ಶಿವಮೊಗ್ಗ ಸ್ಫೋಟ; ಗಣಿ ಗುತ್ತಿಗೆ ಪಡೆದಿದ್ದ ವ್ಯಕ್ತಿ ಬಂಧನ
ಶಿವಮೊಗ್ಗ, ಜನವರಿ 22: ಗುರುವಾರ ರಾತ್ರಿ ಶಿವಮೊಗ್ಗ ಸಮೋಪ ಕಲ್ಲು ಕ್ರಷರ್ನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಇದುವರೆಗೂ ಘಟನೆಯಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಣಿ ಗುತ್ತಿಗೆ ಪಡೆದಿದ್ದ ಸುಧಾಕರ್ ಎಂಬುವವರನ್ನು ಪೊಲೀಸರು ಬಂದಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕ್ರಷರ್ಗೆ ಜಿಲೆಟಿನ್ ಕಡ್ಡಿಗಳನ್ನು ವಾಹನದಲ್ಲಿ ಸಾಗಣೆ ಮಾಡುವಾಗ ಅದು ಸ್ಫೋಟಗೊಂಡಿದೆ. ಗುರುವಾರ ರಾತ್ರಿ 10.30ರ ಸುಮಾರಿಗೆ ನಡೆದ ಸ್ಫೋಟದ ತೀವ್ರತೆಗೆ ಭಾರೀ ಶಬ್ದವೂ ಕೇಳಿ ಬಂದಿದೆ.
ಸ್ಫೋಟ ನಡೆದ ಜಮೀನು ಅವಿನಾಶ್ ಕುಲಕರ್ಣಿ ಅವರಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ರೈಲ್ವೆ ಇಲಾಖೆಗೆ ಜಲ್ಲಿಗಳನ್ನು ಪೂರೈಕೆ ಮಾಡುವ ಕ್ರಷರ್ ಇದಾಗಿದೆ. ಜಲ್ಲಿ ಒದಗಿಸುವ ಗುತ್ತಿಗೆಯನ್ನು ಸುಧಾಕರ್ ಎಂಬುವವರು ಪಡೆದಿದ್ದರು.

ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡ ಪರಿಣಾಮ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಭಾರೀ ಶಬ್ದ ಕೇಳಿ ಬಂದಿದ್ದುದೆ. ಮೊದಲು ಜನರು ಭೂಕಂಪವಾಗಿದೆ ಎಂದು ಅಂದಾಜಿಸಿದ್ದರು. ಕೆಲವು ಕಾಲ ಆತಂಕಗೊಂಡಿದ್ದ ಜನರು ಮನೆಯಿಂದ ಹೊರ ಬಂದು ಏನಾಯಿತು? ಎಂದು ನೋಡಿದ್ದಾರೆ.
ಸಂಸದರ ಸಂತಾಪ; ಕ್ರಷರ್ನಲ್ಲಿ ನಡೆದ ಸ್ಫೋಟದ ಬಗ್ಗೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ. "ಶಿವಮೊಗ್ಗದ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರೀ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿದ ಸುದ್ದಿ ತಿಳಿದು ಬೇಸರವಾಯಿತು. ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ತಡರಾತ್ರಿಯಿಂದಲೇ ಸಂಪರ್ಕದಲ್ಲಿದ್ದು ಮಾನ್ಯ ಮುಖ್ಯಮಂತ್ರಿಗಳಿಗೂ ಈ ಆಘಾತ ಸುದ್ದಿಯ ಬಗ್ಗೆ ತಿಳಿಸಲಾಯಿತು" ಎಂದು ಹೇಳಿದ್ದಾರೆ.
"ಸನ್ಮಾನ್ಯ ಮುಖ್ಯಮಂತ್ರಿಗಳು ತೀವ್ರ ಸಂತಾಪವನ್ನು ಸೂಚಿಸಿ, ಅಗತ್ಯ ರಕ್ಷಣಾ ಕಾರ್ಯಾಚರಣೆಗೆ ತಂಡಗಳನ್ನು ಈಗಾಗಲೇ ಕಳಿಸಿದ್ದಾರೆ ಮತ್ತು ಈ ದುರ್ಘಟನೆಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಭಗವಂತನು ಅವರ ಕುಟುಂಬದವರಿಗೆ ಈ ದುರಂತದಿಂದಾಗಿರುವ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಂಸದರು ತಿಳಿಸಿದ್ದಾರೆ.












Click it and Unblock the Notifications