂತೆ. ಇಂದಿಗೂ ಉತ್ತಮ ಆರೋಗ್ಯವನ್ನು ಶ್ರೀಗಳು ಕಾಪಾಡಿಕೊಂಡಿರುವುದು ಶ್ರೇಷ್ಠವಾದುದು. ಗಾಂಧೀಜಿಯವರ ರೀತಿಯ ಸರಳ ಜೀವನ ನಡೆಸುವುದರ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ವರದಿ ಬಳಿಕ ಪ್ರಸ್ತಾವನೆ: ಮೇಕೆದಾಟು ಅಣೆಕಟ್ಟು ನಿರ್ಮಿಸುವ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ದಪಡಿಸುತ್ತಿದ್ದು, ವರದಿ ಬಂದ ನಂತರ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಅನುಮತಿ ಕೋರಲಾಗುವುದು. ಈಗಾಗಲೇ ಮೇಕೆದಾಟು ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಯೋಜನೆ ಜಾರಿ ಕುರಿತು ಅಧಿಕಾರಿಗಳು ಸಿದ್ದಪಡಿಸಿದ ವರದಿ ನಂತರ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದರು.












Click it and Unblock the Notifications