ಸ್ವಚ್ಛ ಸರ್ವೇಕ್ಷಣಾ-2020 ಪ್ರಶಸ್ತಿ ಪ್ರಕಟ: ಸಮಗ್ರ ವಿಭಾಗದಲ್ಲಿ ಮೈಸೂರಿಗೆ 5ನೇ ಸ್ಥಾನ
ಮೈಸೂರು, ಆಗಸ್ಟ್ 20: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ-2020 ಪ್ರಶಸ್ತಿ ಪ್ರಕಟಗೊಂಡಿದ್ದು, ಸ್ವಚ್ಛತೆಯಲ್ಲಿ ಮತ್ತೊಮ್ಮೆ ಛಾಪು ಮೂಡಿಸಿರುವ ಸಾಂಸ್ಕೃತಿಕ ನಗರಿ ಮೈಸೂರು ನಗರವು ಸಮಗ್ರ ವಿಭಾಗದಲ್ಲಿ 5ನೇ ಸ್ಥಾನ ಪಡೆದಿದೆ.
ಇನ್ನು ಖುಷಿಯ ವಿಚಾರವೆಂದರೆ 3 ರಿಂದ 10 ಲಕ್ಷ ಜನಸಂಖ್ಯೆಯುಳ್ಳ ವಿಭಾಗದಲ್ಲಿ ಮೈಸೂರು ನಗರವು 5428.31 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದು, ಕರ್ನಾಟಕ ರಾಜ್ಯದ ಹೆಮ್ಮೆಗೆ ಪಾತ್ರವಾಗಿದೆ.
ಸಮಗ್ರ ವಿಭಾಗದಲ್ಲಿ ಮಧ್ಯಪ್ರದೇಶದ ಇಂದೋರ್ ನಗರ ಸತತ ನಾಲ್ಕನೇ ಬಾರಿಗೆ ಪ್ರಥಮ ಸ್ಥಾನ ಪಡೆದಿದ್ದು, ಮೈಸೂರು ನಗರವು 5ನೇ ಸ್ಥಾನ ಪಡೆದಿದೆ. ಮೈಸೂರು ನಗರದ ಅರಮನೆ ಆವರಣದಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಪ್ರದಾನ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಯಿತು.

ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಪ್ರದಾನ ವರ್ಚ್ಯಯಲ್ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗೈರಾದ ಹಿನ್ನೆಲೆಯಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇಶದ ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದರು.
ಮೈಸೂರಿನ ಪೌರ ಕಾರ್ಮಿಕರಾದ ಮಂಜುಳ ಹಾಗೂ ನಂಜುಂಡಸ್ವಾಮಿ ಸಂವಾದದಲ್ಲಿ ಭಾಗವಹಿಸಿದ್ದರು. ಪೌರ ಕಾರ್ಮಿಕರೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಂವಾದ ನಡೆಸಿ, ಮೈಸೂರು ನಗರಿಗೆ ಪ್ರಥಮ ಆದ್ಯತೆ ನೀಡಿದರು.

ಕೇಂದ್ರದ ಸರ್ಕಾರದ ಯಾವ ಯೋಜನೆಯ ಲಾಭ ಪಡೆದಿದ್ದೀರಿ ಅಂತಾ ಕೇಂದ್ರ ಸಚಿವರ ಪ್ರಶ್ನೆಗೆ ಉತ್ತರಿಸಿದ ಪೌರ ಕಾರ್ಮಿಕ ಮಹಿಳೆ ಮಂಜುಳಾ, ಕೇಂದ್ರ ಸರ್ಕಾರದ ಸಾಮೂಹಿಕ ಶೌಚಾಲಯ, ಜನ್ ಧನ್ ಖಾತೆ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆದಿದ್ದೇವೆ ಎನ್ನುವ ಉತ್ತರ ಬಂದಿತು.
ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತೀ ಪೌರ ಕಾರ್ಮಿಕರಿಗೆ 30 ಲಕ್ಷ ರೂ. ವಿಮಾ ಸೌಲಭ್ಯದಿಂದ ಸಂತೃಪ್ತಿಯಾಗಿದ್ದೇವೆ. ಕೊರೊನಾ ಸಂದರ್ಭದಲ್ಲಿ ನಮಗೆ ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು ಬಂದಿದೆ ಎಂದು ಪೌರ ಕಾರ್ಮಿಕ ನಂಜುಂಡಸ್ವಾಮಿ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು.

ನಂತರ ಮತ್ತೆ ಮಾತನಾಡಿದ ಪೌರ ಕಾರ್ಮಿಕ ನಂಜುಂಡಸ್ವಾಮಿ, ಕೊರೊನಾ ವೈರಸ್ ನಿಂದ ಪಾಸಿಟಿವ್ ಆಗಿ ಮತ್ತೆ ಬಂದು ಕೆಲಸ ಮಾಡಿರುವುದಾಗಿ ತಿಳಿಸಿದರು.
ಇದರಿಂದ ಸಂತಸಗೊಂಡ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಮೇಯರ್ ತಸ್ನೀಂ, ಶಾಸಕ ಎಸ್.ಎ ರಾಮದಾಸ್, ಉಪಮೇಯರ್ ಶ್ರೀಧರ್ ನಗರಪಾಲಿಕ ಆರೋಗ್ಯಾಧಿಕಾರಿ ಡಾ. ನಾಗರಾಜ್ ಇನ್ನಿತರರು ಭಾಗವಹಿಸಿದ್ದರು.












Click it and Unblock the Notifications