ಚಿತ್ರಗಳು; ಗಲಭೆ ಬಳಿಕ ಮಂಗಳವಾರ ಶಿವಮೊಗ್ಗದ ಚಿತ್ರಣ
ಶಿವಮೊಗ್ಗ, ಫೆಬ್ರವರಿ 22; ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ, ಗಲಭೆ ಬಳಿಕ ಕರ್ಫ್ಯೂ ಜಾರಿಯಾದರೂ ಶಿವಮೊಗ್ಗದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ ನಿಂತಿಲ್ಲ. ಮೂರು ಆಟೋ ರಿಕ್ಷಾ ಮತ್ತು ಎರಡು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ.
ಮಂಗಳವಾರ ಬೆಳಗಿನ ಜಾವ ಟಿಪ್ಪು ನಗರ ಮತ್ತು ಕೊರಮ ಕೇರಿಯಲ್ಲಿ ಆಟೋ ಮತ್ತು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಅಹಿತಕರ ಘಟನೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ರೂಟ್ ಮಾರ್ಚ್ ಆಯೋಜಿಸಲಾಗಿತ್ತು. ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು ಮತ್ತು ಆರ್. ಎ. ಎಫ್ ಸಿಬ್ಬಂದಿ ರೂಟ್ ಮಾರ್ಚ್ನಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ನಗರದ ಎಎ ಸರ್ಕಲ್ ನಿಂದ ಓ. ಟಿ. ರಸ್ತೆ, ಸೀಗೆಹಟ್ಟಿ, ಬಿ. ಬಿ. ರಸ್ತೆ, ವಂದನಾ ಟಾಕೀಸ್, ಸಿದ್ದಯ್ಯ ಸರ್ಕಲ್, ಎಂ. ಕೆ. ಕೆ. ರಸ್ತೆ, ಶಿವಪ್ಪನಾಯಕ ಸರ್ಕಲ್, ಲಷ್ಕರ್ ಮೊಹಲ್ಲದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.

ಎಲ್ಲೆಲ್ಲೂ ಬಿಗಿ ಬಂದೋಬಸ್ತ್
ಕರ್ಫ್ಯೂ ಹಿನ್ನೆಲೆ ಇವತ್ತು ಶಿವಮೊಗ್ಗ ನಗರ ಸಂಪೂರ್ಣ ಸ್ಥಬ್ಧವಾಗಿದೆ. ವ್ಯಾಪಾರ, ವಹಿವಾಟು ಇಲ್ಲದೆ ನಗರ ಬಣಗುಡುತ್ತಿದೆ. ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಿಗೆ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ವ್ಯಾಪಾರ, ವಹಿವಾಟು ಬಂದ್
ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿದೆ. ಗಾಂಧಿ ಬಜಾರ್, ನೆಹರೂ ರಸ್ತೆ, ಬಿ. ಹೆಚ್. ರಸ್ತೆ, ದುರ್ಗಿಗುಡಿ ಸೇರಿದಂತೆ ಬಹುಭಾಗದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ.

ಜನ ಸಂಚಾರ ವಿರಳ
ಕರ್ಫ್ಯೂ ಹಿನ್ನಲೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಾರ ವಹಿವಾಟು ಕೂಡ ಸ್ಥಬ್ಧಗೊಂಡಿದ್ದರಿಂದ ಜನ ಸಂಚಾರ ಕೂಡ ವಿರಳವಾಗಿತ್ತು. ಕೆಲವು ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅನಗತ್ಯ ಜನ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು.

ಪ್ರಮುಖ ರಸ್ತೆಗಳೆಲ್ಲ ಬಂದ್
ಕರ್ಫ್ಯೂ ಹಿನ್ನೆಲೆ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದರು. ಬ್ಯಾರಿಕೇಡ್ ಹಾಕಿ ಮುಖ್ಯ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಜನ ಮತ್ತು ವಾಹನ ಸಂಚಾರ ತಡೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.
ಕರ್ಫ್ಯೂ ಜಾರಿ ಆಗಿರುವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಸಿಟಿ ಬಸ್ಸುಗಳು ರಸ್ತೆಗೆ ಇಳಿಯದೆ ತುರ್ತು ಕೆಲಸಗಳಿಗೆ ಓಡಾಡುವರು ಸಂಕಷ್ಟಕ್ಕೀಡಾದರು. ಶಿವಮೊಗ್ಗದ ಸಿಟಿ ಬಸ್ಸುಗಳು ಇವತ್ತು ಸಂಚಾರ ನಡೆಸಲಿಲ್ಲ. ಯಾವುದೇ ಬಸ್ಸುಗಳ ಸಂಚಾರ ನಡೆಸದೆ ಜನರು ಸಮಸ್ಯೆ ಅನುಭವಿಸಿದರು.

ಶಿವಮೊಗ್ಗ-ಭದ್ರಾವತಿ ಬಸ್ ಸಂಚಾರ
ಸರ್ಕಾರಿ ಬಸ್ಸುಗಳು ನಿರಂತರವಾಗಿ ಸಂಚರಿಸಿದವು. ಆದರೆ ನಗರದೊಳಗೆ ಬಸ್ಸುಗಳು ಬಾರದಂತೆ ಪೊಲೀಸರು ತಡೆದರು. ಬಸ್ಸುಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿತ್ತು. ಶಿವಮೊಗ್ಗ-ಭದ್ರಾವತಿ ನಡುವಿನ ಬಸ್ಸುಗಳ ಸಂಚಾರ ಎಂದಿನಂತೆ ಇತ್ತು. ಕೆಲುವು ಹೊತ್ತು ಬಸ್ಸುಗಳು ನಿಲ್ದಾಣದಿಂದ ಹೊರಡುವ ಬದಲು ಎಂ. ಆರ್. ಎಸ್ ಸರ್ಕಲ್ನಿಂದ ತೆರಳುತ್ತಿದ್ದವು.
ದೂರದ ಊರುಗಳಿಗೆ ತೆರಳುವ ಖಾಸಗಿ ಬಸ್ ಸಂಚಾರವು ಎಂದಿನಂತೆ ಇತ್ತು. ಈ ಬಸ್ಸುಗಳು ಕೂಡ ನಗರದ ಒಳಗೆ ಪ್ರವೇಶಿಸದ ಹಾಗೆ ಸೂಚಿಸಲಾಗಿತ್ತು. ಮತ್ತೊಂದು ಕಡೆ ಉದ್ವಿಗ್ನ ಪರಿಸ್ಥಿತಿ ಮತ್ತು ಕರ್ಫ್ಯೂ ಹಿನ್ನಲೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.












Click it and Unblock the Notifications