India vs Bangladesh: ಆಕಾಶ್ ದೀಪ್ ಮಿಂಚು; ಮೊದಲ ದಿನದಾಟಕ್ಕೆ ಮಳೆ ಅಡ್ಡಿ
ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದೆ. ಮಳೆಯಿಮದಾಗಿ ಒಂದು ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದೇಶ 35 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದ್ದಾಗ ಮತ್ತೆ ಮಳೆ ಬಂದ ಕಾರಣ ಮೊದಲ ದಿನದ ಆಟವನ್ನು ಅಂತ್ಯಗೊಳಿಸಲಾಯಿತು.
ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶಕ್ಕೆ ಭಾರತದ ಆಕಾಶ್ ದೀಪ್ ಆಘಾತ ಕೊಟ್ಟರು. ಝಕೀರ್ ಹಸನ್ 24 ಎಸೆತಗಳನ್ನು ಎದುರಿಸಿ ರನ್ ಖಾತೆ ತೆರೆಯದೇ ಔಟಾದರು. ಆಕಾಶ್ ದೀಪ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ಗೆ ಸೇರಿಕೊಂಡರು.

ಮತ್ತೊಬ್ಬ ಆರಂಭಿಕ ಆಟಗಾರ ಶದ್ಮನ್ ಇಸ್ಲಾಂ 24 ರನ್ ಗಳಿಸಿ ಔಟಾದರು. 29 ರನ್ ಗಳಿಸುವ ವೇಳೆಗೆ ಬಾಂಗ್ಲಾದೇಶ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಮೊಮಿನುಲ್ ಇಸ್ಲಾಂ ಜೊತೆಗೆ ನಜ್ಮುಲ್ ಹೊಸೈನ್ ಶಾಂಟೋ 51 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. 80 ರನ್ ಗಳಿಸಿದ್ದಾಗ ರವಿಚಂದ್ರನ್ ಅಶ್ವಿನ್ ನಾಯಕ ಶಾಂಟೋ ಅವರನ್ನು ಎಲ್ಬಿಡಬ್ಲ್ಯೂ ಮಾಡಿದರು.
35 ಓವರ್ ಗಳಲ್ಲಿ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದ್ದಾಗ ಮಳೆ ಬಂದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯಿತು. ಬಳಿಕ ಬೆಳಕಿನ ಕೊರತೆಯಿಂದಾಗಿ ಆಟವನ್ನು ಮುಂದೂಡಲಾಯಿತು. ಮಳೆ ನಿಲ್ಲದ ಕಾರಣ ಮೊದಲ ದಿನದಾಟ ಮುಗಿದಿದೆ ಎಂದು ಘೋಷಿಸಲಾಯಿತು.
ಆಕಾಶ್ ದೀಪ್ 10 ಓವರ್ ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಮೊಮಿನುಲ್ ಹುಸೈನ್ ಅಜೇಯ 40 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ, ಮುಷ್ಫಿಕರ್ ರಹೀಮ್ ಅಜೇಯ 6 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ಇನ್ನೆರಡು ದಿನ ಮಳೆ ಅಡ್ಡಿ ಆತಂಕ
ಕಾನ್ಪುರದಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಪಂದ್ಯಕ್ಕೆ ಅಡ್ಡಿಯಾಗುವ ಆತಂಕವಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿ ದೃಷ್ಟಿಯಿಂದ ಭಾರತ ಈ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಎರಡನೇ ದಿನದಾಟ ಪೂರ್ತಿ ನಡೆದರೆ ಬಾಂಗ್ಲಾದೇಶ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಉತ್ಸಾಹದಲ್ಲಿದೆ ಭಾರತದ ಬೌಲಿಂಗ್ ಪಡೆ.












Click it and Unblock the Notifications