ಸಿಗಂದೂರು ಸೇತುವೆ ಕಾಮಗಾರಿ ಯಾವಾಗ ಮುಕ್ತಾಯ?
ಶಿವಮೊಗ್ಗ, ಏಪ್ರಿಲ್ 14: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ 2024ಕ್ಕೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ವಿವಿಧ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ. 2.44 ಕಿ. ಮೀ. ಉದ್ದದ ಸೇತುವೆಯನ್ನು ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸೇತುವೆ ಕಾಮಗಾರಿ ಈಗ ಅಂತಿಮ ಹಂತಕ್ಕೆ ತಲುಪಿದೆ. ಈ ಬಾರಿಯ ಮಳೆಗಾಲ ಆರಂಭಕ್ಕೂ ಮುನ್ನ ಸೇತುವೆ ಉದ್ಘಾಟನೆಗೊಳ್ಳಲಿದೆ.
ಸಾಗರ ತಾಲೂಕಿನ ಕಳಸವಳ್ಳಿ-ಸಿಗಂದೂರು ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿದ್ದರು. ಆಗ ಸಿಗಂದೂರು ಸೇತುವೆಯ ಕುರಿತು ಸಹ ಚರ್ಚೆ ನಡೆಸಿದ್ದಾರೆ.

ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಕರ್ನಾಟಕ ರಾಜ್ಯದ ಪರವಾಗಿ ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆಗ ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾಗಿರುವ ಯೋಜನೆಗಳ ವಿವರ ನೀಡುವಾಗ ರಾ. ಹೆ. 369 ಇ (ಸಿಗಂದೂರು ಸೇತುವೆ) ಶರಾವತಿ ಹಿನ್ನೀರಿನ ಮೇಲೆ ಪ್ರಮುಖ ಸೇತುವೆ ನಿರ್ಮಾಣವನ್ನು ಸಹ ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದರು.
ಸಂಸದರ ಅಭಿನಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಗಂದೂರು ಸೇತುವೆ ಯೋಜನೆ ಕುರಿತು ಸಚಿವರ ಜೊತೆ ಚರ್ಚಿಸಿದ್ದಕ್ಕೆ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಹ ಸಂತಸ ವ್ಯಕ್ತಪಡಿಸಿದ್ದರು, ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದರು.
ಸಂಸದರು ತಮ್ಮ ಪೋಸ್ಟ್ನಲ್ಲಿ, 'ಕರ್ನಾಟಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ಬೃಹತ್ ಸೇತುವೆಗಳ ನಿರ್ಮಾಣಕ್ಕೆ ಸೂಕ್ತ ಅನುದಾನ ನೀಡಿರುವ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ತಿಳಿಸುವ ಸಂದರ್ಭದಲ್ಲಿ ನನ್ನ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಸುಮಾರು 423 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯದ ಅತಿ ಉದ್ದದ ಐತಿಹಾಸಿಕ ಸಿಗಂದೂರು ಸೇತುವೆ ಕಾಮಗಾರಿ ಪ್ರಸ್ತಾಪಿಸಿರುವುದು ಅತ್ಯಂತ ಅಭಿನಂದನೀಯ' ಎಂದು ಹೇಳಿದ್ದರು.
'ಮುಂದಿನ ದಿನಗಳಲ್ಲಿ ನನ್ನ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನದೊಂದಿಗೆ ರಾಜ್ಯ ಸರ್ಕಾರದಿಂದ ಇನ್ನಷ್ಟು ಅನುದಾನ ನೀಡುವ ನಿರೀಕ್ಷೆ ಇದ್ದು, ತಮ್ಮ ಸಹಕಾರಕ್ಕಾಗಿ ಮತ್ತೊಮ್ಮೆ ಧನ್ಯವಾದ ತಿಳಿಸುತ್ತೇನೆ' ಎಂದು ಪೋಸ್ಟ್ ಹಾಕಿದ್ದರು.
ಕಳಸವಳ್ಳಿ-ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಮಾರ್ಚ್ ಅಂತ್ಯದಲ್ಲಿ ಸೇತುವೆಯ ಕಡೆಯ ಸೆಗ್ಮೆಂಟ್ ಜೋಡಣೆಗೆ ಪೂಜೆ ಸಲ್ಲಿಸಲಾಗಿತ್ತು. ಈಗಾಗಲೇ ಸೇತುವೆಯ ರೋಪ್ ವೇ ಮತ್ತು ಹಲವು ಕಡೆ ಸೆಗ್ಮೆಂಟ್ ಜೋಡಣೆ ಪೂರ್ಣಗೊಂಡಿದೆ. ಕಾಮಗಾರಿ ಪೂರ್ಣಗೊಂಡಲ್ಲಿ ಒಂದು ಹಂತದ ಡಾಂಬಾರ್ ಹಾಕುವ ಪ್ರಕ್ರಿಯೆಯೂ ಮುಗಿದಿದೆ.
ಅಂತಿಮ ಹಂತದಲ್ಲಿ ಕೇಬಲ್, ಲೈಟಿಂಗ್ ಫಿನಿಷ್, ಸೇತುವೆ ಮೇಲೆ ಡಾಂಬರ್ ಹಾಕುವ ಕಾರ್ಯ ನಡೆಯಬೇಕಿದೆ. ಈಗಾಗಲೇ ಅಂಬಾರಗೊಡ್ಲು ಭಾಗದಿಂದ 200 ಮೀಟರ್ ರಸ್ತೆ ಕಾಮಗಾರಿ ಆರಂಭವಾಗಿದೆ. ಇನ್ನೂ ಎರಡು ತಿಂಗಳಿನಲ್ಲಿ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಜೂನ್ ಮೊದಲ ವಾರದಲ್ಲಿ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
ಸಿಗಂದೂರು ಸೇತುವೆಗಾಗಿ 2019ರಲ್ಲಿ ಸಚಿವ ನಿತಿನ್ ಗಡ್ಕರಿ ಶಂಕು ಸ್ಥಾಪನೆ ಮಾಡಿದ್ದರು. ಇದು ದೇಶದ 2ನೇ ಅತಿ ಉದ್ದನೆಯ ಕೇಬಲ್ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ. ಒಟ್ಟು 2.44 ಕಿ.ಮೀ ಉದ್ದದ ಸೇತುವೆ, 11 ಮೀಟರ್ ಅಗಲವಾದ ರಸ್ತೆಯನ್ನು ಹೊಂದಿರಲಿದೆ.












Click it and Unblock the Notifications