ಶಿವಮೊಗ್ಗ; ಹರ್ಷ ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ
ಶಿವಮೊಗ್ಗ, ಫೆಬ್ರವರಿ 22; ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದರು. ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಯುವಮೋರ್ಚಾ ವತಿಯಿಂದ 5 ಲಕ್ಷ ರೂ. ಚೆಕ್ ನೀಡಿದರು.
ಮಂಗಳವಾರ ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹರ್ಷ ನಿವಾಸಕ್ಕೆ ತೇಜಸ್ವಿಸೂರ್ಯ ಭೇಟಿ ನೀಡಿದರು. ಹರ್ಷ ತಾಯಿ, ತಂದೆ, ಸಹೋದರಿಯರಿಗೆ ಸಾಂತ್ವನ ಹೇಳಿದರು. ಯುವ ಮೋರ್ಚಾದ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು, ಬಿಜೆವೈಎಂ ಕಾರ್ಯಕರ್ತರೊಂದಿಗೆ ಹರ್ಷ ಪೋಷಕರನ್ನು ಭೇಟಿ ಮಾಡಿದೆವು. ಕರ್ನಾಟಕದಲ್ಲಿ ಬೆಳೆಯುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಅವರನ್ನು ಬಲಿ ಪಡೆದಿದೆ" ಎಂದರು.

"ಇದು ಕೇರಳ ಮಾದರಿ ಭಯೋತ್ಪಾದನೆ. ಪಿಎಫ್ಐ, ಎಸ್ಡಿಪಿಐ, ಸಿಪಿಐ ಮುಂತಾದ ಸಂಘಟನೆಗಳನ್ನು ಕರ್ನಾಟಕ ಮತ್ತು ದೇಶದ ಇತರ ಭಾಗಗಳಿಗೆ ರಫ್ತು ಮಾಡಲಾಗಿದೆ" ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.
"ನಾನು ಮುಖ್ಯಮಂತ್ರಿಗಳು ಮತ್ತು ಶಿವಮೊಗ್ಗ ಪೊಲೀಸರಿಗೆ ಮನವಿ ಮಾಡುತ್ತೇನೆ. ಆರೋಪಿಗಳ ವಿರುದ್ಧ ಕೇವಲ ಕೊಲೆ ಪ್ರಕರಣವಲ್ಲ ಯುಎಪಿಎ ಅಡಿ ಪ್ರಕರಣ ದಾಖಲು ಮಾಡಿ, ಇದನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿ" ಎಂದು ತೇಜಸ್ವಿ ಸೂರ್ಯ ಹೇಳಿದರು.

"ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ರಾಜ್ಯ ಗುಪ್ತಚರ ಇಲಾಖೆ ಅಡಿ ಒಂದು ಸಂಸ್ಥೆಯನ್ನು ಸ್ಥಾಪನೆ ಮಾಡಿ, ಅಗತ್ಯ ಸೌಕರ್ಯ ಕಲ್ಪಿಸಿ" ಎಂದರು.
ಹರ್ಷ ನಿವಾಸಕ್ಕೆ ಭೇಟಿ ನೀಡಿದ ಕುರಿತು ತೇಜಸ್ವಿ ಸೂರ್ಯ ಫೇಸ್ ಬುಕ್ ಪೋಸ್ಟ್ ಹಾಕಿದ್ದು, "ದೇಶ & ಧರ್ಮಕ್ಕಾಗಿ ಕೇವಲ ತನ್ನ 26ನೇ ವಯಸ್ಸಿನಲ್ಲಿಯೇ ಪ್ರಾಣ ತ್ಯಾಗ ಮಾಡಿರುವ ಹರ್ಷ ರವರ ಕುಟುಂಬ ವರ್ಗದವರನ್ನು ಶಿವಮೊಗ್ಗದಲ್ಲಿ ಇಂದು ಭೇಟಿಯಾಗಿ ಸಂತಾಪ ಸೂಚಿಸಿದೆ. ಇದು ಬರೀ ಕೊಲೆ ಅಲ್ಲ. ಇಂತಹ ಪೈಶಾಚಿಕ ಕೃತ್ಯ ಎಸಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ನೊಂದ ಕುಟುಂಬ ವರ್ಗದವರಿಗೆ ತಕ್ಕ ನ್ಯಾಯ ಒದಗಿಸುವಂತೆ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ರವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ" ಎಂದು ಹೇಳಿದ್ದಾರೆ.
6 ಆರೋಪಿಗಳ ಬಂಧನ; ಭಾನುವಾರ ರಾತ್ರಿ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಸಂಬಂಧ ಇದುವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಮುಖ ಆರೋಪಿಯೂ ಸೇರಿದ್ದಾನೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಬಿ. ಎಂ. ಲಕ್ಷ್ಮೀ ಪ್ರಸಾದ್ ಈ ಕುರಿತು ಮಾಹಿತಿ ನೀಡಿದರು. "ಇಬ್ಬರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಬಂಧಿಸಲಾಗಿದೆ. ಉಳಿದ ನಾಲ್ವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ" ಎಂದು ತಿಳಿಸಿದರು.
30 ವರ್ಷದ ಖಾಸಿಫ್ ಹರ್ಷ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಖಾಸಿಫ್ ಮತ್ತು ಸಯ್ಯದ್ ನದೀಂ ಎಂಬುವವರನ್ನು ಶಿವಮೊಗ್ಗದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಳಿದ ಬಂಧಿತ ಆರೋಪಿಗಳು ಅಸೀಫ್ ಉಲ್ಲಾ ಖಾನ್, ರಿಹಾನ್ ಷರೀಫ್, ನಿಹಾನ್, ಅಬ್ದುಲ್ ಅಫ್ನಾನ್.
ಹರ್ಷ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಸೋಮವಾರ ಮಧ್ಯಾಹ್ನ ಶಿವಮೊಗ್ಗ ನಗರದಲ್ಲಿ ಗಲಭೆ ನಡೆದಿತ್ತು. ಸುಮಾರು 20 ಜನರು ಗಾಯಗೊಂಡಿದ್ದು, 100ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಂಗಳವಾರ ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಪೊಲೀಸರು ಮತ್ತು ಆರ್ಎಎಫ್ ಸಿಬ್ಬಂದಿಗಳನ್ನು ನಗರದಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಬುಧವಾರ ಮುಂಜಾನೆ ತನಕ ಜಾರಿಯಲ್ಲಿದ್ದ ಕರ್ಫ್ಯೂವನ್ನು ಶುಕ್ರವಾರ ಮುಂಜಾನೆ ತನಕ ವಿಸ್ತರಣೆ ಮಾಡಲಾಗಿದೆ.












Click it and Unblock the Notifications