RCB VS CSK: ಆರ್ಸಿಬಿ ಅಭಿಮಾನಿಗಳಿಂದ ಚೆನ್ನೈ ಅಭಿಮಾನಿಗಳ ಜೊತೆಗೆ ಕಿರಿಕ್ ಆರೋಪ!
ಕ್ರಿಕೆಟ್ ಒಂದು ಕ್ರೀಡೆ, ಹೀಗೆ ಕ್ರೀಡೆಯನ್ನು ಕ್ರೀಡೆ ರೀತಿ ಮಾತ್ರ ನೋಡಬೇಕು. ಆದರೆ ಕೆಲ ಬೇಜವಾಬ್ದಾರಿ ವ್ಯಕ್ತಿಗಳು ಮಾಡುವ ಕೆಲಸದಿಂದ ಕ್ರೀಡೆಗೆ ಇರುವ ಮರ್ಯಾದಿ ಹೋಗುತ್ತಿದೆ. ಅದ್ರಲ್ಲೂ ಮೊನ್ನೆ ನಡೆದ ಆರ್ಸಿಬಿ & ಚೆನ್ನೈ ನಡುವಿನ ಕ್ರಿಕೆಟ್ ಮ್ಯಾಚ್ ಈಗ ಎಲ್ಲೆಲ್ಲೂ ಕಿಚ್ಚು ಹಬ್ಬಿಸುತ್ತಿದೆ. ಯಾಕಂದ್ರೆ ಆರ್ಸಿಬಿ ಫ್ಯಾನ್ಸ್ ಅಂತಾ ಹೇಳಿಕೊಂಡ ಕೆಲವರು ಚೆನ್ನೈ ಅಭಿಮಾನಿಗಳಿಗೆ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗುತ್ತಿವೆ ಎಂಬ ಆರೋಪ ಈಗ ಕೇಳಿಬಂದಿದೆ.
ಆರ್ಸಿಬಿ ಬೆಂಗಳೂರು ತಂಡ ಶನಿವಾರ ಚೆನ್ನೈ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿ, ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಹೀಗಿದ್ದಾಗ ಆರ್ಸಿಬಿ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಿದ್ದರು. ರಾತ್ರಿ 3 ಗಂಟೆ ತನಕ ಕೂಡ ಆರ್ಸಿಬಿ ಅಭಿಮಾನಿಗಳು ಗೆಲುವಿನ ಅಲೆಯಲ್ಲಿ ತೇಲಿದ್ದರು. ರೋಡ್ ರೋಡ್ನಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದ್ದರು. ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬೇರೆಯದ್ದೇ ನಡೆದಿದೆ.

ಆರ್ಸಿಬಿ & ಚೆನ್ನೈ ನಡುವಿನ ಪಂದ್ಯದಲ್ಲಿ ಬೆಂಗಳೂರು ಗೆದ್ದಿದ್ದು ಕರ್ನಾಟಕಕ್ಕೆ ಖುಷಿ ನೀಡಿತ್ತು, ಹೀಗಿದ್ದಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಜೊತೆಯಲ್ಲಿ ಕಿರಿಕ್ ಮಾಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಆರ್ಸಿಬಿ ಮತ್ತು ಸಿಎಸ್ಕೆ ಫ್ಯಾನ್ಸ್ ಮಧ್ಯೆ ಕಿರಿಕ್ ನಡೆದಿದೆ ಎಂದು ಆರೋಪ ಮಾಡಲಾದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕ್ರಿಕೆಟ್ ವಿಚಾರಕ್ಕೆ ಜಗಳ ಯಾಕೆ?
ಕರ್ನಾಟಕ & ತಮಿಳುನಾಡು ಅಕ್ಕಪಕ್ಕದ ರಾಜ್ಯಗಳು, ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ ಎರಡೂ ರಾಜ್ಯಗಳು ಸಹೋದರರ ರೀತಿ ನೂರಾರು ವರ್ಷಗಳಿಂದ ಜೀವನ ಸಾಗಿಸುತ್ತಾ ಬಂದಿವೆ. ಹೀಗಿದ್ದರೂ ಯಾರೋ ಕೆಲವರು ಕ್ಷುಲ್ಲಕ ಕಾರಣಕ್ಕೆ ಹೀಗೆ ಜಗಳ ಮಾಡಿದರೆ, ಈ ತಿಕ್ಕಾಟ ಮುಂದೆ ಎಲ್ಲೆಲ್ಲಿಗೋ ಹೋಗಿ ಎರಡೂ ರಾಜ್ಯಗಳ ಸಾಮಾನ್ಯ ಜನರಿಗೆ ಸಮಸ್ಯೆಯು ಸೃಷ್ಟಿ ಆಗುತ್ತದೆ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಕನ್ನಡಿಗರೇ ಇಂತಹ ವರ್ತನೆಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದು, ತಪ್ಪು ಯಾರೇ ಮಾಡಿದ್ದರೂ ಆ ವ್ಯಕ್ತಿಗಳಿಗೆ ಶಿಕ್ಷೆ ಆಗಲಿ ಅಂತಿದ್ದಾರೆ.
ಕನ್ನಡಿಗರಿಗೆ ಕೆಟ್ಟ ಹೆಸರು ಬರುತ್ತೆ!
ಈ ಹಿಂದೆ ಕಾವೇರಿ ಗಲಾಟೆಗಳು ನಡೆದಾಗ ಕರ್ನಾಟಕದ ಜನರ ವಿರುದ್ಧ ಹಲವು ಆರೋಪ ಮಾಡಿದ್ದವು ರಾಷ್ಟ್ರೀಯ ಮಾಧ್ಯಮಗಳು. ಹಾಗೇ ಹೊಸ ವರ್ಷದ ಆಚರಣೆಯ ವೇಳೆಯಲ್ಲಿ ಕೂಡ ಇದೇ ರೀತಿ ಕಿರಿಕ್ ಆಗಿತ್ತು. ಈಗ ಐಪಿಎಲ್ ಕ್ರಿಕೆಟ್ ಮ್ಯಾಚ್ ವಿಚಾರಕ್ಕೆ, ಕನ್ನಡಿಗರ ಬಗ್ಗೆ ಬೇರೆಯವರು ಹಗುರವಾಗಿ ಮಾತನಾಡುವುದು ಬೇಡ. ಹೀಗಾಗಿ ಆರ್ಸಿಬಿ ಮೇಲೆ ಇರುವ ಗೌರವ ಹಾಗೇ ಇರಲಿ, ಅದನ್ನ ಬಿಟ್ಟು ಚೆನ್ನೈ ಅಭಿಮಾನಿಗಳ ಜೊತೆಗೆ ಹೀಗೆಲ್ಲಾ ವರ್ತನೆ ಮಾಡಬಾರದಿತ್ತು ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ.
ರಾಜ್ಯಗಳ ಸಂಬಂಧ ಉಳಿಯಬೇಕಿದೆ
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕ್ರಿಕೆಟ್ ಮ್ಯಾಚ್ ಬರುತ್ತೆ ಅಥವಾ ಮುಗಿದು ಹೋಗುತ್ತದೆ. ಆದರೆ ಕರ್ನಾಟಕ & ತಮಿಳುನಾಡಿನ ಬಾಂಧವ್ಯ ಬೆಳೆಯಬೇಕಿದೆ. ಇಲ್ಲವಾದರೆ ಭವಿಷ್ಯದಲ್ಲಿ ಇದು ವ್ಯತಿರಿಕ್ತ ಘಟನೆಗಳಿಗೆ ನಾಂದಿ ಹಾಡುತ್ತದೆ. ಹೀಗಾಗಿ ಕ್ರಿಕೆಟ್ ಆಟವನ್ನು ಕ್ರಿಕೆಟ್ ರೀತಿ ಮಾತ್ರ ನೋಡಿ ಅಂತಾ ಕಿರಿಕ್ ಮಾಡಿದ ಕೆಲವು ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮಂದಿ ಸಲಹೆ ನೀಡುತ್ತಿದ್ದಾರೆ.












Click it and Unblock the Notifications