ಮುರಿದು ಬೀಳುವ ಅಪಾಯದಲ್ಲಿ ಕೊಪ್ಪದ ಕೊಲ್ಲಿ ಸೇತುವೆ
ಮೈಸೂರು, ಆಗಸ್ಟ್ 06 : ಮೊದಲಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗಿವೆ. ರಸ್ತೆಗಳು ಡಾಂಬರು ಕಾಣುತ್ತಿವೆ. ವಾಹನಗಳ ಓಡಾಟವೂ ಹೆಚ್ಚಾಗಿವೆ. ಆದರೆ, ಹಿಂದಿನ ಕಾಲದಲ್ಲಿ ನಿರ್ಮಿಸಲಾಗಿದ್ದ ಸೇತುವೆಗಳು ಇನ್ನೂ ಹಾಗೆಯೇ ಇರುವುದರಿಂದ ಅವು ಶಿಥಿಲಾವಸ್ಥೆಗೆ ತಲುಪಿವೆ.
ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಸಮೀಪದ ಕೊಲ್ಲಿ ಎಂಬಲ್ಲಿನ ಹಳೇಕಾಲದ ಸೇತುವೆ ಬದಲಾವಣೆಗೆ ಗ್ರಾಮಸ್ಥರು ಒತ್ತಾಯುಸುತ್ತಿದ್ದಾರೆ. ಈ ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನ ಓಡಾಡುತ್ತಿದ್ದು, ಮೇಲ್ನೋಟಕ್ಕೆ ಶಿಥಿಲಗೊಂಡಿರುವುದು ಕಾಣುತ್ತಿದೆ. ಭಾರೀ ವಾಹನಗಳು ಓಡಾಡುವಾಗ ಸೇತುವೆ ಒಮ್ಮೆ ಅಲ್ಲಾಡಿದ ಅನುಭವವಾಗುತ್ತಿದೆ.[ಮುಂಬೈ-ಗೋವಾ ಸೇತುವೆ ಧ್ವಂಸ]

ಈ ಸೇತುವೆಯು ಪಿರಿಯಾಪಟ್ಟಣ ತಾಲೂಕಿನ ಕೊಡಗಿನ ಗಡಿಭಾಗದಲ್ಲಿ ಬೈಲುಕುಪ್ಪೆ ಬಳಿಯಿದ್ದು, ಕೊಪ್ಪದಿಂದ ಗೋಲ್ಡನ್ ಟೆಂಪಲ್, ಲಾಮ ಕ್ಯಾಂಪ್, ದೊಡ್ಡಹರವೆ, ಗಿರುಗೂರು, ದೊಡ್ಡಹೊಸೂರು, ರಾಣಿಗೇಟ್ ಮಾರ್ಗವಾಗಿ ತೆರಳುವವರು ಈ ಸೇತುವೆ ಮೂಲಕವೇ ಹಾದು ಹೋಗಬೇಕು.[ಚಿತ್ರಗಳು : ಮೈಸೂರಿನ ರಿಂಗ್ ರೋಡ್ ಲೋಕಾರ್ಪಣೆ]
ಈ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದರೂ ಸೇತುವೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಿರಿದಾಗಿರುವ ಸೇತುವೆ ಶಿಥಿಲಗೊಂಡಿರುವುದರಿಂದ ಎಚ್ಚರಿಕೆಯಿಂದ ವಾಹನಗಳು ಸಾಗಬೇಕಾಗಿದೆ. ದೂರದಿಂದ ಬರುವ ಪ್ರವಾಸಿಗರು ವೇಗವಾಗಿ ವಾಹನ ಚಲಾಲಿಸುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.[ಬೆಂ-ಮೈಸೂರು 6 ಪಥದ ರಸ್ತೆ, ಭೂ ಸ್ವಾಧೀನ ಆರಂಭ]
ಇನ್ನು ಸೇತುವೆಯ ಕೆಳಭಾಗದಲ್ಲಿ ಹೂಳುತುಂಬಿದ್ದು ನೀರು ಹೋಗಲು ಸಾಧ್ಯವಾಗದೆ ಮಳೆಗಾಲದಲ್ಲಿ ಕೆಲವೊಮ್ಮೆ ಸೇತುವೆ ಮೇಲೆ ನೀರು ಹರಿಯುತ್ತಿರುತ್ತದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.
ಕೆಲ ದಿನಗಳ ಹಿಂದೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸೇತುವೆ ಮುರಿದು 22 ಜನರು ನೀರು ಪಾಲಾಗಿದ್ದನ್ನು ನೋಡಿಯಾದರೂ ಈ ಸೇತುವೆಯನ್ನು ಸರಿಪಡಿಸಬೇಕಾಗಿದೆ. [ಮುಂಬೈನಲ್ಲಿ ಸೇತುವೆ ಕುಸಿತ : ಕೊಚ್ಚಿ ಹೋದ ಬಸ್ಸು, ಕಾರು]
ಹಿಂದೆ ಕಾರ್ಮಿಕನೊಬ್ಬ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ದಾಟಲು ಹೋಗಿ ಸಾವನ್ನಪ್ಪಿದ್ದಾರೆ, ಹಸುವೊಂದು ಬಿದ್ದು ಕಾಲುಮುರಿದುಕೊಂಡಿದೆ.

ಸೇತುವೆಯ ಎರಡು ಬದಿ ತಡೆಗೋಡೆಯಾಗಿ ಕಬ್ಬಿಣದ ಸರಳು ಹಾಕಿದ್ದು ಅದು ತುಕ್ಕು ಹಿಡಿದು ಮುರಿದು ಹೋಗಿದೆ. ಇನ್ನಾದರೂ ಸಂಬಂಧಿಸಿದವರು ಈ ಸೇತುವೆಯತ್ತ ಗಮನಹರಿಸಿ ನೂತನ ಸೇತುವೆ ನಿರ್ಮಾಣ ಮಾಡುವತ್ತ ಕ್ರಮ ಕೈಗೊಳ್ಳಬೇಕಾಗಿದೆ.
ಒಂದು ವೇಳೆ ಸೇತುವೆ ಕುಸಿದು ಬಿದ್ದರೆ ಸಂಪರ್ಕವೇ ಕಡಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆಗೆ ಮುಕ್ತಿ ತೋರಿಸಿ, ಹೊಸ ಸೇತುವೆ ನಿರ್ಮಿಸಬೇಕಾಗಿದೆ ಎಂಬುದು ಜನರ ಒತ್ತಾಯವಾಗಿದೆ.












Click it and Unblock the Notifications