RCB: ಮೊಹಮ್ಮದ್ ಸಿರಾಜ್ ಕೈಬಿಟ್ಟು ಈ ಬೌಲರ್ ಉಳಿಸಿಕೊಂಡರೆ ಬೆಸ್ಟ್!
ಐಪಿಎಲ್ 2025ರ ಆವೃತ್ತಿಗೆ ಮುನ್ನ ಈ ಬಾರಿ ಮೆಗಾ ಹರಾಜು ನಡೆಯಲಿದ್ದು, ಬಲಿಷ್ಠ ತಂಡಗಳನ್ನು ಕಟ್ಟಲ್ಲಿ 10 ಫ್ರಾಂಚೈಸಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗುವ ಸಾಧ್ಯತೆ ಇದ್ದು, ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಬರಬೇಕಿದೆ. ಮೊದಲ ಪ್ರಶಸ್ತಿ ಗೆಲ್ಲುವ ಯೋಜನೆಯಲ್ಲಿರುವ ಆರ್ ಸಿಬಿ ಈ ಬಾರಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಆರ್ ಸಿಬಿ ತಂಡದ ಬ್ಯಾಟಿಂಗ್ ಬಗ್ಗೆ ಹೆಚ್ಚಿನ ದೂರುಗಳಿಲ್ಲ, ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರೂನ್ ಗ್ರೀನ್ ಅವರಂತಹ ಆಟಗಾರರು ಬ್ಯಾಟಿಂಗ್ ಬಲವಾಗಿದ್ದಾರೆ. ಆದರೆ ಆರ್ ಸಿಬಿಗೆ ಮುಖ್ಯವಾಗಿ ಕಾಡುವುದು ಉತ್ತಮ ಬೌಲರ್ ಸಮಸ್ಯೆ. 2024ರ ಆವೃತ್ತಿಯಲ್ಲಿ ಬೌಲಿಂಗ್ ವಿಭಾಗ ಅಲ್ಪ ಸುಧಾರಣೆ ಕಂಡಿದೆ, ಈ ಬಾರಿ ಬಲಿಷ್ಠ ಬೌಲಿಂಗ್ ಪಡೆಯನ್ನು ಕಟ್ಟುವುದು ಫ್ರಾಂಚೈಸಿಯ ಗುರಿಯಾಗಿದೆ.

ಮೊಹಮ್ಮದ್ ಸಿರಾಜ್ ತಂಡದ ಪ್ರಮುಖ ವೇಗದ ಬೌಲರ್ ಆಗಿದ್ದಾರೆ. ಆದರೆ ಈ ಬಾರಿ ಸಿರಾಜ್ ಅವರನ್ನೇ ಕೈಬಿಟ್ಟು ಮತ್ತೊಬ್ಬ ವೇಗಿ ಆಕಾಶ್ ದೀಪ್ರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಉತ್ತಮ ಆಯ್ಕೆ ಎನ್ನಲಾಗಿದೆ. ಸಿರಾಜ್ ಉತ್ತಮ ಬೌಲರ್ ಆದರೂ ಟಿ20 ಮಾದರಿಯಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ ಎನ್ನುವುದು ಅಂಕಿ ಅಂಶಗಳೇ ಹೇಳುತ್ತವೆ.
ಸಿರಾಜ್ ಬದಲು ಆಕಾಶ್ ಬೆಸ್ಟ್ ಯಾಕೆ?
ಆಕಾಶ್ ದೀಪ್ ಐಪಿಎಲ್ನಲ್ಲಿ ಇನ್ನೂ 8 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅನುಭವದ ಕೊರತೆ ಇದ್ದರೂ, ಅವರಲ್ಲಿ ಉತ್ತಮ ಸಾಮರ್ಥ್ಯವಿದೆ. ಸ್ವಿಂಗ್ ಮಾಡುವ ಮತ್ತು ವೇಗವಾಗಿ ಬೌಲಿಂಗ್ ಮಾಡುವ ಮೂಲಕ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಸದ್ಯ ಭಾರತ ತಂಡದ ಭವಿಷ್ಯದ ಪ್ರಮುಖ ಬೌಲರ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ. ಸಿರಾಜ್ ಟಿ20 ಮಾದರಿಯಲ್ಲಿ ಆರಂಭದ ಓವರ್ ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರೂ, ಕೊನೆಯ ಓವರ್ ಗಳಲ್ಲಿ ಅವರು ಹೆಚ್ಚಿನ ರನ್ ಬಿಟ್ಟುಕೊಡುವುದು ತಲೆನೋವಾಗಿದೆ. ಇದು ಕೂಡ ಅವರಿಗೆ ಪರ್ಯಾಯ ಆಯ್ಕೆಯನ್ನು ಹುಡುಕುವುದು ಅನಿವಾರ್ಯವಾಗಿದೆ.
ಸಿರಾಜ್ ಅವರಿಗೆ ಹೋಲಿಕೆ ಮಾಡಿದರೆ ಆಕಾಶ್ ದೀಪ್ ಬೌಲಿಂಗ್ನಲ್ಲಿ ಹಲವು ಅಸ್ತ್ರಗಳನ್ನು ಹೊಂದಿದ್ದಾರೆ. ನಿಧಾನ ಎಸೆತ, ಕಟ್ಟರ್ಗಳು ಮತ್ತು ಸಾಂದರ್ಭಿಕ ಬೌನ್ಸರ್ಗಳ ಮಿಶ್ರಣವಿದೆ. ಆದರೆ ಮೊಹಮ್ಮದ್ ಸಿರಾಜ್ ಹೆಚ್ಚಾಗಿ ಸ್ವಿಂಗ್ ಅನ್ನು ಮಾತ್ರ ಅವಲಂಬಿಸಿದ್ದಾರೆ.
ಆಕಾಶ್ ದೀಪ್ರನ್ನು ಆರ್ ಸಿಬಿ 20 ಲಕ್ಷ ರೂಪಾಯಿಗಳಿಗೆ ಬಿಡ್ ಮಾಡಿದೆ. ಆದರೆ ಮೊಹಮ್ಮದ್ ಸಿರಾಜ್ಗಾಗಿ 7 ಕೋಟಿ ರೂಪಾಯಿ ಖರ್ಚು ಮಾಡಿದೆ. ಈಗ ಸಿರಾಜ್ರನ್ನು ಕೈಬಿಟ್ಟರೆ ಫ್ರಾಂಚೈಸಿ ಬಳಿ ಮೆಗಾಹರಾಜಿನಲ್ಲಿ ಹೆಚ್ಚಿನ ಹಣ ಇರಲಿದ್ದು, ಮತ್ತೊಬ್ಬ ಪ್ರಮುಖ ವೇಗಿಗಾಗಿ ಬಿಡ್ ಮಾಡಬಹುದಾಗಿದೆ.












Click it and Unblock the Notifications