Shivamogga airport; 4 ಅಪ್ಡೇಟ್ ಕೊಟ್ಟ ಸಂಸದ
ಉದ್ಘಾಟನೆಗೆ ಸಿದ್ಧಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಸಂಸದ ಬಿ. ವೈ. ರಾಘವೇಂದ್ರ 4 ಅಪ್ಡೇಟ್ ಕೊಟ್ಟಿದ್ದಾರೆ.
ಶಿವಮೊಗ್ಗ, ಫೆಬ್ರವರಿ 08; ಮಲೆನಾಡಿನ ಜನರು ಬಹುವರ್ಷಗಳ ಕನಸು ನನಸಾಗಿದೆ. ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ತಿಂಗಳ ಅಂತ್ಯದಲ್ಲಿ ಉದ್ಘಾಟಿಸಲಿದ್ದಾರೆ.
ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ನಿಲ್ದಾಣದ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಎಐಎ ತಂಡ ಅಂತಿಮ ಪರಿವೀಕ್ಷಣೆಯನ್ನು ನಡೆಸಿದ ಬಳಿಕ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಗಲಿದೆ.
ಸಂಸದ ಬಿ. ವೈ. ರಾಘವೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ನಾಲ್ಕು ಅಪ್ಡೇಟ್ಗಳನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ವಿಮಾನಯಾನ ಸಂಸ್ಥೆಗಳು ಸಂಚಾರ ಆರಂಭಿಸಲಿವೆ.
ಸೋಗಾನೆಯ ವಿಮಾನ ನಿಲ್ದಾಣ 3050 ಮೀ ಉದ್ದ ಮತ್ತು 45 ಮೀ ಅಗಲದ ರನ್ವೇ ಒಳಗೊಂಡಿದೆ. ರಾತ್ರಿ ಸಮಯದಲ್ಲಿಯೂ ವಿಮಾನ ಇಳಿಸುವ ಸೌಲಭ್ಯವನ್ನು ನಿಲ್ದಾಣ ಹೊಂದಿದೆ. ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2347 ಚದುರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 2 ಎಲೆಕ್ಟ್ರಿಕ್ ಸಬ್ ಸ್ಟೇಷನ್, 1 ಫೈರ್ ಸ್ಟೇಷನ್ ಹಾಗೂ ಇತರೆ ಕಾಮಗಾರಿಗಳು ಅಂತಿಮ ಹಂತದಲ್ಲಿವೆ.

ಎಎಐ ಅಧಿಕಾರಿಗಳ ತಂಡದ ಭೇಟಿ
ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಇನ್ನೂ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಸಂಸದ ಬಿ. ವೈ. ರಾಘವೇಂದ್ರ ಅವರು ಹೇಳುವಂತೆ, "ಫೆಬ್ರವರಿ 8 ರಿಂದ 10ರೊಳಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಲಿದೆ. ವಿಮಾನ ನಿಲ್ದಾಣದ ಅಂತಿಮ ಪರಿಶೀಲನೆಯನ್ನು ನಡೆಸಿ ವಿಮಾನ ಹಾರಾಟಕ್ಕೆ ಲೈಸೆನ್ಸ್ ನೀಡಲಿದೆ" ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಗೆ ಆಗಮಿಸುವಾಗ ಅವರ ವಿಮಾನವನ್ನೇ ಮೊದಲು ಲ್ಯಾಂಡ್ ಮಾಡಲು ಚಿಂತನೆ ನಡೆದಿದೆ. ಅದಕ್ಕೂ ಮೊದಲು ಪ್ರಾಯೋಗಿವಾಗಿ ವಿಮಾನ ಲ್ಯಾಂಡ್ ಮಾಡಿಸಿ, ರನ್ವೇಯಿಂದ ಟೇಕಾಫ್ ಕೂಡ ಮಾಡಲಾಗುತ್ತದೆ.

ರಾಜ್ಯ ಸರ್ಕಾರದಿಂದಲೇ ನಿರ್ವಹಣೆ
ವಿಮಾನಗಳ ಹಾರಾಟದ ತಾಂತ್ರಿಕ ನಿರ್ವಹಣೆಯನ್ನು ಕೇಂದ್ರದ ಎಎಐ ನಿರ್ವಹಣೆ ಮಾಡಲಿದೆ. ಆದರೆ ಉಳಿದ ನಿರ್ವಹಣೆಯನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಲಿದೆ. ವಿಮಾನ ನಿಲ್ದಾಣದ ಭದ್ರತೆಗೆ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜನೆ ಮಾಡಲಾಗುತ್ತದೆ.
ವಿಮಾನ ನಿಲ್ದಾಣದ ಆರ್ಇಎಸ್ಎ, ಬಾಹ್ಯ (ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಏರಿಯಾ ಮತ್ತು ಇತರೆ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. 2 ಎಲೆಕ್ಟ್ರಿಕ್ ಸಬ್ ಸ್ಟೇಷನ್, 1 ಫೈರ್ ಸ್ಟೇಷನ್ ಹಾಗೂ ಇತರ ನಿರ್ವಹಣೆ ರಾಜ್ಯದ ಕೈಯಲ್ಲಿಯೇ ಇರಲಿದೆ.

ಎರಡು ಏರ್ಲೈನ್ಸ್ಗಳ ಜೊತೆ ಸಭೆ
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಶಿವಮೊಗ್ಗದಿಂದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯ ಮತ್ತು ಅಕ್ಕಪಕ್ಕದ ರಾಜ್ಯಗಳಿಗೆ ವಿಮಾನ ಸಂಪರ್ಕ ಸಾಧ್ಯವಾಗಲಿದೆ.
ಸಂಸದ ಬಿ. ವೈ. ರಾಘವೇಂದ್ರ ನೀಡಿರುವ ಮಾಹಿತಿಯಂತೆ, "ಶಿವಮೊಗ್ಗಕ್ಕೆ ವಿಮಾನ ಹಾರಾಟ ಸಂಬಂಧ ಎರಡು ಏರ್ಲೈನ್ಸ್ಗಳಜೊತೆ ಮಾತುಕತೆ ನಡೆದಿದೆ. ಸ್ಟಾರ್ ಏರ್ ಮತ್ತು ಇಂಡಿಗೋ ವಿಮಾನ ಸೇವೆ ಒದಗಿಸಲು ಆಸಕ್ತಿ ತೋರಿಸಿವೆ" ಎಂದು ಹೇಳಿದ್ದಾರೆ.

ಟೂರಿಸಂ ರೋಡ್ ಶೋ ಆಯೋಜನೆ
ರಾಜ್ಯದ ಬೇರೆ ವಿಮಾನ ನಿಲ್ದಾಣಗಳ ರೀತಿ ಶಿವಮೊಗ್ಗ ವಿಮಾನ ನಿಲ್ದಾಣ ಕೇವಲ ಕಾಂಕ್ರೀಟ್ ಕಟ್ಟಡವಾಗಿ ಉಳಿಯಲು ಬಿಡುವುದಿಲ್ಲ ಎಂದು ಸಂಸದ ಬಿ. ವೈ. ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಇದಕ್ಕಾಗಿಯೇ ಶಿವಮೊಗ್ಗದಲ್ಲಿ ಟೂರಿಸಂ ರೋಡ್ ಶೋ ನಡೆಸಲಾಗುತ್ತದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಭೇಟಿಯಾಗಿ ಸಂಸದರು ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿ ನೀಡಿದ್ದಾರೆ.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭಗೊಂಡರೆ ಶಿವಮೊಗ್ಗ ಮಾತ್ರವಲ್ಲ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಜನರಿಗೂ ಸಹ ಅನುಕೂಲವಾಗಲಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸು.

ವಿವಿಧ ಅಧಿಕಾರಿಗಳ ಭೇಟಿ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿವಿಧ ಅಧಿಕಾರಿಗಳ ತಂಡ ಈಗಾಗಲೇ ಭೇಟಿ ನೀಡುತ್ತಿದೆ. ನಾಗರೀಕ ವಿಮಾನಯಾನ ಮಂತ್ರಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಸೋಗಾನೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಮಾನ ನಿಲ್ದಾಣದ ಕಾಮಗಾರಿಗಳು, ನಿಲ್ದಾಣದ ಅಂತಿಮ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ಕೆಎಸ್ಐಐಡಿಸಿ ನಿಗಮದ ಅಧ್ಯಕ್ಷರಾದ ಡಾ. ಕೆ. ಶೈಲೇಂದ್ರ ಬೆಲ್ದಾಳೆ ವಿಮಾನ ನಿಲ್ದಾಣದ ಕಾಮಗಾರಿಗಳ ಪರಿವೀಕ್ಷಣೆಯನ್ನು ಮಾಡಿದ್ದಾರೆ. ಕಾಮಗಾರಿಗಳನ್ನು ಬೇಗ ಮುಗಿಸಲು ವಿಮಾನ ನಿಲ್ದಾಣಕ್ಕೆ ಜನರ ಭೇಟಿ ಸಹ ನಿರ್ಬಂಧಿಸಲಾಗಿದೆ.












Click it and Unblock the Notifications