ಶಿವಮೊಗ್ಗ ಜಿಲ್ಲೆಯ ಗುಡಿ, ಚರ್ಚು, ಮಸೀದಿಗಳ ಮೈಕುಗಳ ಮೇಲೆ ಪೊಲೀಸ್ ನಿಗಾ
ಶಿವಮೊಗ್ಗ, ಜೂನ್ 23: ನ್ಯಾಯಾಲಯದ ಸೂಚನೆ ಹಿನ್ನಲೆ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆ ಬಗ್ಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ಗಳಿಗೆ ಸೌಂಡ್ ಗವರ್ನರ್ಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ರಾತ್ರಿ ವೇಳೆ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಮಾಡದಂತೆ ನಿಷೇಧ ಮಾಡಲಾಗಿದೆ.
ಈಚೆಗೆ ದೇಶಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ಸಂಬಂಧ ವಿವಾದ ಸೃಷ್ಟಿಯಾಗಿತ್ತು. ಅಲ್ಲದೆ ಮೈಕ್ ಬಳಕೆ ಕುರಿತು ನ್ಯಾಯಾಲಯ ಕೂಡ ಅದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಂಡಿರುವ ಶಿವಮೊಗ್ಗ ಪೊಲೀಸರು ಸೌಂಡ್ ಗವರ್ನರ್ ಮೊರೆ ಹೋಗಿದ್ದಾರೆ.
ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್: ಮೂರು ವಾರಗಳಲ್ಲಿ ವರದಿಗೆ ಹೈಕೋರ್ಟ್ ಆದೇಶ
ಕೋರ್ಟ್ ಆದೇಶಕ್ಕೂ ಮುನ್ನ ರಾತ್ರಿ ಹಗಲು ಎನ್ನದೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಮೈಕ್ ಬಳಸಲಾಗುತಿತ್ತು. ಕೋರ್ಟ್ ಆದೇಶದ ಬಳಿಕ ಶಿವಮೊಗ್ಗ ಪೊಲೀಸರು ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳ ಮೈಕ್ಗಳಿಗೆ ಲಗಾಮು ಹಾಕಿದ್ದಾರೆ. ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಹಗಲಲ್ಲೂ ಕಡಿಮೆ ಶಬ್ಧ ಬರುವ ಮೈಕ್ ಬಳಸಲು ಸೂಚನೆ
ಈ ಹಿಂದೆ ಹಗಲು ಹೊತ್ತಲ್ಲಿ ಲೌಡ್ ಸ್ಪೀಕರ್ ಮೂಲಕ ಹೆಚ್ಚಿನ ಶಬ್ದ ಬರುವಂತೆ ಮೈಕ್ ಬಳಸಲಾಗುತಿತ್ತು. ಇದೀಗ ಹಗಲು ವೇಳೆ ಬಳಸುವ ಲೌಡ್ ಸ್ಪೀಕರ್ಗಳಿಗೂ ಕಡಿವಾಣ ಹಾಕಲಾಗಿದೆ. ಹಗಲು ವೇಳೆಯಲ್ಲಿ 55 ಡೆಸಿಬಲ್ ಗಳಿಗಿಂತ ಕಡಿಮೆ ಶಬ್ದ ಬರುವಂತೆ ಮೈಕ್ ಬಳಸುವಂತೆ ಧಾರ್ಮಿಕ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.
ಶಬ್ದಮಾಲಿನ್ಯ ತಡೆಗಟ್ಟಲು ಪೊಲೀಸ್ ಕ್ರಮ
ಮೈಕ್ ಗಳಿಗೆ ಆಯಾ ಧಾರ್ಮಿಕ ಕೇಂದ್ರಗಳೇ ಸೌಂಡ್ ಗವರ್ನರ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳ ಮೈಕ್ ಗಳಿಗೆ ಸೌಂಡ್ ಗವರ್ನರ್ ಅಳವಡಿಸಲಾಗುತ್ತಿದೆ. ಶಬ್ದ ಮಾಲಿನ್ಯ ತಡೆಗಟ್ಟಲು ಪೊಲೀಸ್ ಇಲಾಖೆ ಈಗಾಗಲೇ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಶಿವಮೊಗ್ಗ ಜಿಲ್ಲೆಯ 700ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ಇಲಾಖೆ ಈ ಮೊದಲು ನೊಟೀಸ್ ನೀಡಿತ್ತು. ಇಂತಿಷ್ಟೆ ಡೆಸಿಬಲ್ ಶಬ್ದ ಬರುವ ಮೈಕ್ ಬಳಸಬೇಕು ಎಂದು ಸೂಚನೆ ನೀಡಿತ್ತು. ನೋಟೀಸ್ ನೀಡಿದ ಬಳಿಕ ಧಾರ್ಮಿಕ ಕೇಂದ್ರಗಳನ್ನು ಮಾನಿಟರಿಂಗ್ ಮಾಡಲಾಗುತ್ತಿದೆ.
ದೇವರ ಪ್ರಾರ್ಥನೆಯಷ್ಟೇ ನಮಗೆ ಮುಖ್ಯ, ಮೈಕ್ ಅಲ್ಲ; ಮಸೂದ್
ನಿಯಮ ಮೀರಿದರೆ ಕಾನೂನು ಕ್ರಮ
ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಶಬ್ದ ಬರುವ ಮೈಕ್ ಅಳವಡಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಿಯಮ ಮೀರಿದರೆ ಮೊದಲು ಧಾರ್ಮಿಕ ಕೇಂದ್ರಗಳಿಗೆ ತೆರಳಿ ಮುಖ್ಯಸ್ಥರಿಗೆ ಪೊಲೀಸರು ನೊಟೀಸ್ ನೀಡಲಿದ್ದಾರೆ. ಮತ್ತೊಂದೆಡೆ 55 ಡೆಸಿಬಲ್ ಗಿಂತಲೂ ಹೆಚ್ಚು ಶಬ್ದ ಬರುವ ಮೈಕ್ ಅಳವಡಿಸಿದ ಜಿಲ್ಲೆಯ 90ಕ್ಕೂ ಹೆಚ್ಚು ಕಡೆ ಸೌಂಡ್ ಗವರ್ನರ್ ಅಳವಡಿಸಲು ಪೊಲೀಸರು ಸೂಚನೆ ನೀಡಿದ್ದಾರೆ.
ಸ್ವಯಂ ಪ್ರೇರಣೆಯಿಂದ ಸೌಂಡ್ ಗವರ್ನರ್ ಅಳವಡಿಕೆ
ಈ ಕುರಿತು ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ , ಮಸೀದಿಯವರು ಸ್ವಯಂ ಪ್ರೇರಣೆಯಿಂದ ಸೌಂಡ್ ಗವರ್ನರ್ ಅಳವಡಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಡೆಸಿಬಲ್ ಕಂಡುಹಿಡಿಯುವ ಉಪಕರಣ ಬಳಸಿಕೊಳ್ಳಲಾಗಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳ ಆಡಳಿತ ಮುಖ್ಯಸ್ಥರನ್ನು ಕರೆದು ಸೂಚನೆ ನೀಡಲಾಗಿತ್ತು. ಯಾರಿಗೆ ಅಗತ್ಯವಿತ್ತೋ ಅವರೆಲ್ಲಾ ಖರೀದಿ ಮಾಡುತ್ತಿದ್ದಾರೆ. ಈ ಹಿಂದೆ ಒಂದು ದೂರು ಬಂದಿತ್ತು. ಇನ್ಮುಂದೆ ಯಾವುದೇ ದೂರು ಬಂದರೆ ಡೆಸಿಬಲ್ ಚೆಕ್ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹಗಲು ರಾತ್ರಿ ಎನ್ನದೆ ಧಾರ್ಮಿಕ ಕೇಂದ್ರಗಳಲ್ಲಿ ದೊಡ್ಡ ಶಬ್ದದ ಮೈಕ್ಗಳನ್ನು ಬಳಸಲಾಗುತ್ತಿತ್ತು. ಇದರಿಂದಾಗಿ ವೃದ್ಧರು, ರೋಗಿಗಳು ಹಾಗೂ ಮಕ್ಕಳು ಸಮಸ್ಯೆ ಎದುರಿಸುವಂತಾಗಿತ್ತು. ಜೊತೆಗೆ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಮೈಕ್ ಗಳ ಶಬ್ದದಿಂದಾಗಿ ಸರಿಯಾಗಿ ವ್ಯಾಸಂಗ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಇದೀಗ ಮೈಕ್ ಗಳ ಶಬ್ದಕ್ಕೆ ಬ್ರೇಕ್ ಹಾಕಿದ್ದರಿಂದಾಗಿ ಜನ ನಿರಾಳರಾಗಿದ್ದಾರೆ.