ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಲಗ್ಗೆ ಇಡಲಿದೆ 'ನಂದಿನಿ' ಹಾಲು
ಶಿವಮೊಗ್ಗ, ಡಿಸೆಂಬರ್ 22: ಕೆಎಂಎಫ್ ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ನಂದಿನಿ ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಣೆ ಮಾಡಲು ಈಗ ಕೆಎಂಎಫ್ ಮುಂದಾಗಿದ್ದು, ರಾಜಸ್ಥಾನದಲ್ಲಿ ನಂದಿನಿ ಹಾಲಿನ ಮಾರಾಟವನ್ನು ಪ್ರಾರಂಭಿಸಲು ತಯಾರಿಯನ್ನು ನಡೆಸಿದೆ. ಶಿಮುಲ್ ಮೂಲಕ ರಾಜಸ್ಥಾನಕ್ಕೆ ನಂದಿನಿ ಹಾಲಿನ ಪೂರೈಕೆ ಆಗಲಿದೆ.
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಭೀಮಾನಾಯ್ಕ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಉತ್ತರ ಭಾರತದಲ್ಲಿ ಕೆಎಂಎಫ್ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಮೂಲಕ ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ಅಧ್ಯಕ್ಷರ ಪೋಸ್ಟ್: ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ತಮ್ಮ ಪೋಸ್ಟ್ನಲ್ಲಿ, 'ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟು ಬ್ರಾಂಡ್ ಉತ್ಪನ್ನಗಳ ಜತೆಗೆ ರಾಜಸ್ಥಾನಕ್ಕೂ ಲಗ್ಗೆ ಇಡಲು ಚಿಂತಿಸಿದ್ದೇವೆ. ಈಗಾಗಲೇ ರಾಜಸ್ಥಾನದಲ್ಲಿ ಒಂದು ಹಂತದ ಸರ್ವೇ ಮಾಡಲಾಗಿದ್ದು, ಮಾರುಕಟ್ಟೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲು ಜೈಪುರ ದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುವುದು' ಎಂದು ಹೇಳಿದ್ದಾರೆ.
'ಬಳಿಕ ಭೋಪಾಲ್, ಇಂದೋರ್ನಲ್ಲಿಯೂ ನಂದಿನಿ ಹಾಲು ಮಾರಾಟ ಮಾಡಲು ಯೋಚಿಸಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಮುಂದಿನ ಸಂವತ್ಸರದಲ್ಲಿ ಉತ್ತರ ಭಾರತದೆಲ್ಲೆಡೆ ಕನ್ನಡ ನಾಡಿನ ಹೆಮ್ಮೆಯ ನಮ್ಮ ನಂದಿನಿ ಬ್ರಾಂಡ್ ಅನ್ನು ವಿಸ್ತರಿಸುತ್ತೇವೆ' ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಸದ್ಯ ನವದೆಹಲಿ ಮತ್ತು ಸುತ್ತಮತ್ತಲಿನ ರಾಜ್ಯಕ್ಕೆ ಮಂಡ್ಯ ಹಾಲು ಒಕ್ಕೂಟದ ಮೂಲಕ ನಂದಿನಿ ಹಾಲನ್ನು ಪೂರೈಕೆ ಮಾಡಲಾಗುತ್ತಿದೆ. ರಾಜಸ್ಥಾನ ರಾಜ್ಯಕ್ಕೆ ಶಿಮುಲ್ನಿಂದ ಹಾಲು ಪೂರೈಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಹೊಂದಿದೆ.
ದೆಹಲಿಯಲ್ಲಿ ಈಗಾಗಲೇ 15 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಮುಂದಿನ ಹಂತದಲ್ಲಿ ಉತ್ತರ ಪ್ರದೇಶದ ನೋಯ್ಡಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಾಲು ಮಾರಾಟ ಮಾಡಲು ಕೆಎಂಎಫ್ ಬಯಸಿದೆ. ಮೊದಲು ದೆಹಲಿಯಲ್ಲಿ ಹಾಲು ಮಾರಾಟಕ್ಕೆ ತೀವ್ರ ಪ್ರತಿರೋಧ ಎದುರಾಗಿತ್ತು. ಈಗ ಆ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಮಾರುಕಟ್ಟೆಗೆ ಲಗ್ಗೆ ಇಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ನಲ್ಲಿ ದೆಹಲಿಯಲ್ಲಿ ನಂದಿನಿ ಹಾಲು ಮಾರಾಟಕ್ಕೆ ಚಾಲನೆ ನೀಡಿದ್ದರು. ಸದ್ಯ 15 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 25 ಸಾವಿರ ಲೀಟರ್ ಗಡಿ ದಾಟಿಸಲು ಸಹ ಕೆಎಂಎಫ್ ಮಾರುಕಟ್ಟೆ ತಂತ್ರವನ್ನು ರೂಪಿಸುತ್ತಿದೆ.
ದೆಹಲಿಯಲ್ಲಿ ಕೆಎಂಎಫ್ನ ನಂದಿನಿ ಹಾಲು ಮಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕೆಎಂಎಫ್ ದೆಹಲಿಯ ಕರ್ನಾಟಕ ಭವನದಲ್ಲಿ ಶೀಘ್ರದಲ್ಲಿಯೇ ಕೆಎಂಎಫ್ ಮಳಿಗೆ ಆರಂಭಿಸಲು ಸಹ ನಿರ್ಧರಿಸಿದೆ.
ಭದ್ರಾವತಿ ಸಮೀಪದ ಮಾಚೇನಹಳ್ಳಿಯಲ್ಲಿರು ಶಿಮುಲ್ ಹಾಲಿನ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿತ್ತು. ಅಲ್ಲದೇ ಬ್ರೆಡ್, ಬನ್ ಸೇರಿದಂತೆ ಹಾಲಿನ ಉತ್ಪನ್ನ ತಯಾರಿಕೆಯನ್ನು ಮಾಡಲಾಗುತ್ತಿದೆ. ಹಾಲಿನ ಉತ್ಪಾದನೆ ಅಕ್ಟೋಬರ್ನಲ್ಲಿ ಪ್ರತಿನಿತ್ಯ 6.27 ಲಕ್ಷ ಲೀಟರ್ ನಿಂದ 7.84 ಲಕ್ಷ ಲೀಟರ್ಗೆ ಹೆಚ್ಚಳವಾಗಿತ್ತು.












Click it and Unblock the Notifications