ಮೈಸೂರಿಗೆ ತಮಿಳುನಾಡು ಕೊರೊನಾ ಸೋಂಕಿತ ದಂಪತಿ ತಂದಿಟ್ಟ ಆತಂಕ
ಮೈಸೂರು, ಜೂನ್ 14: ಮೈಸೂರಿಗೆ ಬಂದಿದ್ದ ತಮಿಳುನಾಡು ದಂಪತಿಯಿಂದ ಈಗ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಮೈಸೂರಿನಲ್ಲಿ ತಮಿಳುನಾಡಿನಿಂದ ಸಂಬಂಧಿಕರ ಮನೆಗೆ ಬಂದಿದ್ದ ಈ ದಂಪತಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ಜಿಲ್ಲಾಡಳಿತ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ.
ಮೈಸೂರಿಗೆ ಜೂನ್ 6ರಂದು ಬಂದಿದ್ದ ತಮಿಳುನಾಡು ದಂಪತಿ ಇಲ್ಲಿನ ಇಟ್ಟಿಗೆ ಗೂಡಿನಲ್ಲಿರುವ ಹೋಟೆಲ್ ಕೆಫೆಯಲ್ಲಿ ಊಟ ಮಾಡಿದ್ದರು. ಇದೀಗ ಆ ದಂಪತಿಗೆ ಸೋಂಕು ಇರುವುದು ಧೃಡವಾದ ಹಿನ್ನೆಲೆಯಲ್ಲಿ ಹೋಟೆಲನ್ನು ಮುಚ್ಚಲಾಗಿದೆ.
ಕೊರೊನಾ ವೈರಸ್ ಪ್ರಕರಣ ಇನ್ನೂ ಹೆಚ್ಚುತ್ತದೆ; ಮೈಸೂರಿಗರಿಗೆ ಡಿಸಿ ಎಚ್ಚರಿಕೆ
ಈ ಕೊರೊನಾ ವೈರಸ್ ಸೋಂಕಿತ ದಂಪತಿ ಊಟ ಮಾಡಿದ್ದ ಹೋಟೆಲ್ ನಲ್ಲಿ ಊಟ ಮಾಡಿದವರು ಸೆಲ್ಫ್ ಕ್ವಾರಂಟೈನ್ ಆಗಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ಜೂನ್ 6 ರಂದು ಹೋಟೆಲ್ ನಲ್ಲಿ ಊಟ ಮಾಡಿದ್ದ ಎಲ್ಲರೂ ಹದಿನಾಲ್ಕು ದಿನ ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್ ಆಗಬೇಕು, ಆ ವ್ಯಕ್ತಿಗಳು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಬಂದ್ ಆಗಿರುವ ಕೆಫೆ ಮೈಸೂರು ಹೋಟೆಲ್ ಗೆ ಸ್ಯಾನಿಟೈಸ್ ಮಾಡಿದ ನಂತರ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ.
ಜೊತೆಗೆ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಮೈಸೂರು ವರ್ತಕರು ಆತಂಕಗೊಂಡಿದ್ದು, ಅಂಗಡಿಗಳನ್ನು ಬಂದ್ ಮಾಡಲು ಮೈಸೂರು ನಗರದ ವರ್ತಕರು ಸ್ವಯಂ ನಿರ್ಧಾರ ಕೈಗೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ಭಾನುವಾರ ಬಂದ್ ಮಾಡಲಿದ್ದಾರೆ. ವಾಣಿಜ್ಯ ವಹಿವಾಟು ನಿಲ್ಲಿಸಿ ಜಿಲ್ಲಾಡಳಿತಕ್ಕೆ ಸಹಕರಿಸಲು ಮುಂದಾಗಿದ್ದಾರೆ.