CSK vs MI: ಸಿಎಸ್ಕೆ ನಾಯಕ ಮತ್ತು ಬೌಲರ್ ವಿರುದ್ಧ ಗಂಭೀರ ಆರೋಪ! ಅಸಲಿಗೆ ಆಗಿದ್ದೇನು?
2025ರ ಐಪಿಎಲ್ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೂರು ಪಂದ್ಯಗಳು ಅಭಿಮಾನಿಗಳನ್ನು ರಂಜಿಸಿವೆ. ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ಗಳ ಗೆಲುವು ಸಾಧಿಸಿದೆ. ಆದರೆ ಮೊದಲ ಪಂದ್ಯದಲ್ಲೇ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಬೌಲರ್ ಖಲೀಲ್ ಅಹ್ಮದ್ ಮೇಲೆ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ.
ಮಾರ್ಚ್ 23 ರಂದು ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಆವೃತ್ತಿಯ ತಮ್ಮ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವೇಗಿ ಖಲೀಲ್ ಅಹ್ಮದ್ ಮತ್ತು ನಾಯಕ ರುತುರಾಜ್ ಗೈಕ್ವಾಡ್ ಚೆಂಡು ವಿರೂಪಗೊಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಖಲೀಲ್ ಅಹ್ಮದ್ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮೊದಲ ಓವರ್ ಬೌಲಿಂಗ್ ಮಾಡಿದರು. ಮೊದಲ ಓವರ್ ನ ಎರಡನೇ ಎಸೆತಕ್ಕೆ ಮುನ್ನವೇ ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಸಿಎಸ್ಕೆ ವಿರುದ್ಧ ಗಂಭೀರ ಆರೋಪ ಮಾಡಲಾಗುತ್ತಿದೆ. ಆರ್ ಸಿಬಿ ಸೇರಿದಂತೆ ಹಲವು ತಂಡಗಳ ಅಭಿಮಾನಿಗಳು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ವೇಗಿ ಖಲೀಲ್ ಅಹ್ಮದ್ ಚೆಂಡಿನೊಂದಿಗೆ ಏನೋ ಮಾಡುತ್ತಿರುವುದು ಸೆರೆಯಾಗಿದೆ, ಆಟಗಾರರು ಉದ್ದೇಶಪೂರ್ವಕವಾಗಿ ಚೆಂಡನ್ನು ವಿರೂಪಗೊಳಿಸಿದರೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಸಿಎಸ್ಕೆ ತಂಡದ ವಿರುದ್ಧ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದು ಇದಕ್ಕೆ ಸಿಎಸ್ಕೆ ತಂಡದ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ. ಇನ್ನಿಂಗ್ಸ್ ಆರಂಭಿಸುವಾಗ ಹೊಸ ಚೆಂಡು ನೀಡಲಾಗುತ್ತದೆ, ಹೊಸ ಚೆಂಡನ್ನು ವಿರೂಪಗೊಳಿಸುವ ಯಾವುದೇ ಅಗತ್ಯ ಇರುವುದಿಲ್ಲ, ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವರು ಮಾತ್ರ ಇಂತಹ ಆರೋಪ ಮಾಡಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಓವರ್ ನ ಎರಡನೇ ಎಸೆತದಲ್ಲೇ ಬಾಲ್ ಟ್ಯಾಂಪರಿಂಗ್ ಮಾಡುವ ಅಗತ್ಯವಿರಲ್ಲ, ಚೆಂಡು ಹಳೆಯದಾಗಿದ್ದರೆ, ಹೊಳಪು ಕಳೆದುಕೊಂಡಾಗ ಮಾತ್ರ ಟ್ಯಾಂಪರಿಂಗ್ ಮಾಡುತ್ತಾರೆ ಎಂದು ಸಿಎಸ್ಕೆ ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ.
ಚೆಂಡನ್ನು ಟ್ಯಾಂಪರ್ ಮಾಡುವುದು ಸುಲಭವಲ್ಲ, ಅದರಲ್ಲೂ ಐಪಿಎಲ್ನಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಎಷ್ಟೊಂದು ಕ್ಯಾಮೆರಾಗಳು ಆಟಗಾರರ ಮೇಲೆ ಕಣ್ಣಿಟ್ಟಿರುತ್ತವೆ. ಯಾವುದೇ ತಪ್ಪಿಗೆ ಇಲ್ಲಿ ಕಠಿಣ ಶಿಕ್ಷೆ ಇರುವುದರಿಂದ ಆಟಗಾರರು ಕೂಡ ಇಂತಹ ಸಾಹಸಕ್ಕೆ ಮುಂದಾಗಲ್ಲ, ಅಲ್ಲಿ ಖಲೀಲ್ ಅಹಮದ್ ಉಂಗುರವನ್ನೊ ಅಥವಾ ಚ್ಯೂಯಿಂಗ್ ಗಮ್ ಅನ್ನೋ ರುತುರಾಜ್ಗೆ ಜೇಬಿನಿಂದ ತೆಗೆದುಕೊಟ್ಟಿದ್ದಾರೆ, ಇಷ್ಟಕ್ಕೆ ಬೇರೆ ತಂಡದ ಅಭಿಮಾನಿಗಳು ಮನಸಿಗೆ ಬಂದಂತೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
ಆರ್ ಸಿಬಿ ವಿರುದ್ಧ ಮುಂದಿನ ಪಂದ್ಯ
ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡವನ್ನು ಎದುರಿಸಲಿದೆ. ಮಾರ್ಚ್ 28ರಂದು ಶುಕ್ರವಾರ ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದ್ದು ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳು ಮೊದಲ ಪಂದ್ಯದಲ್ಲಿ ಗೆದ್ದಿದ್ದು ಎರಡನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿವೆ.












Click it and Unblock the Notifications