Ranji Trophy: ಪಂಜಾಬ್ ವಿರುದ್ಧ ಕರ್ನಾಟಕ ತಂಡಕ್ಕೆ ಭರ್ಜರಿ ಗೆಲುವು
ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಪಂಜಾಬ್ ವಿರುದ್ಧ ಏಳು ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಮೊದಲ ಇನ್ನಿಂಗ್ಸ್ನಲ್ಲಿ 152 ರನ್ಗಳಿಗೆ ಆಲೌಟ್ ಆಗಿತ್ತು. ವಾಸುಕಿ ಕೌಶಿಕ್ ಪಂಜಾಬ್ ತಂಡಕ್ಕೆ ಮಾರಕವಾದರು. 15 ಓವರ್ ಗಳಲ್ಲಿ 41 ರನ್ ನೀಡಿದ ಅವರು ಬರೋಬ್ಬರಿ 7 ವಿಕೆಟ್ ಪಡೆದು ಮಿಂಚಿದ್ದರು.

ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ದೇವದತ್ ಪಡಿಕ್ಕಲ್ ಮತ್ತು ಮನೀಶ್ ಪಾಂಡೆ ಅವರ ಭರ್ಜರಿ ಶತಕದ ನೆರವಿನಿಂದ 8 ವಿಕೆಟ್ ನಷ್ಟಕ್ಕೆ 514 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ದೇವದತ್ ಪಡಿಕ್ಕಲ್ 193 ರನ್ ಗಳಿಸಿ 7 ರನ್ಗಳಿಂದ ದ್ವಿಶತಕ ತಪ್ಪಿಸಿಕೊಂಡರು. ಮನೀಶ್ ಪಾಂಡೆ 118 ರನ್ ಗಳಿಸಿದರು. ಎಸ್ ಸಮರ್ಥ್ 76 ರನ್ ಗಳಿಸಿದರೆ, ವೈಶಾಖ್ 19, ಶುಭಾಂಗ್ ಹೆಗಡೆ 27 ರನ್ ಮತ್ತು ರೋಹಿತ್ ಕುಮಾರ್ 22 ರನ್ ಗಳಿಸಿದರು.
ಪಂಜಾಬ್ ಹೋರಾಟ
ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ಕರ್ನಾಟಕ ತಂಡಕ್ಕೆ ಪೈಪೋಟಿ ಕೊಟ್ಟಿತು. ಆರಂಭಿಕರಾದ ಅಭಿಷೇಕ್ ಶರ್ಮಾ (91) ಪ್ರಭ್ಸಿಮ್ರಾನ್ ಸಿಂಗ್ (100) ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಉಳಿದ ಬ್ಯಾಟರ್ ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು.
ಗೀತಾಂಶ್ ಖೇರಾ 43 ರನ್ ಗಳಿಸಿದರೆ, ಅರ್ಷದೀಪ್ ಸಿಂಗ್ ಕೊನೆಯಲ್ಲಿ 36 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್ನಲ್ಲಿ ಪಂಜಾಬ್ 413 ರನ್ಗಳಿಗೆ ಆಲೌಟ್ ಆಗುವ ಮೂಲಕ 51 ರನ್ಗಳ ಮುನ್ನಡೆ ಪಡೆದುಕೊಂಡಿತು.
ರೋಹಿತ್ ಕುಮಾರ್ ಮತ್ತು ಶುಭಾಂಗ್ ಹೆಗಡೆ ತಲಾ ಮೂರು ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ ಎರಡು ವಿಕೆಟ್ ಪಡೆದುಕೊಂಡರು. ಉಳಿದಂತೆ ವಿಜಯ್ಕುಮಾರ್ ವೈಶಾಖ್ ಮತ್ತು ಸಮರ್ಥ್ ಆರ್ ತಲಾ ಒಂದು ವಿಕೆಟ್ ಪಡೆದರು.
ಕರ್ನಾಟಕ ತಂಡದ ಗೆಲುವಿಗೆ ಎರಡನೇ ಇನ್ನಿಂಗ್ಸ್ನಲ್ಲಿ 52 ರನ್ಗಳ ಅಗತ್ಯವಿತ್ತು. ಮಯಾಂಕ್ ಅಗರ್ವಾಲ್ ಮತ್ತು ನಿಕಿನ್ ಜೋಸ್ ರನ್ ಗಳಿಸದೆ ಸೊನ್ನೆಗೆ ಔಟಾಗುವ ಮೂಲಕ ಆತಂಕ ಮೂಡಿಸಿದರು. ರವಿಕುಮಾರ್ ಸಮರ್ಥ್ 21 ರನ್ ಗಳಿಸಿದರೆ, ಶ್ರೀನಿವಾಸ್ ಶರತ್ ಅಜೇಯ 21 ರನ್ ಮತ್ತು ಮನಿಶ್ ಪಾಂಡೆ ಅಜೇಯ 10 ರನ್ ಗಳಿಸುವ ಮೂಲಕ ಕರ್ನಾಟಕ ತಂಡಕ್ಕೆ ಗೆಲುವು ತಂದುಕೊಟ್ಟರು.












Click it and Unblock the Notifications