ಮೈಸೂರಿನ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಸುವುದು ಅಧಿಕಾರಿಗಳಿಗೇ ಬೇಡ
ಮೈಸೂರು, ನವೆಂಬರ್ 19 : ಸ್ವಚ್ಛನಗರಿ ಎಂದೇ ಹೆಸರಾದ ಮೈಸೂರಿನ ಹೃದಯ ಭಾಗದಲ್ಲಿರುವ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶೌಚಕ್ಕೆ 5 ರುಪಾಯಿ ದರ ನಿಗದಿ ಪಡಿಸುವ ಮೂಲಕ ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ.
ಆದರೆ, ಈ ಕುರಿತು ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ. ಅವರು 3 ರುಪಾಯಿ ಇದೆ ಎಂದು ಹೇಳುತ್ತಾರೆ. ಅಲ್ಲಿ ಪ್ರತಿಯೊಬ್ಬರಿಗೆ 5 ರುಪಾಯಿ ತೆಗೆದುಕೊಳ್ಳುತ್ತಾರೆ. ಇದರಿಂದ ಸ್ವಚ್ಛ ನಗರಿ ಎಂದು ಘೋಷಿಸಿದ್ದರೂ ಮಾತ್ರ ಅಲ್ಲಲ್ಲಿ ಮೂತ್ರ ಮಾಡುವ ಪರಿಯನ್ನು ಮಾತ್ರ ನಿಯಂತ್ರಿಸಲು ಅಸಾಧ್ಯವಾಗಿದೆ.
ನಗರದ ಹೃದಯ ಭಾಗದಲ್ಲಿರುವ ಕೆಎಸ್ ಆರ್ ಟಿಸಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳನ್ನು ಶುಚಿಗೊಳಿಸುವ ಹೊಣೆಯನ್ನು ಕೆಲವರ ನಿರ್ವಹಣೆಗೆ ವಹಿಸಲಾಗಿದೆ. ಶೌಚಾಲಯಗಳ ಶುಚಿತ್ವ ಕಾಪಾಡುವುದು ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಸಾರ್ವಜನಿಕರಿಂದ ಪಡೆಯುವ ಕೆಲಸ ಇವರದಾಗಿದೆ.

ಮೊದಲು ಆರಂಭವಾದಾಗ 3 ರುಪಾಯಿಯೇ ಇತ್ತು. ಸಾರ್ವಜನಿಕರು ಹಾಗೂ ಪ್ರಯಾಣಿಕರು ಆಗ ಶೌಚಾಲಯ ಬಳಕೆ ಮಾಡುತ್ತಿದ್ದರು. ಬಳಿಕ 5 ರುಪಾಯಿ ಮಾಡಲಾಯಿತು. ಈಗಂತೂ ಕೆಲವು ಬಾರಿ 6 ರುಪಾಯಿ ಸಹ ವಸೂಲಿ ಮಾಡಲಾಗುತ್ತಿದೆ ಎನ್ನುತ್ತಾರೆ ಪ್ರಯಾಣಿಕರು.
ಸಫಾಯಿ ಕರ್ಮಚಾರಿ ಆಯೋಗದ ಅಧಿಕಾರಿಗಳು ಸೂಚಿಸಿದರೂ ಇಲ್ಲಿನ ಶೌಚಾಲಯಗಳಲ್ಲಿ ಮನಬಂದಂತೆ ದರ ವಸೂಲಿ ಮಾಡುತ್ತಿದ್ದಾರೆ. ಶೌಚಾಲಯ ಬಳಿ ದರವನ್ನು ಸಹ ನಮೂದಿಸಿಲ್ಲ. ದರ ಹೆಚ್ಚಿರುವುದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಶೌಚಾಲಯ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಅನಿವಾರ್ಯವಾಗಿ ವಿವಿಧ ಪ್ರದೇಶಗಳಲ್ಲಿ ಬಯಲು ಶೌಚ ಮಾಡುತ್ತಿದ್ದಾರೆ.
ಇವುಗಳನ್ನು ಹೊರತು ಪಡಿಸಿ, ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಮೂತ್ರಾಲಯ ನಿರ್ಮಿಸಲಾಗಿದೆ. ಅವು ನಿರ್ವಹಣೆ ಕೊರತೆಯಿಂದ ಗಬ್ಬು ನಾರುತ್ತಿವೆ. ಇದರಿಂದ ಇಲ್ಲಿನ ವಾಹನ ಚಾಲಕರು ಹಾಗೂ ನಿರ್ವಾಹಕರೇ ಅಲ್ಲಿರುವ ಸಾರ್ವಜನಿಕ ಶೌಚಾಲಯ ಬಳಸದೆ ಹೊರಗೆ ಮೂತ್ರ ವಿಸರ್ಜಿಸುತ್ತಾರೆ. ಇದರಿಂದಾಗಿ ನಿಲ್ದಾಣಕ್ಕೆ ಬಂದ ಮಹಿಳೆಯರು ಮುಜುಗರಕ್ಕೀಡಾಗುತ್ತಿದ್ದಾರೆ.

ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವ ಚಾಲಕ, ನಿರ್ವಾಹಕರು ಈ ರೀತಿ ಮಾಡಬಾರದು. ಇಲ್ಲಿನ ಮೂತ್ರಾಲಯ ಸ್ವಚ್ಛವಾಗಿರದ ಕಾರಣ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಬಸ್ ನಿಲ್ದಾಣಕ್ಕೆ ಬರುವವರು ರೋಗ ಹಚ್ಚಿಕೊಂಡು ಹೋಗಬೇಕಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ಮೈಸೂರಿನ ಶೌಚಾಲಯದಲ್ಲಿ ತೃತೀಯ ಲಿಂಗಿಗಳಿಗಳಿಗೂ ಶೌಚಾಲಯ ನಿರ್ಮಿಸಿರುವುದು ರಾಜ್ಯದಲ್ಲಿ ಮೊದಲು. ಆದರೆ ಇಲ್ಲಿ ತೆರಳಲು ಹಲವರು ಹಿಂದೇಟು ಹಾಕುತ್ತಾರೆ. ಇಲ್ಲಿಯೂ ಅಶುಚಿತ್ವ ತಾಂಡವವಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications