RCB: ಒಂದು ವಾರ ಬ್ರೇಕ್ ಆರ್ಸಿಬಿಗೆ ವರವಾಯಿತಾ? ಫಿಟ್ ಆದ ಪ್ರಮುಖ ಆಟಗಾರರು
ಐಪಿಎಲ್ 2025ರ ಪಂದ್ಯಾವಳಿಗೆ ಒಂದು ವಾರ ಬ್ರೇಕ್ ನೀಡಲಾಗಿದೆ. ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಬಳಿಕ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಸದ್ಯ ಕದನ ವಿರಾಮ ಘೋಷಣೆಯಾಗಿದ್ದು ಬಿಸಿಸಿಐ ಪಂದ್ಯಾವಳಿಯನ್ನು ಮುಂದುವರೆಸಲು ಯೋಜಿಸಿದೆ.
ಈ ಬಾರಿ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಆರ್ ಸಿಬಿ ಪ್ಲೇಆಫ್ಗೆ ಪ್ರವೇಶ ಪಡೆಯುವ ಸನಿಹದಲ್ಲಿತ್ತು. ಆದರೆ ಆರ್ ಸಿಬಿ ಪಂದ್ಯದ ಹಿಂದಿನ ದಿನವೇ ಪಂದ್ಯಾವಳಿಯನ್ನು ಮುಂದೂಡಲಾಗಿದೆ. ತಂಡದ ಆಟಗಾರರು ಈಗಾಗಲೇ ಮನೆಗೆ ಹೋಗಿದ್ದು, ಅವರನ್ನು ಮತ್ತೆ ಕರೆತರಲು ಫ್ರಾಂಚೈಸಿ ಕೆಲಸ ಮಾಡುತ್ತಿದೆ.

ಮಂಗಳವಾರದ ವೇಳೆಗೆ ಆಟಗಾರರನ್ನು ವಾಪಸ್ ಕರೆಸುವಂತೆ ಬಿಸಿಸಿಐ ಈಗಾಗಲೇ ಫ್ರಾಂಚೈಸಿಗಳಿಗೆ ಸೂಚನೆ ಕೊಟ್ಟಿದ್ದು, ಎಲ್ಲಾ ತಂಡಗಳು ಮತ್ತೆ ಐಪಿಎಲ್ಗೆ ಸಜ್ಜಾಗುತ್ತಿವೆ. ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಿದ್ದು ಆರ್ ಸಿಬಿ ತಂಡದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ನೋಡಬೇಕಿದೆ.
ಪ್ರಮುಖ ಆಟಗಾರರು ಫಿಟ್
ತಂಡ ಉತ್ತಮ ಪ್ರದರ್ಶನ ನೀಡುವ ಸಂದರ್ಭದಲ್ಲೇ ಪ್ರಮುಖ ಆಟಗಾರರಾದ ಫಿಲ್ ಸಾಲ್ಟ್ ಅನಾರೋಗ್ಯದಿಂದ ಬಳಲುತ್ತಿದ್ದರೆ, ವೇಗಿ ಜೋಶ್ ಹೇಜಲ್ವುಡ್ ಗಾಯಗೊಂಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ನಾಯಕ ರಜತ್ ಪಟಿದಾರ್ ಕೂಡ ಗಾಯಗೊಂಡಿದ್ದರು. ನಿಗದಿಯಂತೆ ಪಂದ್ಯ ನಡೆದಿದ್ದರೆ ಅಂದು ಜಿತೇಶ್ ಶರ್ಮಾ ನಾಯಕತ್ವ ವಹಿಸಿಕೊಳ್ಳುತ್ತಿದ್ದರು.
ಇದೀಗ ಒಂದು ವಾರ ಸಮಯ ಸಿಕ್ಕಿದ್ದು ರಜತ್ ಪಟಿದಾರ್ ಸಂಪೂರ್ಣ ಗುಣಮುಖರಾಗಿದ್ದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇನ್ನು ಕೃನಾಲ್ ಪಾಂಡ್ಯ ಫಿಟ್ನೆಸ್ ಬಗ್ಗೆ ಕೂಡ ಆತಂಕ ಶುರುವಾಗಿತ್ತು ಆದರೆ ಒಂದು ವಾರ ವಿಶ್ರಾಂತಿ ಸಿಕ್ಕ ಬಳಿಕ ಅವರು ಕೂಡ ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ.
ಆದರೆ ತವರಿಗೆ ಮರಳಿರುವ ಜೋಶ್ ಹೇಜಲ್ವುಡ್ ಸದ್ಯ ಐಪಿಎಲ್ನ ಮುಂದಿನ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಪಂದ್ಯಾವಳಿ ಮುಂದೂಡಿರುವ ಕಾರಣ ಜೋಶ್ ಹೇಝಲ್ವುಡ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಬೇಕಿದ್ದು ಗಾಯದ ಭಯದಿಂದ ಐಪಿಎಲ್ನ ಮುಂದಿನ ಪಂದ್ಯಗಳನ್ನು ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ ಇದೆ.
ಜೋಶ್ ಹೇಜಲ್ವುಡ್ ಹೊರತುಪಡಿಸಿ ಉಳಿದ ಆರ್ ಸಿಬಿ ತಂಡದ ಉಳಿದ ಎಲ್ಲಾ ಆಟಗಾರರು ಪಂದ್ಯಾವಳಿ ಮುಗಿಯುವವರೆಗೂ ಆಯ್ಕೆಗೆ ಲಭ್ಯವಿರುತ್ತಾರೆ. ಜೋಶ್ ಹೇಜಲ್ವುಡ್ ಅಲಭ್ಯರಾದರೆ ಲುಂಗಿ ಎಂಗಿಡಿ ಅಥವಾ ನುವಾನ್ ತುಷಾರ ಅವರು ಅವಕಾಶ ಪಡೆಯುವ ಸಾಧ್ಯತೆ ಇದೆ.












Click it and Unblock the Notifications